ಉಷ್ಣಮಾರುತ: ಭಾರತಕ್ಕೆ ಕಾದಿದೆ ಅಪಾಯ ಅಮೆರಿಕನ್ ವಿಜ್ಞಾನಿಗಳ ಎಚ್ಚರಿಕೆ

Update: 2017-06-08 15:05 GMT

  ಲಂಡನ್,ಜೂ.8: ಭಾರತದಲ್ಲಿ ಕಡುಬೇಸಿಗೆಯಲ್ಲಿ ಬಿಸಿಗಾಳಿಯ ಪ್ರಕೋಪಕ್ಕೆ ಬಲಿಯಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು, ಮುಂದೆ ಇನ್ನಷ್ಟು ಅಪಾಯ ಕಾದಿರುವ ಮುನ್ಸೂಚನೆಯಾಗಿದೆಯೆಂದು ಅಮೆರಿಕದ ವಿಜ್ಞಾನಿಗಳು ಬುಧವಾರ ಎಚ್ಚರಿಕೆ ನೀಡಿದ್ದಾರೆ.

ಕಳೆದ 50 ವರ್ಷಗಳಲ್ಲಿ ಭಾರತದ ಸರಾಸರಿ ತಾಪಮಾನದಲ್ಲಿ 0.5ರಷ್ಟು ಏರಿಕೆಯಾಗಿದ್ದರಿಂದ, ಉಷ್ಣಮಾರುತದ ತಾಪಮಾನದಲ್ಲಿ ಶೇ.150ರಷ್ಟು ಹೆಚ್ಚಳವಾಗಿದ್ದು, ಇದರಿಂದ ಪ್ರತಿವರ್ಷ 100ಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆಂದು ಇರ್ವಿನ್‌ನಲ್ಲಿರುವ ಕ್ಯಾಲಿಫೋರ್ನಿಯಾ ವಿವಿಯ ಸಂಶೋಧಕರು ತಿಳಿಸಿದ್ದಾರೆ.

   ಈ ಶತಮಾನದ ಅಂತ್ಯದೊಳಗೆ ಭಾರತದ ತಾಪಮಾನದಲ್ಲಿ 2.2ರಿಂದ 5.5 ಡಿಗ್ರಿಯವರೆಗೆ ಏರಿಕೆಯಾಗಲಿದ್ದು, ಇದರಿಂದಾಗಿ ಭಾರತ ಸೇರಿದಂತೆ ಏಶ್ಯದ ಇತರ ರಾಷ್ಟ್ರಗಳಲ್ಲಿ ಉಷ್ಣಮಾರುತಕ್ಕೆ ಬಲಿಯಾಗುವವರ ಸಂಖ್ಯೆಯಲ್ಲೂ ಭಾರೀ ಹೆಚ್ಚಳವಾಗಲಿದೆಯೆಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ.

‘‘ತಾಪಮಾನದಲ್ಲಾಗುವ ಸಾಧಾರಣ ಏರಿಕೆಯಿಂದಾಗಿ ಸಂಭವಿಸುವ ಸಾಮೂಹಿಕ ಸಾವಿನ ಸನ್ನಿವೇಶಗಳಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆಯನ್ನು ಅರಿತು ನಾನು ದಿಗ್ಭ್ರಾಂತಗೊಂಡಿದ್ದೇನೆ’’ ಎಂದು ಕ್ಯಾಲಿಫೋರ್ನಿಯಾ ವಿವಿಯ ಭೂ ವಿಜ್ಞಾನ ವಿಭಾಗದ ವರಿಷ್ಠ ಸ್ಟೀವನ್ ಜೆ.ಡೇವಿಸ್ ಅವರು ‘ಸಯನ್ಸ್ ಅಡ್ವಾನ್ಸಸ್’ ಪತ್ರಿಕೆಯಲ್ಲಿ ಪ್ರಕಟಿಸಿದ ವರದಿಯೊಂದರಲ್ಲಿ ತಿಳಿಸಿದ್ದಾರೆ.

