×
Ad

ಫಲಾಪೇಕ್ಷೆಯಿಲ್ಲದೆ ಸಮಾಜ ಸೇವೆ ಮಾಡಿ: ವಂ.ಪ್ರಶಾಂತ್ ಕರೆ

Update: 2017-06-19 20:01 IST

ಪುತ್ತೂರು, ಜೂ.19: ಸಂಘ-ಸಂಸ್ಥೆ-ಸಂಘಟನೆ ಯಾವುದೇ ಇರಲಿ, ಪ್ರಥಮವಾಗಿ ಸಂಘಟನೆಯು ತಮ್ಮ ಉದ್ದೇಶ ಮತ್ತು ಗುರಿ ಇವೆರಡನ್ನು ಅರಿಯುವಂತಾಗಬೇಕು. ಜೊತೆಗೆ ತಾವು ಮಾಡುವ ಸಮಾಜ ಸೇವೆಯು ಯಾವುದೇ ಫಲಾಪೇಕ್ಷೆಯನಿಟ್ಟು ಮಾಡುವಂತಾಗಿರಬಾರದು ಎಂದು ಬನ್ನೂರು ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರು ವಂ.ಪ್ರಶಾಂತ್ ಫೆರ್ನಾಂಡೀಸ್ ಕರೆ ನೀಡಿದರು.

ಅವರು ಭಾನುವಾರ ಪುತ್ತೂರು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಜರಗಿದ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿಎಲ್‌ಸಿ) ಸಂಸ್ಥೆಯ 40ನೇ ಸ್ಥಾಪನಾ ದಿನಾಚರಣೆ, ಸಹ-ಮಿಲನ, ವಿದ್ಯಾರ್ಥಿವೇತನ ವಿತರಣೆ, ವೈದ್ಯಕೀಯ ನೆರವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಂಘಟನೆಯನ್ನು ಸ್ಥಾಪನೆ ಮಾಡುವ ಉದ್ದೇಶ ಸಂಘಟನೆಯು ದೀರ್ಘ ಬಾಳ್ವಿಕೆಯನ್ನು ಪಡೆಯಬೇಕೆಂದು. ಸಮಾಜದಲ್ಲಿ ಯಾರು ಅಶಕ್ತರಿದ್ದಾರೋ ಅವರನ್ನು ಗುರುತಿಸಿ ಸಂಘಟನೆಯ ಮುಖಾಂತರ ಸೇವೆಯನ್ನು ನೀಡುವುದು ಜನ ಮೆಚ್ಚುವ ಕಾರ್ಯವಾಗಿದೆ ಮಾತ್ರವಲ್ಲದೆ ಅಂತಹ ಕಾರ್ಯವನ್ನು ದೇವರು ಕೂಡ ಆಶೀರ್ವದಿಸುತ್ತಾರೆ ಎಂದ ಅವರು ನಮ್ಮ ಜೀವನದಲ್ಲಿ ಸ್ವಾರ್ಥವನ್ನು ಮೈಗೂಡಿಸಿಕೊಳ್ಳದೆ ಇತರರಿಗೋಸ್ಕರ ಜೀವನವನ್ನು ಮುಡುಪಾಗಿಡಬೇಕು. ಈ ನಿಟ್ಟಿನಲ್ಲಿ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ಸದಸ್ಯರು ಸಮಾಜ ಸೇವೆಯನ್ನು ಮಾಡುವ ಮೂಲಕ ಎಲ್ಲರ ಪ್ರೀತಿಯನ್ನು ಗಳಿಸಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆತ್ಮಿಕ ನಿರ್ದೇಶಕ, ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂಆಲ್ಫ್ರೆಡ್ ಜಾನ್ ಪಿಂಟೋ ಮಾತನಾಡಿ, ವಿವಿಧ ಸಂಘ-ಸಂಸ್ಥೆಗಳು ಮಾದೆ ದೇವುಸ್ ಚರ್ಚ್ ವಠಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಪ್ರತಿಯೊಂದು ಸಂಘ-ಸಂಸ್ಥೆಗಳ ಉದ್ಧೇಶ ಬೇರೆ ಬೇರೆಯಾಗಿದೆ. ಧಾರ್ಮಿಕತೆಗೆ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ವಿವಿಧ ಸಂಘ-ಸಂಸ್ಥೆಗಳು ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ. ಸಿಎಲ್‌ಸಿ ಸಂಸ್ಥೆಯು ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಡಿಡಿಪಿಐ ವಾಲ್ಟರ್ ಡಿ’ಮೆಲ್ಲೋ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್‌ರವರು ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮನೆ-ಮನ ಭೇಟಿ ಕಾರ್ಯಕ್ರಮದ 28ನೇ ಸ್ಥಾನದಲ್ಲಿದ್ದ ಜಿಲ್ಲೆಯು ಪ್ರಸ್ತುತ ದ್ವಿತೀಯ ಸ್ಥಾನಕ್ಕೆ ಲಗ್ಗೆಯಿಡುವ ಮೂಲಕ ಪುತ್ತೂರಿನಲ್ಲಿ ಮಾತ್ರವಲ್ಲದೆ ರಾಷ್ಟ್ರದಲ್ಲಿಯೇ ಶಿಕ್ಷಣದಲ್ಲಿ ಕ್ರಾಂತಿ ಎಬ್ಬಿಸಿದೆ ಎಂದು ಹೇಳಿದರು.


