ಪುತ್ತೂರು ತಾ.ಪಂ.ನಲ್ಲಿ ರೂ. 63. 96 ಕೋಟಿ ಅನುದಾನ ವಿನಿಯೋಗ- ಭವಾನಿ ಚಿದಾನಂದ
ಪುತ್ತೂರು, ಜೂ. 8: 2016-17ನೇ ಸಾಲಿನಲ್ಲಿ ತಾ.ಪಂ.ಗೆ ಸರಕಾರದಿಂದ ಒಟ್ಟು 66 ಕೋಟಿ 19 ಲಕ್ಷ 65 ಸಾವಿರ ರೂ. ಅನುದಾನ ಬಂದಿದ್ದು, ಈ ಪೈಕಿ 63,96,44,300 ರೂ. ಖರ್ಚು ಮಾಡಲಾಗಿದೆ ಎಂದು ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲಿ ಮಾತನಾಡಿ ತನ್ನ ಆಡಳಿತ ಅವಧಿಯ ಪ್ರಥಮ ವರ್ಷ ಪೂರ್ಣಗೊಂಡಿದ್ದು, ಈ ಅವಧಿಯಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಸರ್ಕಾರದಿಂದ ಮಂಜೂರಾಗಿರುವ 63. 96 ಕೋಟಿ ಅನುದಾನವನ್ನು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು, ಕೃಷಿ, ಶೈಕ್ಷಣಿಕ, ಆರೋಗ್ಯ, ಮಕ್ಕಳ ಪೌಷ್ಟಿಕ ಆಹಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪರಿಶಿಷ್ಟ ಜಾತಿ ಪಂಗಡಕ್ಕೆ ನೀರು ನೈರ್ಮಲ್ಯ, ಗ್ರಾಮೀಣ ರಸ್ತೆಗಳು, ಬೀದಿ ದೀಪ, ಗ್ರಾಮೀಣ ಜನರ ಜೀವನೋಪಾಯ ಇತ್ಯಾದಿ ಕ್ಷೇತ್ರಗಳಿಗೆ ವಿನಿಯೋಗಿಸಲಾಗಿದೆ ಎಂದರು.
ನೀರಿಂಗಿಸಲು ಸಮಗ್ರ ಯೋಜನೆ:
ಮಳೆ ನೀರನ್ನು ಇಂಗಿಸುವ ವಿಚಾರದಲ್ಲಿ ಪುತ್ತೂರು ತಾಲೂಕು ಪಂ. ಸಮಗ್ರ ಯೋಜನೆಯೊಂದನ್ನು ರೂಪಿಸಿದೆ. ನಮ್ಮ ಮಳೆ ನಮ್ಮ ಭೂಮಿಗೆ ಎಂಬ ಹೆಸರಿನ ಈ ಯೋಜನೆ ಈ ಮಳೆಗಾಲದಲ್ಲೇ ಪ್ರತೀ ಹಳ್ಳಿಯಲ್ಲೂ ಜಾರಿಗೆ ಬರಲಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡುವುದು ಇತ್ತೀಚಿನ ವರ್ಷಗಳಲ್ಲಿ ಅತಿಯಾಗುತ್ತಿರುವ ಕಾರಣ ಮಳೆಗಾಲದಲ್ಲಿ ನೀರಿಂಗಿಸುವ ಅಭಿಯಾನಕ್ಕೆ ಚುರುಕು ಮುಟ್ಟಿಸಲು ನಿರ್ಧರಿಸಲಾಗಿದೆ. ಇದರ ಅಡಿಯಲ್ಲಿ ಪ್ರತೀ ಗ್ರಾಮಗಳಲ್ಲೂ ಸ್ವಯಂ ಸೇವಾ ಸಂಘ ಸಂಸ್ಥೆಗಳ ಮೂಲಕ ಜಾರಿಗೆ ತರಲಾಗುವುದು. ಮನೆ ಮನೆಗೆ ಭೇಟಿ ನೀಡಿ ಅಲ್ಲಿ ನೀರಿಂಗಿಸುವ ಯೋಜನೆ ಅನುಷ್ಠಾನ ಮಾಡುವಂತೆ ಪ್ರೇರಣೆ ನೀಡಲಾವುದು ಎಂದು ಹೇಳಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ, 2016-17ನೇ ಸಾಲಿನಲ್ಲಿ ವೈಯಕ್ತಿಕ ಕಾಮಗಾರಿಗಳು ಹಾಗೂ ಸಾರ್ವಜನಿಕ ಉಪಯೋಗದ ಕಾಮಗಾರಿಗಳು ಸೇರಿ ಒಟ್ಟು 31,8489 ಮಾನವ ದಿನಗಳ ಕೆಲಸ ಮಾಡಲಾಗಿದೆ. ಈ ಮೂಲಕ ಒಟ್ಟು 10, 74,56,000 ರೂ. ಗಳ ಕಾಮಗಾರಿ ನಿರ್ವಹಿಸಲಾಗಿದೆ. ಯೋಜನೆಯಲ್ಲಿ 62 ಕಿಂಡಿ ಅಣೆಕಟ್ಟು, 170 ವೈಯಕ್ತಿಕ ತೆರೆದ ಬಾವಿ, 17 ಜಲ ಮರುಪೂರಣ ಘಟಕಗಳನ್ನು ನಿರ್ಮಿಸಲಾಗಿದೆ ಎಂದರು
ಹಿಂದೆ ಸರಕಾರದಿಂದ ತಾಲೂಕು ಪಂ. ಗಳಿಗೆ ಹೆಚ್ಚಿನ ಅನುದಾನ ಬರುತ್ತಿತ್ತು. ಈಗ 14ನೇ ಹಣಕಾಸು ಆಯೋಗದ ಅಡಿಯಲ್ಲಿ ಎಲ್ಲ ಅನುದಾನಗಳು ನೂರಕ್ಕೆ ನೂರು ಗ್ರಾಮ ಪಂ. ಗಳಿಗೆ ಹೋಗುತ್ತವೆ. ಹೀಗಾಗಿ ತಾಪಂಗೆ ಬರುವ ಹಣ ಕಡಿಮೆಯಾಗಿದೆ. ಗ್ರಾಪಂಗಳ ಬಲವರ್ಧನೆ ಮಾಡಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಗ್ರಾಮ ಸರಕಾರಗಳು ಹೆಚ್ಚು ಶಕ್ತಿಶಾಲಿಯಾಗಿರುವುದು ಅಗತ್ಯ. ಇದೇ ವೇಳೆ ತಾಲೂಕು ಪಂ.ಗಳ ಬಲವರ್ಧನೆಯೂ ಅಗತ್ಯವಿದೆ. ಇದಕ್ಕಾಗಿ ತಾಪಂಗಳಿಗೆ ಅನುದಾನ ಹೆಚ್ಚಿಸಬೇಕು ಎಂದು ಹೇಳಿದ ಅವರು, ಈ ಬಗ್ಗೆ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಮಟ್ಟದ ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನಗಳ ಬಗ್ಗೆ ಹಾಗೂ ಖರ್ಚಾದ ಅನುದಾನದ ಬಗ್ಗೆ ಅವರು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ತಾಪಂ ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಗೌಡ ಉಪಸ್ಥಿತರಿದ್ದರು.