   ತಾಪಮಾನದಲ್ಲಿ ಸಣ್ಣ ಮಟ್ಟದ ಏರಿಕೆಯಾದರೂ, ಉಷ್ಣಮಾರುತದಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಲಿದೆಯೆಂದು, ಜೆ.ಡೇವಿಸ್ ಅವರು ಥಾಮ್ಸನ್ ರಾಯ್ಟರ್ಸ್‌ ಪ್ರತಿಷ್ಠಾನಕ್ಕೆ ದೂರವಾಣಿ ಮೂಲಕ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

   ‘‘ಈ ಶತಮಾನದ ಅಂತ್ಯದೊಳಗೆ ಜಗತ್ತಿನಾದ್ಯಂತ ತಾಪಮಾನ ಏರಿಕೆಯಾಗಲಿದೆಯಾದರೂ, ಭಾರತ ಉಪಖಂಡ, ಮಧ್ಯಪ್ರಾಚ್ಯ,ಆಫ್ರಿಕ ಹಾಗೂ ದಕ್ಷಿಣ ಅಮೆರಿಕದ ರಾಷ್ಟ್ರಗಳಲ್ಲಿ ಬೇಸಿಗೆಯ ತಿಂಗಳುಗಳಲ್ಲಿ ವಾಸಿಸುವುದೇ ದುಸ್ತರವಾಗಲಿದೆ’’ ಎಂದವರು ಹೇಳಿದ್ದಾರೆ. ಭಾರತದಲ್ಲಿ 1960 ಹಾಗೂ 2009ರ ನಡುವೆ ಉಷ್ಣಮಾರುತದಿಂದ ಸಂಭವಿಸಿದ ಸಾವಿನ ಪ್ರಕರಣಗಳ ಕಬಿಸಿಗಾಳಿಗೆ ಕುರಿತ ದತ್ತಾಂಶಗಳನ್ನು ಆಧರಿಸಿ ಈ ಅಧ್ಯಯನವನ್ನು ನಡೆಸಲಾಗಿದೆ.

   ಭಾರತದಲ್ಲಿ 2009ರಲ್ಲಿ 1300 ಮಂದಿ ಬಲಿಯಾದರೆ, 2010ರಲ್ಲಿ 1300, 2013ರಲ್ಲಿ 1500 ಹಾಗೂ 2015ರಲ್ಲಿ 2500 ಮಂದಿ ಅಸುನೀಗಿದ್ದಾರೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಉಷ್ಣಮಾರುತದಿಂದ ಸಂಭವಿಸುವ ಅನೇಕ ಸಾವಿನ ಪ್ರಕರಣಗಳನ್ನು ದಾಖಲಿಸದೆ ಇರುವ ಸಾಧ್ಯತೆಯಿದೆ. ಹೀಗಾಗಿ ಭಾರತದಲ್ಲಿ ಬಿಸಿಗಾಳಿಗೆ ಬಲಿಯಾಗುವ ನೈಜ ಸಂಖ್ಯೆ ಇನ್ನೂ ಅಧಿಕವಿರಬಹುದೆಂದು ಸಂಶೋಧಕರು ಶಂಕಿಸಿದ್ದಾರೆ.

 ಉಷ್ಣಮಾರುತದಿಂದ ವಿಶೇಷವಾಗಿ ಬಡಜನರೇ ಅತ್ಯಧಿಕವಾಗಿ ಬಾಧಿತರಾಗುತ್ತಾರೆಂದು ಅಮೆರಿಕದ ವಿಜ್ಞಾನಿಗಳು ಗಮನಸೆಳೆಯಜುತ್ದಾರೆ. ಬಿಸಿಗಾಳಿಯಿಂದಾಗಿ ಶುದ್ಧವಾದ ನೀರು ಹಾಗೂ ಆಶ್ರಯವನ್ನು ಪಡೆಯಲು ಬಡವರು ಪರದಾಡುವಂತಹ ಪರಿಸ್ಥಿತಿಯುಂಟಾಗುವುದೇ ಇದಕ್ಕೆ ಕಾರಣವೆಂದವರು ಹೇಳುತ್ತಾರೆ.

ಇತ್ತೀಚೆಗೆ ಒಡಿಶಾ ಹಾಗೂ ಗುಜರಾತ್ ರಾಜ್ಯಗಳಲ್ಲಿ ಇತ್ತೀಚೆಗೆ ಬೀಸಿದ ಬಿಸಿಗಾಳಿಗೆ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News