ಆವರಣಗೋಡೆ ಕುಸಿದು ಬಿದ್ದು ಮನೆಗೆ ಹಾನಿ
ಪುತ್ತೂರು, ಜೂ.13: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಮೇಲಿನ ಮನೆಯ ಆವರಣ ಗೋಡೆ ಕುಸಿದು ಬಿದ್ದು ಗ್ರಾಮ ಪಂಚಾಯತ್ ಸದಸ್ಯೆಯೊಬ್ಬರ ಮನೆಗೆ ಮತ್ತು ಬಚ್ಚಲು ಮನೆಗೆ ಹಾನಿಯಾದ ಘಟನೆ ಸೋಮವಾರ ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಶಾಂತಿನಗರದಲ್ಲಿ ಸಂಭವಿಸಿದೆ.
ಕೋಡಿಂಬಾಡಿ ಗ್ರಾಮದ ಶಾಂತಿನಗರ ನಿವಾಸಿಯಾಗಿರುವ ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯೆ ಯಮುನಾ ಕುಶಾಲಪ್ಪ ಪೂಜಾರಿ ಅವರ ಮನೆ ಮತ್ತು ಬಚ್ಚಲು ಮನೆ ಹಾನಿಗೀಡಾಗಿದೆ. 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ನಿವಾಸಿ ಶೀಲಾ ಲೋಕನಾಥ ಶೆಟ್ಟಿ ಎಂಬವರ ಮನೆಯ ಆವರಣ ಗೋಡೆ ಕುಸಿದು ಪಕ್ಕದಲ್ಲಿರುವ ಯಮುನಾ ಕುಶಾಲಪ್ಪ ಪೂಜಾರಿ ಅವರ ಮನೆಯ ಮೇಲೆ ಬಿದ್ದ ಪರಿಣಾಮವಾಗಿ ಮನೆಗೆ ಭಾಗಶಃ ಹಾನಿಯಾಗಿದ್ದು, ಬಚ್ಚಲು ಮನೆ ಸಂಪೂರ್ಣ ಹಾನಿಯಾಗಿದೆ.
ಗ್ರಾಮ ಪಂಚಾಯತ್ ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆ, ಪ್ರಭಾರ ಪಿಡಿಓ ರಮೇಶ್ ಕೆ, ಗ್ರಾಮಕರಣಿಕ ಚಂದ್ರ ನಾಯ್ಕ, ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರು ಸಹಿತ ಹಲವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.