ನಿಯಮ ಉಲ್ಲಂಘಿಸುವ ಶಾಲಾ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಿ
ಮಂಗಳೂರು, ಜೂ. 9: ಶಾಲಾ ವಾಹನಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಹೋಗುವ ಮೂಲಕ ಮೋಟಾರು ವಾಹನ ಕಾಯಿದೆಯ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂಬ ಆಗ್ರಹ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರಿಂದ ವ್ಯಕ್ತವಾಯಿತು.
ಶುಕ್ರವಾರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕಮಿಷನರ್ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರು, ಬೆಳಗ್ಗೆ ಮತ್ತು ಸಂಜೆ ನಗರದಲ್ಲಿ ಚಲಿಸುವ ಶಾಲಾ ವಾಹನಗಳಲ್ಲಿ ವಿದ್ಯಾರ್ಥಿಗಳು, ಸ್ಕೂಲ್ ಬ್ಯಾಗ್ಗಳು ತುಂಬಿ ತುಳುಕುತ್ತವೆ. ಅವಘಡದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ, ಮುಂಚೇ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದರು.
ನಗರದ ಕೆಲವು ಸಿಟಿ ಬಸ್ ಮತ್ತು ಅಂಗಡಿಗಳಲ್ಲಿ 10 ರೂ. ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಮಿಷನರ್, ಈ ಬಗ್ಗೆ ಕೂಡಲೇ ಬಸ್ಸಿನ ನಂಬರ್ ಮತ್ತು ಅಂಗಡಿಗಳ ಮಾಹಿತಿಯನ್ನು ಪೊಲೀಸರಿಗೆ ತಿಳಿಸುವಂತೆ ಸೂಚನೆ ನೀಡಿದರು.
ಅಸಮರ್ಪಕ ಪಾರ್ಕಿಂಗ್
ಕಂಕನಾಡಿಯಿಂದ ಜೆಪ್ಪು ಸೆಮಿನರಿವರೆಗೆ ರಸ್ತೆಯ ಇಕ್ಕೆಲಗಳಲ್ಲಿ, ಟೆಲಿಕಾಂ ರಸ್ತೆಯ ಇಕ್ಕೆಲ, ಶರಬತ್ಕಟ್ಟೆಯಿಂದ ಪದವಿನಂಗಡಿವರೆಗೆ ರಸ್ತೆಗಳಲ್ಲಿ, ಯೆಯ್ಯೆಡಿ-ಪದವಿನಂಗಡಿ ರಸ್ತೆಯಲ್ಲಿ ಅಸಮರ್ಪಕ ವಾಹನ ಪಾರ್ಕಿಂಗ್ ಮಾಡಲಾಗುತ್ತಿದೆ ಎಂಬ ದೂರು ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಬಸ್ ಅಸೋಸಿಯೇಶನ್ಗೆ ಪದಾಧಿಕಾರಿ ಹಾಜರಿಗೆ ಸೂಚನೆ
ಪ್ರತಿ ವಾರದ ಫೋನ್-ಇನ್ ಕಾರ್ಯಕ್ರಮದಲ್ಲಿ ಶೇ.80ಕ್ಕೂ ಅಧಿಕ ಸಮಸ್ಯೆಗಳು ಟ್ರಾಫಿಕ್ ಸಂಬಂಧಿಸಿದ್ದಾಗಿರುತ್ತವೆ. ಇದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಮುಂದಿನ ಫೋನ್-ಇನ್ ಕಾರ್ಯಕ್ರಮದಲ್ಲಿ ಬಸ್ ಅಸೋಸಿಯೇಶನ್ ಪದಾಧಿಕಾರಿಗಳನ್ನು ಕರೆಯುವಂತೆ ಕಮಿಷನರ್ ಚಂದ್ರಶೇಖರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾಕಾಳಿ ಪಡ್ಪು ಬಳಿ ಟ್ರಾಫಿಕ್ ವಾರ್ಡನ್ ನೇಮಕಕ್ಕೆ ಒತ್ತಾಯ
ಮಹಾಕಾಳಿ ಪಡ್ಪು ರೈಲ್ವೇ ಕ್ರಾಸ್ ಬಳಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇದರಿಂದ ಸಾಕಷ್ಟು ವಾಹನ ದಟ್ಟನೆಯಿಂದಾಗಿ ಈ ಪ್ರದೇಶದಲ್ಲಿ ಸಮಸ್ಯೆಯಾಗುತ್ತಿದೆ. ಇಲ್ಲಿ ಟ್ರಾಫಿಕ್ ವಾರ್ಡ್ ನೇಮಿಸಿದಲ್ಲಿ ಅವಘಡಗಳನ್ನು ತಡೆಗಟ್ಟಲು ಸಾಧ್ಯವಿದೆ.
