ವಾಹನ ಸಂಚಾರಕ್ಕೆ ಬದಲಿ ಮಾರ್ಗ: ಸ್ಥಳೀಯರಿಂದ ತೀವ್ರ ಆಕ್ರೋಶ
ಬೈಂದೂರು, ಜೂ.11: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಇಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಬೈಂದೂರು ಒತ್ತಿನೆಣೆ ಗುಡ್ಡವು ಮತ್ತೆ ಕುಸಿದು ಬಿದ್ದಿದ್ದು, ಸುಮಾರು ಆರು ತಾಸುಗಳ ತೆರವು ಕಾರ್ಯಾಚರಣೆಯ ನಂತರ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.
ಜೂ. 7ರಂದು ಇದೇ ರೀತಿ ಗುಡ್ಡದ ಮಣ್ಣು ಜರಿದು ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಭಾರೀ ಮಳೆಯಿಂದಾಗಿ 25 ಅಡಿ ಎತ್ತರದ ಗುಡ್ಡ ಜರಿದು ಹೆದ್ದಾರಿಯ ಎರಡೂ ಭಾಗದ ರಸ್ತೆ ಮೇಲೆ ಬಿದ್ದು ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಹೀಗಾಗಿ ಹೆದ್ದಾರಿಯ ಎರಡು ಭಾಗದಲ್ಲೂ ಸುಮಾರು ಎರಡು ಕಿಲೋ ಮೀಟರ್ವರೆಗೆ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು.
ಬದಲಿ ಸಂಚಾರ ವ್ಯವಸ್ಥೆ:
ಬೈಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್ ಹಾಗೂ ಖಾಸಗಿ ವಾಹನಗಳಿಗೆ ಈಗಾಗಲೇ ಗುರುತಿಸಲಾಗಿದ್ದ ಪರ್ಯಾಯ ರಸ್ತೆಯಲ್ಲಿ ಸಂಚರಿಸಲು ಅನುವು ಮಾಡಿಕೊಟ್ಟರು. ಶಿರೂರು ಕಡೆಯಿಂದ ಬೈಂದೂರು ಕಡೆ ಬರುವ ವಾಹನಗಳನ್ನು ದೊಂಬೆ- ಕರಾವಳಿ ರಸ್ತೆಯ ಮೂಲಕ ಮತ್ತು ಬೈಂದೂರಿನಿಂದ ಶಿರೂರು ಕಡೆ ಹೋಗುವ ವಾಹನಗಳು ಬೈಂದೂರು ರೈಲ್ವೆ ನಿಲ್ದಾಣದ ಬಳಿಯ ರಸ್ತೆಯಲ್ಲಿ ಸಂಚರಿಸಿದವು.
ಈ ರಸ್ತೆಗಳು ತುಂಬಾ ಕಿರಿದಾಗಿರುವುದರಿಂದ ಬೃಹತ್ ವಾಹನಗಳಿಗೆ ಸಂಚಾರ ನಿಷೇಧಿಸಲಾಗಿತ್ತು. ಇದರಿಂದ ಲಾರಿಗಳು ಹೆದ್ದಾರಿಯಲ್ಲೇ ಸಾಲು ಗಟ್ಟಿ ನಿಂತಿದ್ದವು. ಈ ಹಿಂದೆ ಗುಡ್ಡ ಕುಸಿದಿರುವುದರಿಂದ ಎರಡು ಜೆಸಿಬಿಗಳನ್ನು ಸ್ಥಳದಲ್ಲೇ ನಿಯೋಜಿಸಲಾಗಿತ್ತು. ಗುಡ್ಡ ಕುಸಿದ ಮಾಹಿತಿ ಸಿಕ್ಕಿದ ಕೂಡಲೇ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ ನಡೆಸಲಾಯಿತು. ನಂತರ ಹೆಚ್ಚುವರಿಯಾಗಿ ಇನ್ನೊಂದು ಜೆಸಿಬಿಯನ್ನು ತರಿಸಿ ಕೆಲಸ ಮಾಡಿಸಲಾಯಿತು. ಬೆಳಗ್ಗೆ 9.30ರ ಸುಮಾರಿಗೆ ಮಣ್ಣು ತೆರವು ಮಾಡಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಸ್ಥಳಕ್ಕೆ ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ತೆರವು ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು. ಅದೇ ರೀತಿ ಬೈಂದೂರು ಪೊಲೀಸರು ವಾಹನ ಸಂಚಾರ ನಿರ್ವಹಿಸುವಲ್ಲಿ ಶ್ರಮಿಸಿದರು. ಮುಂದೆಯೂ ಮಣ್ಣು ಕುಸಿಯುವ ಅಪಾಯ ಇರುವ ಹಿನ್ನೆಲೆಯಲ್ಲಿ ಹೆದ್ದಾರಿಯ ಎಡ ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
‘ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ಕಂಪೆನಿ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿದೆ. ಮುಂದೆ ಅಪಾಯ ಸಂಭವಿಸದಂತೆ ಎಚ್ಚರ ವಹಿಸುವಂತೆ ಈಗಾಗಲೇ ಸೂಚಿಸಲಾಗಿದೆ’ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಪತ್ರಿಕೆಗೆ ತಿಳಿಸಿದರು.
