ಜರ್ಮನಿ: ಭಯೋತ್ಪಾದನೆ ವಿರುದ್ಧ ಮುಸ್ಲಿಮರ ಶಾಂತಿ ಯಾತ್ರೆ
Update: 2017-06-18 13:57 GMT
ಬರ್ಲಿನ್, ಜೂ. 18: ಜರ್ಮನಿಯ ಕೊಲೋನ್ ನಗರದಲ್ಲಿ ಶನಿವಾರ ಮುಸ್ಲಿಮರು ಭಯೋತ್ಪಾದನೆಯ ವಿರುದ್ಧ ‘ಶಾಂತಿ ಯಾತ್ರೆ’ಯನ್ನು ಕೈಗೊಂಡರು.
ಮೆರವಣಿಗೆಕಾರರು ‘ಭಯೋತ್ಪಾದನೆ ವಿರುದ್ಧ ಒಂದಾಗಿ’ ಮತ್ತು ‘ದ್ವೇಷವು ಭೂಮಿಯನ್ನು ನರಕಗೊಳಿಸುತ್ತದೆ’ ಎಂಬ ಘೋಷಪತ್ರಗಳನ್ನು ಪ್ರದರ್ಶಿಸಿದರು.
ಆದಾಗ್ಯೂ, ದೇಶದ ಅತಿ ದೊಡ್ಡ ಮುಸ್ಲಿಮ್ ಸಂಘಟನೆ ‘ಟರ್ಕಿಶ್ ಇಸ್ಲಾಮಿಕ್ ಯೂನಿಯನ್’ ಶಾಂತಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿಲ್ಲ. ಅಂತಾರಾಷ್ಟ್ರೀಯ ಭಯೋತ್ಪಾದನೆ ಮುಖ್ಯವಾಗಿ ಮುಸ್ಲಿಮ್ ಸಮಸ್ಯೆ ಎಂಬುದಾಗಿ ಬಿಂಬಿಸುವ ಮೂಲಕ ತಪ್ಪು ಸಂದೇಶವನ್ನು ಕಳುಹಿಸಲಾಗುತ್ತದೆ ಎನ್ನುವುದು ಅದರ ವಾದ.
ಅದೂ ಅಲ್ಲದೆ, ರಮಝಾನ್ ಉಪವಾಸ ಆಚರಿಸುತ್ತಿರುವ ಮುಸ್ಲಿಮರು ಬೇಸಿಗೆಯ ಬಿಸಿಲಿನಲ್ಲಿ ಗಂಟೆಗಳ ಕಾಲ ನಿಲ್ಲಬೇಕೆಂದು ನಿರೀಕ್ಷಿಸುವುದು ಸರಿಯಲ್ಲ ಎಂಬುದಾಗಿಯೂ ಅದು ಹೇಳಿದೆ.