ಮರಳು ಸಾಗಾಟದ ಲಾರಿಗಳ ವಶ: ವಾರಂಟ್ ಆರೋಪಿ ಸಹಿತ ಮೂವರ ಬಂಧನ
Update: 2017-06-07 18:21 IST
ಮಂಜೇಶ್ವರ, ಜೂ. 7: ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ಬದಿಯಡ್ಕ ಪೊಲೀಸರು ವಶಪಡಿಸಿಕೊಂಡು ವಾರಂಟ್ ಆರೋಪಿ ಸಹಿತ ಮೂವರನ್ನು ಬಂಧಿಸಿದ್ದಾರೆ.
ನೀರ್ಚಾಲು ಹಾಗೂ ಮಾನ್ಯ ಮುಂಡೋಡಿನಿಂದ ಮರಳು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಲಾರಿ ಚಾಲಕ ಬಂಟ್ವಾಳ ನಿವಾಸಿ ಝೈನುಲ್ ಅಹ್ಮದ್ (20), ಮುಂಡೋಡಿನಿಂದ ವಶಪಡಿಸಿದ ಲಾರಿ ಚಾಲಕ ದೇರಳಕಟ್ಟೆಯ ಇಬ್ರಾಹಿಂ ಖಲೀಲ್ (20) ಲಾರಿಗಳಿಗೆ ಬೆಂಗಾವಲಾಗಿ ಸಂಚರಿಸುತ್ತಿದ್ದ ಪೆರ್ಮುದೆ ನಿವಾಸಿ ಬಷೀರ್ ಮುಬಾರಕ್ (28) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಬಷೀರ್ ಮುಬಾರಕ್ 2016ರಲ್ಲಿ ಧರ್ಮತ್ತಡ್ಕದಲ್ಲಿ ನಡೆದ ಗುಂಪು ಗಲಭೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ನ್ಯಾಯಾಲ ಯದಿಂದ ಜಾಮೀನು ಪಡೆದು ತಲೆಮರೆಸಿಕೊಂಡಿದ್ದನು ಎನ್ನಲಾಗಿದ್ದು, ಈತನ ವಿರುದ್ಧ ವಾರಂಟ್ ಜಾರಿಗೊಳಿಸಲಾಗಿತ್ತು.