ಎಸ್ಪಿಗೆ ಸಚಿವ ರೈ ತರಾಟೆ: ವಿಡಿಯೋ ವೈರಲ್

Update: 2017-06-18 15:25 GMT

ಬಂಟ್ವಾಳ, ಜೂ. 18: ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆಯವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪಾಠ ಮಾಡುತ್ತಿರುವ ವಿಡಿಯೋ ಕ್ಲಿಪ್‍ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ರಾಜಕೀಯ ಪಕ್ಷಗಳ ನಡುವೆ ಪರ ವಿರೋಧ ಚರ್ಚೆಗೆ ವೇದಿಕೆಯಾಗಿದೆ. 

ಜೂನ್ 13ರಂದು ಕಲ್ಲಡ್ಕದಲ್ಲಿ ನಡೆದ ಚೂರಿ ಇರಿತ ಹಾಗೂ ಆ ಬಳಿಕ ಉಭಯ ಕೋಮಿನ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಅಮಾಯಕರನ್ನು ಬಂಧಿಸುತ್ತಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮೌನವಹಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರ ಸಹಿತ ಜಿಲ್ಲೆಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. 

ಶುಕ್ರವಾರ ತಡರಾತ್ರಿ ಬೆಂಗಳೂರಿನಿಂದ ಬಂಟ್ವಾಳಕ್ಕೆ ಆಗಮಿಸಿದ ಸಚಿವರು ಶನಿವಾರ ಸಂಜೆ ಜಿಲ್ಲಾ ಎಸ್ಪಿ ಭೂಷಣ್ ಜಿ. ಬೊರಸೆಯವರನ್ನು ಬಂಟ್ವಾಳ ಪ್ರವಾಸಿ ಮಂದಿರಕ್ಕೆ ಕರೆದು ಕಲ್ಲಡ್ಕ ಘಟನೆಗೆ ಸಂಬಂಧಿಸಿ ಮಾಹಿತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಸಚಿವರು ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಎಸ್ಪಿಗೆ ಪಾಠ ಮಾಡುತ್ತಿರುವ ವಿಡಿಯೋ ಕ್ಲಿಪ್‍ಗಳು ರವಿವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ  ಸಂದರ್ಭ ಕಾಂಗ್ರೆಸ್‍ನ ಜಿಲ್ಲಾ ಪಂಚಾಯತ್ ಸದಸ್ಯರ ಸಹಿತ ಕಾಂಗ್ರೆಸ್ ಮುಖಂಡರು ಹಾಜರಿದ್ದು, ಕಲ್ಲಡ್ಕ ಘರ್ಷಣೆಗೆ ಸಂಬಂಧಿಸಿ ಬಂಟ್ವಾಳದ ಪೊಲೀಸರು ಮುಸ್ಲಿಮ್ ಯುವಕರನ್ನೇ ಟಾರ್ಗೆಟ್ ಮಾಡುತ್ತಿರುವ ವಿಚಾರದ ಬಗ್ಗೆ ಹಾಗೂ ಸಂಘಪರಿವಾರದ ವಿರುದ್ಧ ಪೊಲೀಸರು ತಾಳುತ್ತಿರುವ ಮೃದು ಧೋರಣೆಯನ್ನು ವಿವರಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. 

