×
Ad

ಪ್ರೊ.ಗಿರಡ್ಡಿ ಗೋವಿಂದರಾಜ್‌ಗೆ ‘ಸೇಡಿಯಾಪು ಪ್ರಶಸ್ತಿ’ ಪ್ರದಾನ

Update: 2017-06-08 22:03 IST

 ಉಡುಪಿ, ಜೂ.8: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಹಿರಿಯ ಲೇಖಕ ಮತ್ತು ವಿಮರ್ಶಕ ಪ್ರೊ.ಗಿರಡ್ಡಿ ಗೋವಿಂದರಾಜ್ ಅವರಿಗೆ ‘ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿ’ಯನ್ನು ಗುರುವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಿರಡ್ಡಿ ಗೋವಿಂದರಾಜ್, ಕರಾವಳಿಯಲ್ಲಿ ಸಾಹಿತ್ಯ ಪರಿಸರ ಎಂಬುದು ಯಕ್ಷಗಾನ ಪರಿಸರ. ಈ ಕಲೆಯು ಗ್ರಾಮೀಣ ಭಾಗದಲ್ಲೂ ವಿಸ್ತರಿಸಿಕೊಂಡಿದೆ. ಹೀಗಾಗಿ ಯಕ್ಷಗಾನದ ಮೂಲಕ ಸಾಕಷ್ಟು ಜ್ಞಾನವನ್ನು ಸಂಪಾದಿಸಿಕೊಳ್ಳಲಾಗುತ್ತದೆ. ಇಂದು ನಾವು ಪರಿಭಾಷಿಕ ಭಾಷೆ ಗಳನ್ನು ಕಳೆದುಕೊಂಡಿದ್ದೇವೆ. ಅದರ ಬಗ್ಗೆ ಚರ್ಚೆಯೇ ನಡೆಸುತ್ತಿಲ್ಲ ಎಂದರು.

ಆರ್ಯರು ವಿದೇಶದಿಂದ ಬಂದವರಲ್ಲ. ಅವರು ಇಲ್ಲಿಯವರೇ. ಆರ್ಯ ಎಂಬುದು ಜನಾಂಗ ವಾಚಕ ಶಬ್ದ ಅಲ್ಲ. ಅದು ದೇಶ ವಾಚಕ ಶಬ್ದ ಎಂದು ಸೇಡಿಯಾಪು ಅವರು ವಾದ ಮಂಡಿಸಿದ್ದರು. ಅವರು ರಾಜಕೀಯಕ್ಕೆ ಹೋಗದೆ ತನ್ನದೇ ಆದ ವಿಚಾರವನ್ನು ಹೇಳುತ್ತಿದ್ದರು ಎಂದ ಅವರು, ತನ್ನ ಕಣ್ಣಿನ ದೃಷ್ಠಿ ಕಳೆದುಕೊಂಡ ನಂತರವೂ ಅವರು ಇತರರೊಂದಿಗೆ ತನ್ನ ವಿಚಾರವನ್ನು ಹೇಳಿ ಬರೆಸುತ್ತಿದ್ದರು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಸಂಸ್ಕೃತಿ ಚಿಂತಕ ಡಾ.ಏರ್ಯ ಲಕ್ಷ್ಮಿನಾರಾಯಣ ಆಳ್ವ ವಹಿಸಿದ್ದರು. ಹಿರಿಯ ವಿದ್ವಾಂಸ ಪ್ರೊ.ತಾಳ್ತಜೆ ವಸಂತಕುಮಾರ್ ಅಭಿನಂದನಾ ಉಪನ್ಯಾಸ ಮಾಡಿದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಮ್ ಉಪಸ್ಥಿತರಿದ್ದರು.
ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ವರದೇಶ ಹಿರೇಗಂಗೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಸಂಯೋಜನಾಧಿಕಾರಿ ಡಾ.ಅಶೋಕ್ ಆಳ್ವ ವಂದಿಸಿದರು. ಸುಪ್ರೀತಾ ಡಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಉಡುಪಿ ಸಮೂಹ ಕಲಾವಿದರಿಂದ ಸೇಡಿಯಾಪು ಕಥನ- ಕವನ ‘ಪುಣ್ಯಲಹರಿ’ ಆಧರಿಸಿದ ನೃತ್ಯರೂಪಕ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News