ಸುರತ್ಕಲ್ ಜಂಕ್ಷನ್ ಬಸ್ಸ್ಟಾಪ್ ಸಣ್ಣದಾಗಿದ್ದು, ಮಳೆಗೆ ಸೋರುತ್ತಿದೆ. ರಸ್ತೆ ಬದಿಯಲ್ಲಿ ನಿರುಪಯುಕ್ತ ಬ್ಯಾರಿಕೇಡ್ಗಳಿದ್ದು, ಅದನ್ನು ಕೂಡಲೇ ತೆರವುಗೊಳಿಸಬೇಕು. ಜಪ್ಪಿನ ಮೊಗರು ದ್ವಾರದ ಬಳಿ ಹೈವೇಯಲ್ಲಿ ವಿಪರೀತ ವಾಹನ ದಟ್ಟಣೆಯಿದ್ದು, ಸಂಚಾರಿ ಪೊಲೀಸರ ನೇಮಕವಾಗಬೇಕು. ಗಣಪತಿ ಹೈಸ್ಕೂಲ್ ರಸ್ತೆಯಲ್ಲಿ ಶಾಲಾ ಮಕ್ಕಳಿಗೆ ರಸ್ತೆ ದಾಟಲು ತೊಂದರೆಯಾಗುತ್ತಿದ್ದು, ಹಂಪ್ಸ್ ನಿರ್ಮಿಸಬೇಕಾಗಿದೆ. ಪಂಪುವೆಲ್ನಿಂದ ಪಡೀಲ್ ತನಕ ಚತುಷ್ಪಥ ರಸ್ತೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವುಮಾಡಬೇಕು ಮೊದಲಾದ ಹಲವಾರು ಆಗ್ರಹಗಳು ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ವ್ಯಕ್ತವಾದವು.
ಫೋನ್ ಇನ್ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಂತರಾಜು, ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಹನುಮಂತರಾಯ, ಸಂಚಾರ ವಿಭಾಗದ ಎಸಿಪಿ ತಿಲಕ್ಚಂದ್ರ, ಇನ್ಸ್ಪೆಕ್ಟರ್ ರಫೀಕ್, ಎಎಸ್ಐ ಯುಸೂಫ್, ಎಚ್ಸಿ ಪುರುಷೋತ್ತಮ್ ಉಪಸ್ಥಿತರಿದ್ದರು.
ಕಡಲ ಅವಘಡಕ್ಕೆ ಹೆಲಿಕಾಪ್ಟರ್ ಒದಗಿಸಲು ಪೊಲೀಸರಿಗೆ ಆಗ್ರಹ!
ಪ್ರಮುಖ ವಾಣಿಜ್ಯ ನಗರವಾಗಿ ಗುರುತಿಸಿಕೊಂಡಿರುವ ಮಂಗಳೂರಿನ ಕರಾವಳಿ ತೀರ ಪ್ರದೇಶದಲ್ಲಿ ಕಡಲಿನಲ್ಲಿ ಆಗಾಗ್ಗೆ ಸಮಸ್ಯೆಗಳು ಉದ್ಭುವಿಸುತ್ತಿವೆ. ಇಲ್ಲಿ ತುರ್ತು ಕಾರ್ಯಾಚರಣೆಗೆ ಹೆಲಿಕಾಪ್ಟರ್ ಅಗತ್ಯವಾಗಿದ್ದು, ಅದನ್ನು ಒದಗಿಸಬೇಕು ಎಂಬ ಆಗ್ರಹ ಸಾರ್ವಜನಿಕರೊಬ್ಬರಿಂದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಬಾರ್ಜ್, ನೌಕೆ, ಮೀನುಗಾರಿಕೆ ದೋಣಿಗಳು ಅವಘಡ ನಡೆಯುವ ಸಂದರ್ಭ ಅಥವಾ ಇನ್ಯಾವುದೇ ಅವಘಡ ಸಂದರ್ಭ ಹೆಲಿಕಾಪ್ಟರ್ ಮೂಲಕ ತುರ್ತು ಕಾರ್ಯಾಚರಣೆ ನಡೆಸಲು ಸಾಧ್ಯವಿದೆ ಎಂಬುದು ಕರೆ ಮಾಡಿದ ಸಾರ್ವಜನಿಕರ ಅಭಿಪ್ರಾಯವಾಗಿತ್ತು.