ರೋಟರಿ ಕ್ಲಬ್ನಿಂದ ಇಫ್ತಾರ್ ಕೂಟ
ಪಡುಬಿದ್ರಿ,ಜೂ.19: ಆತ್ಮ ಶುದ್ದೀಕರಣಕ್ಕೆ ಉಪವಾಸ ಒಂದು. ಉತ್ತಮ ಆಚರಣೆ. ಕೇವಲ ಉಪವಾಸವನ್ನು ಹಿಡಿದರೆ ಸಾಲದು ಅದರೊಂದಿಗೆ ದುಶ್ಚಟಗಳಿಂದಲೂ ದೂರ ಇರಬೇಕು ಎಂದು ಉತ್ತರ ಕರ್ನಾಟಕದ ಇಹ್ಸಾನ್ ದಾಈ ತಂಡದ ಅಮೀರ್ ಮೌಲಾನಾ ಹುಸೈನ್ ಸಅದಿ ಹೊಸ್ಮಾರ್ ಹೇಳಿದರು.
ಅವರು ಶನಿವಾರ ಪಡುಬಿದ್ರಿ ಪಲ್ಲವಿಯ ಪಿಂಗಾರ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಆಯೋಜಿಸಿದ ಇಫ್ತಾರ್ ಕೂಟದಲ್ಲಿ ಮಾತನಾಡಿದರು.
ಎಲ್ಲಾ ಧರ್ಮ, ಜಾತಿ ಸೌಹಾರ್ದತೆಯಿಂದ ಬದುಕುವ ಭಾರತ ಒಂದು ಉದ್ಯಾನವನ. ಮುಸ್ಲಿಮರು ಆಚರಿಸುವ ಉಪವಾಸಕ್ಕೆ ಎಲ್ಲಾ ಧರ್ಮದವರು ಗೌರವಿಸುತ್ತಾರೆ. ಇದೇ ರೀತಿ ಎಲ್ಲಾ ಧರ್ಮಗಳ ಆಚರಣೆಯನ್ನು ನಾವು ಗೌರವಿಸಬೇಕು. ಆಗ ಮಾತ್ರ ಸೌಹಾರ್ದತೆಯ ಸಂದೇಶ ನೀಡಲು ಸಾಧ್ಯ ಎಂದರು.
ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಪಡುಬಿದ್ರಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ವೈ.ಸುಕುಮಾರ್, ತಾಲ್ಲೂಕು ಪಂಚಾಯ್ತಿ ಸದಸ್ಯ ದಿನೇಶ್ ಫಲಿಮಾರ್, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ರಮೀರ್ ಹುಸೈನ್, ಕಾರ್ಯಕ್ರಮ ನಿರ್ದೇಶಕ ಇಸ್ಮಾಯಿಲ್ ಫಲಿಮಾರ್, ಕಾರ್ಯದರ್ಶಿ ಕರುಣಾಕರ್ ನಾಯಕ್ ಉಪಸ್ಥಿತರಿದ್ದರು.