ಸಚಿವರ ಪಾಠ: "ನಾಳೆ ಚುನಾವಣೆ ನಡೆದರೆ ಎಸ್‍ಡಿಪಿಐ ಗೆಲ್ಲುವುದಿಲ್ಲ. ಅವರಿಗೆ ರಮಾನಾಥ ರೈ ಸೋಲಬೇಕು. ಬಿಜೆಪಿ ಗೆದ್ದರೆ ಅವರ ಪಕ್ಷ ಬೆಳೆಯುತ್ತದೆ. ಮಿಥುನ್‍ನನ್ನು 24 ಗಂಟೆಯ ಒಳಗೆ ಬಂಧಿಸದಿರುವುದು ನಿಮ್ಮ ತಪ್ಪು. ಮಿಥುನ್ ಬಂಧನಕ್ಕೆ ಪೊಲೀಸರ ಸಹಕಾರ ಪಡೆಯಬೇಡಿ. ಪೊಲೀಸರು ಕಮ್ಯುನಲ್ ಆಗಿದ್ದಾರೆ. ಪೊಲೀಸರನ್ನು ವರ್ಗಾವಣೆ ಮಾಡಿ ಎಂದು ಎಂ.ಎಸ್.ಮುಹಮ್ಮದ್‍ರನ್ನು ಹದಿನೈದು ಬಾರಿ ಕಳಿಸಿದ್ದೇನೆ. ಆದರೆ ನೀವು ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಗಲಾಟೆಯ ಬಗ್ಗೆ ಕೇಳಿ ಪೊಲೀಸರಿಗೆ ಹೇಳಿ ನಿಲ್ಲಿಸಲು ಆಗುವುದಿಲ್ಲವೇ ಎಂದು ನನ್ನಲ್ಲಿ ಹೇಳುತ್ತಾರೆ. ಪೊಲೀಸ್ ಅಧಿಕಾರಿಗಳು ನನ್ನ ಮಾತು ಕೇಳ ಬೇಕಲ್ಲ" ಎಂದು ಸಚಿವರು ಅಸಹಾಯಕತೆಯನ್ನು ವ್ಯಕ್ತಪಡಿಸಿರುವುದು ವಿಡಿಯೋದಲ್ಲಿದೆ. 

ವಯಸ್ಸಾದವರನ್ನು ಕರೆದುಕೊಂಡು ಹೋಗುವ ಬಗ್ಗೆಯೂ ಸಚಿವರು ಎಸ್ಪಿ ವಿರುದ್ಧ ಗರಂ ಆಗಿದ್ದಾರೆ. "ಇಲ್ಲಿಯ ಪರಿಸ್ಥಿತಿ ನಿಮಗೆ ಅರ್ಥವಾಗುವುದಿಲ್ಲ. ನಿಮ್ಮಲ್ಲಿ ಕೆಲವು ಸಲ ಹೇಳಿದ್ದೇನೆ. ಇದು ಮಂಡ್ಯ ಅಲ್ಲ ಇಂಡಿಯಾ ಎಂದು. ಪ್ರಭಾಕರ ಭಟ್‍ನನ್ನು ಬಂಧನ ಮಾಡಿದರೆ ಏನು ಮಾಡುವುದಿಲ್ಲ. ಭಾಷಣ ಮಾಡಿದರೆ ಅವನ ಮೇಲೆ ಕ್ರಿಮಿನಲ್ ಕೇಸ್ ಮಾಡಿ. ನಾನು ಯುವಕನಿದ್ದಾಗ ಪ್ರಭಾಕರ ಭಟ್ಟನನ್ನು ಬಿ.ಸಿ.ರೋಡಿನಲ್ಲಿ ಓಡಿಸಿದ್ದೇನೆ. ನಾನು ಮೊದಲ ಬಾರಿ ಶಾಸಕನಾಗಿದ್ದಾಗ ಇಡೀ ಬಿ.ಸಿ.ರೋಡಿನಲ್ಲಿ ಪೊಲೀಸ್ ಫೋರ್ಸ್ ಕಡಿಮೆ ಇತ್ತು".

"ಮಿಥುನನ್ನು ಹೀಗೆ ಬಿಟ್ಟರೆ ಅವರು ಇನ್ನೂ ಕೊಲೆ ಮಾಡುತ್ತಾನೆ. ಹರೀಶ್‍ಗೆ ಹಲ್ಲೆ ನಡೆಸಿದ ಆರೋಪದಲ್ಲಿ ನೀವು ಮಿಥುನ್ ವಿರುದ್ಧ ಕೇಸ್ ದಾಖಲಿಸಿರಲಿಲ್ಲ. ಕೇಸ್ ಕೊಟ್ಟರೆ ತೆಗೆದಿಲ್ಲ. ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರೀಶ್‍ಗೆ ಬಂಟ್ವಾಳ ಪುರಸಭಾ ಸದಸ್ಯ ಗೋವಿಂದ ಪ್ರಭು ಫೋನ್ ಮಾಡಿ ಆಸ್ಪತ್ರೆಯಿಂದ ಹೋಗುವಂತೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ವಾಯ್ಸ್ ರೆಕಾರ್ಡ್ ಇದೆ". 

