ಪುರಸಭೆಯ ಕಾರ್ಯವೈಖರಿಗೆ ಸಾರ್ವಜನಿಕರ ಅಸಮಾಧಾನ
ಭಟ್ಕಳ,ಜೂ.16 : ಮಳೆಗಾಲ ಪೂರ್ವದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಹೂಳೆತ್ತಿದ್ದ ಗಟಾರ ಮಣ್ಣು ಹಾಗೂ ತ್ಯಾಜ್ಯಗಳನ್ನು ಪುರಸಭೆಯವರು ಸಮರ್ಪಕ ಜಾಗದಲ್ಲಿ ವಿಲೇವಾರಿ ಮಾಡದೇ ಮಣ್ಕುಳಿ ಸಶ್ಮಾನದಲ್ಲಿ ತಂದು ಹಾಕುತ್ತಿದ್ದು, ಪುರಸಭೆಯವರ ಈ ಎಡಬಿಡಂಗಿ ಕಾರ್ಯದ ಬಗ್ಗೆ ಕುಪಿತಗೊಂಡ ಮಣ್ಕುಳಿ ಯುವಕರು ಕೂಡಲೇ ಅಲ್ಲಿ ರಾಶಿ ನೀಡಿರುವ ತ್ಯಾಜ್ಯ ಮಣ್ಣನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.
ಮಣ್ಕುಳಿ ರುದ್ರಭೂಮಿಯನ್ನು ಪ್ರತಿ ವರ್ಷ ಮಣ್ಕುಳಿ ಯುವಕರು ಸ್ವಚ್ಛತಾ ಕಾರ್ಯ ಮಾಡುವುದರ ಮುಖಾಂತರ ಸುತ್ತಮುತ್ತಲಿನ ಪರಿಸರವನ್ನು ಮಲೀನಗೊಳ್ಳದಂತೆ ಕಾಪಾಡಿಕೊಂಡು ಬಂದಿರುತ್ತಾರೆ. ಹೀಗಿರುವಾಗ ಎಡಬಿಡಂಗಿ ಪುರಸಭೆಯ ಅಧಿಕಾರಿಗಳು ಊರಿನ ತ್ಯಾಜ್ಯವನ್ನು ತಂದು ಸಶ್ಮಾನದಲ್ಲಿ ಹಾಕುತ್ತಿದ್ದು, ಇದರಿಂದ ಸುತ್ತಮುತ್ತಲಿನ ಪರಿಸರ ಗಬ್ಬು ನಾರುತ್ತಿದ್ದೆ. ಅಲ್ಲದೇ ಅಂತ್ಯಕ್ರೀಯೆ ನಡೆಸುವ ಸ್ಥಳಕ್ಕೆ ತೆರಳುವ ದಾರಿ ಮಧ್ಯೆ ಮಣ್ಣಿನ ರಾಶಿ ಹಾಕಿರುವುದರಿಂದ ರಾತ್ರೀ ವೇಳೆ ಇಲ್ಲಿ ತೆರಳಲು ತೊಂದರೆಯಾಗುತ್ತಿದೆ. ಹಾಗಾಗಿ ಪುರಸಭೆಯ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತು ಈ ತ್ಯಾಜ್ಯ ಮಣ್ಣನ್ನು ಇಲ್ಲಿಂದ ಬೇರೆಡೆ ಸ್ಥಳಾಂತರಿಸಬೇಕು. ಇಲ್ಲದೇ ಹೋದಲ್ಲಿ ಅಲ್ಲಿನ ಮಣ್ಣನ್ನು ತಂದು ಪುರಸಭೆಯ ಎದುರುಗಡೆ ಹಾಕಲಾಗುವುದು ಎಂದು ಮಣ್ಕುಳಿ ಯುವಕರಾದ ಸುರೇಶ ವಾಸು ನಾಯ್ಕ, ಸತೀಶ ಟಿ ನಾಯ್ಕ, ಯೊಗೇಶ ನಾಯ್ಕ ಮುಂತಾದವರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.