ಕಂಪೆನಿಯ ವಿರುದ್ಧ ಆಕ್ರೋಶ: ಹೆದ್ದಾರಿ ಕಾಮಗಾರಿ ವಹಿಸಿಕೊಂಡಿರುವ ಐಆರ್ಬಿ ಕಂಪನಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬೈಂದೂರು ಶಾಸಕ ಗೋಪಾಲ ಪೂಜಾರಿ ಸಂಬಂಧಪಟ್ಟ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
‘ಆರು ತಿಂಗಳ ಹಿಂದೆಯೇ ನಾನು ಈ ಬಗ್ಗೆ ಎಚ್ಚರಿಸಿದ್ದೆ. ಆದರೆ ಕಂಪೆನಿಯವರು ನಿರ್ಲಕ್ಷ ತೋರಿದರು. ಅವರ ಬೇಜವಾಬ್ದಾರಿಯಿಂದ ಈ ರೀತಿ ಪದೇ ಪದೇ ಮಣ್ಣು ಕುಸಿತ ಆಗುತ್ತಿದೆ. ಈ ಕಳಪೆ ಕಾಮಗಾರಿ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡುತ್ತೇನೆ’ ಎಂದು ಶಾಸಕ ಗೋಪಾಲ ಪೂಜಾರಿ ತಿಳಿಸಿದರು.
ಇಲ್ಲಿನ ಹೆದ್ದಾರಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಅಧಿಕಾರಿಗಳ ನಿರ್ಲಕ್ಷದಿಂದ ಈ ರೀತಿ ಆಗುತ್ತಿದೆ. ಇದೇ ರೀತಿ ಮುಂದುವರೆದರೆ ಅಪಾಯ ಕಟ್ಟಿಟ್ಟ ಬುತ್ತಿ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳ ಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಕಳೆದ ಫೆಬ್ರವರಿಯಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ ಜೂನ್ ಕಳೆದರೂ ಕಾಮಗಾರಿ ಇನ್ನು ಮುಗಿದಿಲ್ಲ. ಜೇಡಿ ಮಣ್ಣಿನ ಗುಡ್ಡ ಇದಾಗಿರುವುದರಿಂದ ಮಳೆ ನೀರಿನ ಜೊತೆ ಗುಡ್ಡದ ಮಣ್ಣು ಇಳಿದು ರಸ್ತೆಗೆ ಹರಿಯುತ್ತಿದೆ. ಹೀಗಾಗಿ ಹೆದ್ದಾರಿ ಸಂಪೂರ್ಣ ಕೆಸರುಮಯವಾಗಿದೆ. ಕಳೆದ ಬಾರಿ ಮಣ್ಣು ಕುಸಿತ ಉಂಟಾಗಿರುವುದರ ವಿರುದ್ಧ ಬೈಂದೂರು ವಿಶೇಷ ತಹಶೀಲ್ದಾರ್ ಕಂಪನಿ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.