"ಸಂಘಪರಿವಾರದ ಯುವಕರ ಮೇಲೆ ದುರ್ಬಲ ಕೇಸ್ ಹಾಕಿದ್ದೀರ. ಮುಸ್ಲಿಮ್ ಯುವಕರ ಮೇಲೆ 307 ಕೇಸ್ ಹಾಕಿದ್ದೀರ. ತಾರತಮ್ಯ ಯಾಕೆ ಮಾಡುವುದು. ಎಲ್ಲರ ವಿರುದ್ಧವೂ ಒಂದೇ ತರ ಕೇಸ್ ಹಾಕಿ. ಪಂಚಾಯತ್ ಉಪಾಧ್ಯಕ್ಷರ ಕೊಲೆಯಲ್ಲಿ ಸಂಘಪರಿವಾರದ ಕಾರ್ಯಕರ್ತರಿದ್ದು ಇದು ಪ್ರಭಾಕರ ಭಟ್ಟಗೆ ಲಿಂಕ್ ಇದೆ. ಮುಸ್ಲಿಮರು ಪ್ರಚೋದನೆಗೆ ಒಳಗಾಗಬೇಕೆನ್ನುವುದೇ ಸಂಘಪರಿವಾರದ ಅಜೆಂಡ. ಮುಸ್ಲಿಮರು ಘರ್ಷಣೆಗೆ ಇಳಿದರೆ ಸಂಘಪರಿವಾರಕ್ಕೆ ಲಾಭವಾಗುತ್ತದೆ. ಪೊಲೀಸರಲ್ಲಿ ಕೂಡಾ ಆರೆಸ್ಸೆಸ್ ಲಿಂಕ್ ಇದ್ದವರು ಇದ್ದಾರೆ. ನಾಲ್ಕು ಮಂದಿ ಪೊಲೀಸರು ತೆಗೆಯಿರಿ ಎಂದು ಹೇಳಿ ವರ್ಷ ಒಂದಾಯಿತು. ಆದರೆ ನೀವು ಕೇಳುತ್ತಿಲ್ಲ". 

"ಬಂಟ್ವಾಳದಲ್ಲಿ ಶಾಂತಿ ನೆಲೆಸಬೇಕು. ಪ್ರಭಾಕರ ಭಟ್ಟ ಶಾಂತಿ ನೆಲೆಸಲು ಬಿಡುವುದಿಲ್ಲ. ಅವರಿಗೆ ಅಜೆಂಡಾಗಳಿದೆ. ಅವರು ಮಿಥುನ್‍ನನ್ನು ಸಾಕುವುದು ಅವನ ಮೇಲೆ ಪ್ರೀತಿಯಿಂದಲ್ಲ. ಪ್ರಭಾಕರ ಭಟ್ಟಗೆ ವ್ಯಾಪಾರ ಇದೆ. ಅವರೊಬ್ಬ ರಿಯಲ್‍ ಎಸ್ಟೇಟ್. ಅವರ ವ್ಯಾಪಾರ ಮಾಡಲು ಮಿಥುನ್‍ನನ್ನು ಸಾಕುತ್ತಿದ್ದಾರೆ. ಕಲ್ಲಡ್ಕದಲ್ಲಿ ಮಾಡಿರುವ ರಾಮ ಮಂದಿರಕ್ಕೆ ಅವರು 50ರಿಂದ 60 ಕೋಟಿ ದೇಣಿಗೆ ಸಂಗ್ರಹಿಸಿದ್ದಾರೆ. ಅದು 60 ಕೋಟಿ ರೂಪಾಯಿಯ ಕಟ್ಟಡವೇ. ಅದು ರಾಮ ಮಂದಿರವೇ. ಅದು ಕಮಷ್ಯ್ರಲ್ ಕಾಂಪ್ಲೆಕ್ಸ್. ಪ್ರಭಾಕರ ಭಟ್ಟರದ್ದು ವ್ಯಾಪಾರ".

ಇದು ವಿಡಿಯೋ ಕ್ಲಿಪ್ಪಿಂಗ್ ನಲ್ಲಿರುವ ಸಚಿವ ರಮಾನಾಥ ರೈಯವರ ಮಾತುಗಳು.

Full View Full View Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News