ಹೆಲ್ಮೆಟ್ ಧರಿಸದಿದ್ದರೆ ಪೋಟೊ ತೆಗೆದು ವಾಟ್ಸ್ಆ್ಯಪ್ಗೆ ಕಳುಹಿಸಿ: ಡಿಸಿಪಿ ಶಾಂತರಾಜು
ಮಂಗಳೂರು, ಜೂ. 3: ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸದೆ ತ್ರಿಬಲ್ ರೈಡ್ ಮಾಡಿದರೆ ತಕ್ಷಣ ಅದರ ಫೋಟೊ ತೆಗೆದು ‘ಕುಡ್ಲ ವಾಟ್ಸಪ್’ ಗ್ರೂಪ್ಗೆ (ನಂ. 9480802312) ಕಳುಹಿಸುವಂತೆ ಡಿಸಿಪಿ ಕೆ.ಎಂ.ಶಾಂತರಾಜು ಸೂಚಿಸಿದರು.
ಮಂಗಳೂರು ಕಮಿಷನರ್ ಕಚೇರಿಯಲ್ಲಿ ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರಿಗೆ ಪ್ರತಿಕ್ರಿಯಿಸಿದ ಅವರು ಈಗಾಗಲೆ ಹೆಲ್ಮೆಟ್ ಧರಿಸದ ಬಗ್ಗೆ ಕ್ರಮ ಜರಗಿಸಲಾಗುತ್ತಿದೆ. ಆದರೂ ನಿಯಮ ಉಲ್ಲಂಘಿಸುವುದು ಬೆಳಕಿಗೆ ಬರುತ್ತಿದೆ. ಆ ಹಿನ್ನಲೆಯಲ್ಲಿ ಹೆಲ್ಮೆಟ್ ಧರಿಸದೆ ಸಂಚಾರ ಮಾಡುವುದನ್ನು ಕಂಡ ತಕ್ಷಣ ಪೋಟೋ ತೆಗೆದು ವಾಟ್ಸ್ಆ್ಯಪ್ಗೆ ಕಳುಹಿಸಿದರೆ ಕ್ರಮ ಜರಗಿಸಲಾಗುವುದು ಎಂದರು.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ರಿಕ್ಷಾ ಚಾಲಕರು ಅಧಿಕ ಬಾಡಿಗೆ ದರ ವಸೂಲಿ ಮಾಡಲಾಗುತ್ತಿದೆ, ಏಕ ಮುಖ ರಸ್ತೆಯಲ್ಲಿ ನಿಯಮ ಉಲ್ಲಂಸಿ ವಿರುದ್ಧ ದಿಕ್ಕಿನಿಂದಲೂ ವಾಹನ ಚಾಲನೆ ಮಾಡಲಾಗುತ್ತಿದೆ, ನಂತೂರು-ಪಂಪ್ವೆಲ್ ರಸ್ತೆಯ ಗ್ಯಾರೇಜ್ ಬಳಿ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ತೆರವುಗೊಳಿಸಬೇಕು, ಕಲ್ಲು ಮತ್ತು ಮಣ್ಣು ಸಾಗಿಸುವ ಕೆಲವು ವಾಹನಗಳು ಹಿಂಬದಿಯಲ್ಲಿ ಮುಚ್ಚಳವಿಲ್ಲದೆ ಸಾಗಾಟ ಮಾಡಲಾಗುತ್ತಿದೆ, ವಿದ್ಯುತ್ ತಂತಿಗೆ ತಗಲುತ್ತಿರುವ ಮರಗಳ ಗೆಲ್ಲು ಕಡಿಯಬೇಕು, ಕಂಕನಾಡಿ ಗರೋಡಿ ಬಳಿಯ ಸಮೃದ್ಧಿ ಹಾಲ್ ಎದುರು ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಬ್ಯಾರಿಕೇಡ್ ಅಳವಡಿಸಬೇಕು, ಕಾವೂರು-ಕೂಳೂರು ರಸ್ತೆಯಲ್ಲಿ ಫೂಟ್ಪಾತ್ ವ್ಯವಸ್ಥೆ ಕಲ್ಪಿಸಬೇಕು, ಬಸ್ಸಿನಲ್ಲಿ ಹಿರಿಯ ನಾಗರಿಕರ ಸೀಟಿನಲ್ಲಿ ಹುಡುಗರು ಕುಳಿತು ಪ್ರಯಾಣಿಸುತ್ತಿರುವ ಕುರಿತು ಕ್ರಮ ಜರಗಿಸಬೇಕು ಎಂಬ ಬೇಡಿಕೆಗಳು ಬಂದವು.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ರಿಕ್ಷಾ ಪ್ರೀಪೇಯ್ಡಾ ಕೌಂಟರ್ ಪುನರಾರಂಭಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಶೀಘ್ರ ಅದು ಕಾರ್ಯಗತಗೊಳ್ಳುವ ಸಾಧ್ಯತೆ ಇದೆ ಎಂದ ಡಿಸಿಪಿ, ಹಂಪನಕಟ್ಟೆ ಮಿಲಾಗ್ರಿಸ್ ಕ್ರಾಸ್ ರಸ್ತೆಯಲ್ಲಿ ಏಕ ಮುಖ ರಸ್ತೆಯಲ್ಲಿ ನಿಯಮ ಉಲ್ಲಂಸಿ ವಾಹನ ಸಂಚರಿಸುತ್ತಿರುವ ಬಗ್ಗೆ ತಪಾಸಣೆ ನಡೆಸಿ ಕ್ರಮ ಜರಗಿಸಲಾಗುವುದು ಡಿಸಿಪಿ ಶಾಂತರಾಜು ಹೇಳಿದರು.
