×
Ad

ಯುಪಿಎಸ್ಸಿ ಪಾಸಾದ ನವೀನ್ ಭಟ್ ರಿಗೆ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಸನ್ಮಾನ

Update: 2017-06-02 23:09 IST

ಬಂಟ್ವಾಳ, ಜೂ. 2: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಕಡು ಬಡತನ ಇಲ್ಲ. ವಿದ್ಯಾಭ್ಯಾಸ ವ್ಯವಸ್ಥೆಯೂ ಎಂಜಿನಿಯರಿಂಗ್, ಮೆಡಿಕಲ್ ಪ್ರೇರೇಪಣೆ ಒದಗಿಸುವುದರೊಂದಿಗೆ ಇಲ್ಲಿನ ಜನರ ಮನೋಸ್ಥಿತಿಯು ಸಿವಿಲ್ ಸರ್ವೀಸ್ ಕಡೆಗೆ ವಾಲುತ್ತಿಲ್ಲ ಎಂದು ಯುಪಿಎಸ್ಸಿ ಪರೀಕ್ಷೆಯಲ್ಲಿ 37ನೆ ಸ್ಥಾನ ಪಡೆದ ಬಂಟ್ವಾಳದ ನವೀನ್ ಭಟ್ ಹೇಳಿದ್ದಾರೆ.

ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಬಳಿಕ ಬೆಂಗಳೂರಿನಿಂದ ಬಂಟ್ವಾಳದ ತನ್ನ ಮನೆಗೆ ಆಗಮಿಸಿದ ನವೀನ್ ಭಟ್ ಶುಕ್ರವಾರ ಮಧ್ಯಾಹ್ನ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮದವರೊಂದಿಗೆ ಮಾತುಕತೆ ನಡೆಸಿ ಪರೀಕ್ಷೆಯ ಅನುಭವಗಳನ್ನು ಹಂಚಿಕೊಂಡರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಇಟಿ ತರಬೇತಿ ಸಹಿತ ವಿವಿಧ ಕೋಚಿಂಗ್ ಸೆಂಟರ್‌ಗಳಿವೆ. ಆದರೆ ಐಎಎಸ್, ಕೆಎಎಸ್ ಕೋಚಿಂಗ್ ಸೆಂಟರ್ ಇಲ್ಲ. ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಕಡಿಮೆ. ಹೀಗಾಗಿ ಇಲ್ಲಿನವರು ಸಿವಿಲ್ ಸರ್ವೀಸ್ ಕಡೆಗೆ ಹೆಚ್ಚು ಆಸಕ್ತಿ ಹೊಂದಿರುವುದಿಲ್ಲ. ನಿಯಮಿತವಾದ ಓದು, ಸಮಕಾಲೀನ ವಿದ್ಯಮಾನಗಳ ಅರಿವು, ಪ್ರತಿಯೊಂದು ವಿಷಯಗಳ ಕಡೆಗಿನ ಆಸಕ್ತಿ, ಜನಸಾಮಾನ್ಯರೊಂದಿಗೆ ಬೆರೆಯುವುದನ್ನು ನಾವು ಮಾಡಿದರೆ ಸಿವಿಲ್ ಸರ್ವೀಸ್‌ಗೆ ಸೇರುವ ಆಸಕ್ತಿಯೂ ಮೂಡುತ್ತದೆ. ಆರನೇ ತರಗತಿಯಿಂದಲೇ ಈ ಕೆಲಸವನ್ನು ನಾವು ಮಾಡಬಹುದು ಎಂದು ನವೀನ್ ಸಲಹೆ ನೀಡಿದರು.

