ಸೋನಿಯಾ, ಯೆಚೂರಿ ಭೇಟಿಯಾಗಲಿರುವ ಬಿಜೆಪಿ ಸಮಿತಿ
Update: 2017-06-14 12:58 GMT
ಹೊಸದಿಲ್ಲಿ, ಜೂ.12: ರಾಷ್ಟ್ರಪತಿ ಹುದ್ದೆಗೆ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವ ವಿಷಯಕ್ಕೆ ಸಂಬಂಧಿಸಿ ಬಿಜೆಪಿಯ ತ್ರಿಸದಸ್ಯ ಸಮಿತಿಯು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಿಪಿಐ(ಎಂ) ಮುಖಂಡ ಸೀತಾರಾಂ ಯೆಚೂರಿಯವರನ್ನು ಶುಕ್ರವಾರ ಭೇಟಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸಮಿತಿಯು ಈಗಾಗಲೇ ಎನ್ಸಿಪಿಯ ಪ್ರಫುಲ್ ಪಟೇಲ್ ಮತ್ತು ಬಿಎಸ್ಪಿಯ ಸತೀಶ್ಚಂದ್ರ ಮಿಶ್ರರನ್ನು ಸಂಪರ್ಕಿಸಿದೆ. ಇವರು ಶೀಘ್ರ ಸಮಿತಿಯ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಮ್ಮತದ ಅಭ್ಯರ್ಥಿ ಆಯ್ಕೆ ಕುರಿತಂತೆ ಎನ್ಡಿಎ ಮಿತ್ರಪಕ್ಷಗಳು ಮತ್ತು ವಿಪಕ್ಷಗಳ ಜೊತೆ ಮಾತುಕತೆ ನಡೆಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮೂವರು ಸದಸ್ಯರ ಒಂದು ಸಮಿತಿಯನ್ನು ರಚಿಸಿದ್ದಾರೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತು ವೆಂಕಯ್ಯ ನಾಯ್ಡು ಸಮಿತಿಯ ಸದಸ್ಯರಾಗಿದ್ದಾರೆ.