ಕದ್ರಿ- ಮಲ್ಲಿಕಟ್ಟೆ ರೂಟ್ನ ಕೆಲವು ಬಸ್ಸುಗಳು ಮಲ್ಲಿಕಟ್ಟೆ ಪ್ರವೇಶಿಸಿಸದೆ ಹೊರಗಿನಿಂದ ಸಂಚರಿಸುತ್ತಿರುವ ದೂರಿಗೆ ಪ್ರತಿಕ್ರಿಯಿಸಿದ ಎಸಿಪಿ ತಿಲಕ್ಚಂದ್ರ, ಈ ಬಗ್ಗೆ ಈಗಾಗಲೇ ಕ್ರಮ ಜರಗಿಸಲಾಗಿದೆ. ಈಗಲೂ ಮಲ್ಲಿಕಟ್ಟೆಗೆ ಹೋಗದ ಬಸ್ಸುಗಳಿದ್ದರೆ ಅದರ ರಿಜಿಸ್ಟ್ರೇಶನ್ ನಂಬ್ರ ಸಮೇತ ಕುಡ್ಲ ಟ್ರಾಫಿಕ್ಗೆ ತಿಳಿಸುವಂತೆ ಕೋರಿದರು.
ವಾಮಂಜೂರು- ಮಂಗಳಜ್ಯೋತಿ ನಡುವಣ ಅರ್ಧ ಕಿ. ಮೀ. ವ್ಯಾಪ್ತಿಯಲ್ಲಿ 8 ಶಾಲೆಗಳಿವೆ. ಇಲ್ಲಿನ ರಸ್ತೆಯಲ್ಲಿ ಒಂದೇ ಒಂದು ಹಂಪ್ ಇಲ್ಲ. ವಾಹನಗಳು ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ರಸ್ತೆ ದಾಟಲು ಕಷ್ಟವಾಗಿದೆ ಎಂದು ವ್ಯಕ್ತಿಯೊಬ್ಬರು ದೂರಿದರು.
ಇದಕ್ಕೆ ಉತ್ತರಿಸಿದ ಡಿಸಿಪಿ ಶಾಂತರಾಜು ರಸ್ತೆಗೆ ಹಂಪ್ ಹಾಕಲು ಕೆಲವೊಂದು ನಿಯಮಗಳಿವೆ. ಆದ್ದರಿಂದ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಉರ್ವ ಮಾರ್ಕೆಟ್ನಿಂದ ಉರ್ವ ಮಾರಿಯಮ್ಮ ದೇವಸ್ಥಾನವರೆಗಿನ ರಸ್ತೆಯನ್ನು ನೋ ಪಾರ್ಕಿಂಗ್ ರೆನ್ ಮಾಡಬೇಕು, ಬಿಜೈ ಚರ್ಚ್ ಎದುರಿನ ವೃತ್ತದಲ್ಲಿ ಬಸ್ ನಿಲ್ಲುವಾಗ ಟ್ರಾಫಿಕ್ ಜಾಮ್, ಎಯ್ಯಾಡಿ- ಬೋಂದೆಲ್ ರಸ್ತೆಯಲ್ಲಿ ವಾಹನಗಳು ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿವೆ ಹಾಗೂ ಅಲ್ಲಲ್ಲಿ ವಾಹನ ಪಾರ್ಕಿಂಗ್ ಮಾಡಿರುವುದರಿಂದ ರಸ್ತೆ ದಾಟಲು ಕಷ್ಟವಾಗುತ್ತಿರುವ ಬಗ್ಗೆ ಸಾರ್ವಜನಿಕರು ಪೊಲೀಸ್ ಇಲಾಖೆಯ ಗಮನಕ್ಕೆ ತಂದರು.