ಎಲ್ಲ ವೃತ್ತಿಗಳಲ್ಲಿ ಅಭದ್ರತೆ ಇದೆ. ಆದರೆ ಸವಾಲುಗಳನ್ನು ಎದುರಿಸಿಕೊಂಡು ಮುನ್ನಡೆಯಬೇಕು. ವೈದ್ಯನಾಗುವುದೂ ಜನಸೇವೆಗೆ. ಐಎಎಸ್ ಅಧಿಕಾರಿಯಾಗುವುದೂ ಜನಸೇವೆಗೆ. ಅವುಗಳಲ್ಲಿ ಸಿವಿಲ್ ಸರ್ವೀಸ್‌ಗೆ ಸೇರಿದರೆ ಹೆಚ್ಚು ಜನರ ಸಂಪರ್ಕ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ನಾನು ಇದನ್ನು ಆಯ್ಕೆ ಮಾಡಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜನಸಾಮಾನ್ಯರ ನಡುವೆ ಬೆರೆತು ಅವರ ಕಷ್ಟಗಳಿಗೆ ಸ್ಪಂದಿಸುವ ಅವಕಾಶ ದೊರಕಿತು. ನನಗೆ ನನ್ನ ತಂದೆಯವರೇ ರೋಲ್ ಮಾಡೆಲ್. ಅವರು ಜನರೊಂದಿಗೆ ಸ್ಪಂದಿಸುವ ಪರಿ, ಕೆಲಸದ ಬಗ್ಗೆ ಹೊಂದಿರುವ ಶ್ರದ್ಧೆ ನನಗೆ ಸಿವಿಲ್ ಸರ್ವೀಸ್ ಕಡೆಗೆ ಹೆಚ್ಚು ಆಸಕ್ತಿ ಮೂಡುವಂತೆ ಮಾಡಿತು. ಎಂಬಿಬಿಎಸ್ ಕಲಿಕೆಗೆ ಸೇರಿದಾಗಲೇ ಇದಕ್ಕೆ ತಯಾರಿಗಳನ್ನು ಮಾಡಿಕೊಂಡೆ ಎಂದರು

ನಾನು ಪಾಸ್ ಆಗುತ್ತೇನೆ ಎಂಬ ಆತ್ಮವಿಶ್ವಾಸ ಇರಲೇಬೇಕು. ಇದರ ಜೊತೆಗೆ ಮಾರ್ಗದರ್ಶನವೂ ಸೂಕ್ತ ಕ್ರಮದಲ್ಲಿ ದೊರಕಬೇಕು. ನಾನು ದಿನಕ್ಕೆ ಐದರಿಂದ ಆರು ಗಂಟೆ ಓದುತ್ತಿದ್ದೆ. ಇದರ ತಯಾರಿ ಮಾಡುವುದು ಎಂದರೆ ಕಣ್ರೆಪ್ಪೆ ಮುಚ್ಚದೆ ಓದುತ್ತಾ ಇರುವುದಲ್ಲ. ಸಹಜವಾಗಿಯೇ ಇದ್ದು, ವಿಷಯಗಳ ಬಗ್ಗೆ ಮನಮುಟ್ಟುವಂತೆ ಅಧ್ಯಯನ ಕೈಗೊಳ್ಳುವುದು ಹಾಗೂ ಗುಂಪು ಚರ್ಚೆಯಂಥ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚು ಜ್ಞಾನ ಸಂಪಾದನೆ ಸಾಧ್ಯ ಎಂದು ತನ್ನ ಅನುಭವ ಹೇಳಿದರು.

ನವೀನ್ ಭಟ್‌ರನ್ನು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ, ಪ್ರೆಸ್‌ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕೋಶಾಧಿಕಾರಿ ವೆಂಕಟೇಶ ಬಂಟ್ವಾಳ, ಹರೀಶ ಮಾಂಬಾಡಿ, ಸಂದೀಪ್ ಸಾಲ್ಯಾನ್, ಕಿಶೋರ್ ಪೆರಾಜೆ, ಇಮ್ತಿಯಾಝ್ ಶಾ ತುಂಬೆ, ಚಂದ್ರಶೇಖರ ಕಲ್ಮಲೆ ಮತ್ತು ಜಯಾನಂದ ಪೆರಾಜೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News