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕಾಂಕ್ರಿಟ್ ಮಿಕ್ಸಿಂಗ್ ವಾಹನಗಳು ಕಾಂಕ್ರಿಟ್ ನೀರನ್ನು ರಸ್ತೆಯುದ್ದಕ್ಕೂ ಚೆಲ್ಲುತ್ತಾ ಸಂಚರಿಸುತ್ತಿರುವ ಬಗ್ಗೆ ದೂರಿದರು.ಜೋಕಟ್ಟೆ ರೈಲ್ವೆ ಗೇಟ್ನ ಅಕ್ಕ ಪಕ್ಕದಲ್ಲಿ ತಡೆ ಬೇಲಿ ಹಾಕಿ ಜನರು ನೇರವಾಗಿ ರೈಲು ಹಳಿ ಕಡೆಗೆ ಹೋಗದಂತೆ ವ್ಯವಸ್ಥೆ ಮಾಡ ಬೇಕು ಎಂಬ ಮನವಿಗೆ ಸ್ಪಂದಿಸಿದ ಎಸಿಪಿ ಈ ಬಗ್ಗೆ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು.
ಮುಲ್ಕಿ ಕಾರ್ನಾಡುವಿನಲ್ಲಿ ಶನಿವಾರ ಸಂತೆಯ ಸಂದರ್ಭ ವಾಹನ ಪಾರ್ಕಿಂಗ್ ಅವ್ಯವಸ್ಥೆಯಿಂದ ರಸ್ತೆ ಬದಿ ನಡೆದಾಡಲು ಕೂಡಾ ಕಷ್ಟವಾಗುತ್ತಿರುವ ಬಗ್ಗೆ ಸ್ಪಂದಿಸಿದ ಎಸಿಪಿ, ಈ ಬಗ್ಗೆ ಸಂತೆಯ ದಿನ ಅಲ್ಲಿಗೆ ಪೊಲೀಸರನ್ನು ಕಳುಹಿಸಿಕೊಡಲಾಗುವುದು ಎಂದರು.
ಕದ್ರಿ ರಸ್ತೆಯಲ್ಲಿರುವ ಎಂ.ವಿ. ಶಾಸ್ತ್ರಿ ಸ್ಮಾರಕ ಬಸ್ ಶೆಲ್ಟರ್ ಈಗ ಉಪಯೋಗಿಸದ ಕಾರಣ ಅದನ್ನು ಕೆಡಹಿ ಅಲ್ಲಿ ವಾಹನ ಪಾರ್ಕಿಂಗ್ಗೆ ಅವಕಾಶ ಕಲ್ಪಿಸ ಬಹುದೆಂದು ಸಾರ್ವಜನಿಕರು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಶಾಂತರಾಜು ಸಂಚಾರ ಪೊಲೀಸರು ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಜರಗಿಸುವರು ಎಂದು ಭರವಸೆ ನೀಡಿದರು.
ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಎದುರಿನ ರಿಕ್ಷಾ ಪಾರ್ಕಿಂಗ್ ಬಳಿ ಇರುವ ಮರದ ಗೆಲ್ಲು ಒಣಗಿದ್ದು, ಅಪಾಯಕಾರಿಗಿ ಬೀಳುವ ಸ್ಥಿತಿಯಲ್ಲಿದೆ ಎಂದು ಸಾರ್ವಜನಿಕರು ತಿಳಿಸಿದರು.
ಅರಣ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಬರೆದು ರಸ್ತೆ ಬದಿ ಅಪಾಯಕಾರಿ ಸ್ಥಿತಿಯಲ್ಲಿರುವ ಎಲ್ಲ ಮರಗಳ ಗೆಲ್ಲುಗಳನ್ನು ಕಡಿಯುವಂತೆ ಸೂಚಿಸಲಾಗುವುದು ಎಂದು ಡಿಸಿಪಿ ವಿವರಿಸಿದರು.
ಬೋಂದೆಲ್ ಜಂಕ್ಷನ್, ಕುದುರೆಮುಖ ಕಾಲನಿ ಮತ್ತು ಕೆಎಚ್ಬಿ ಕಾಲನಿ ಬಳಿ ಸೂಚನಾ ಲಕ ಮತ್ತು ರಸ್ತೆಗೆ ಝೀಬ್ರಾ ಕ್ರಾಸ್ ಅಳವಡಿಸಬೇಕು ಎಂಬ ದೂರುಗಳಿಗೆ ಸ್ಪಂದಿಸಿದ ಡಿಸಿಪಿ ಈ ಬಗ್ಗೆ ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗುವುದು ಎಂದರು.
ಸಿಸಿಆರ್ಬಿ ಎಎಸ್ಸೈ ಸುದರ್ಶನ್, ಹೆಡ್ಕಾನ್ಸ್ಟೆಬಲ್ ಪುರುಷೋತ್ತಮ ಉಪಸ್ಥಿತರಿದ್ದರು.