ದಿವ್ಯ ಬಲಿಪೂಜೆ: ಸ್ಥಾಪನಾ ದಿನಾಚರಣೆಯ ಪ್ರಯುಕ್ತ ಬನ್ನೂರು ಚರ್ಚ್‌ನ ಪ್ರಧಾನ ಧರ್ಮಗುರು ವಂ.ಪ್ರಶಾಂತ್ ಫೆರ್ನಾಂಡೀಸ್‌ರವರು ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂಆಲ್ಫ್ರೆಡ್ ಜಾನ್ ಪಿಂಟೋ, ಸಹಾಯಕ ಧರ್ಮಗುರು ವಂಪ್ರವೀಣ್ ಡಿ’ಸೋಜ, ವಂಮ್ಯಾಕ್ಸಿಂ ಡಿ’ಸೋಜ, ಹಿರಿಯರಾದ ವಂವಲೇರಿಯನ್ ಮಸ್ಕರೇನ್ಹಸ್‌ರವರು ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ದ.ಕ.ಜಿಲ್ಲಾ ಉಪ ನಿರ್ದೇಶಕ ವಾಲ್ಟರ್ ಡಿ’ಮೆಲ್ಲೋ ಅವರನ್ನು ಸನ್ಮಾನಿಸಲಾಯಿತು. ಪಿಯುಸಿ ಹಾಗೂ ಪದವಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಪ್ರೀತಿ ಜ್ಯೋತ್ಸ್ನಾ ಸೆರಾವೋ, ಶರೂನ್ ಫೆರ್ನಾಂಡೀಸ್, ಡಿಂಪಲ್ ಮಿಶಲ್ ತಾವ್ರೋ, ಆ್ಯನ್ಸಿಲ್ಲಾ ಮಿಶಲ್ ಗೊನ್ಸಾಲ್ವಿಸ್, ಡಯಾನಾ ವೇಗಸ್, ಶರೆಲ್ ಶೆಲ್ಮಾ ಡಿ’ಸೋಜ, ಜೆನಿಟಾ ಡಿ’ಸೋಜ, ದಿಲೀಪ್ ಡೆಲ್ಮಂಡ್ ಡಿ’ಸೋಜ, ವನಿತ ಡಿ’ಸೋಜ, ಜಸ್ವಿಟಾ ಆನ್ಸ್ ಗೊನ್ಸಾಲ್ವಿಸ್, ಮಿಶಲ್ ಸಿಯೋನಾ ಮಿನೇಜಸ್ ಅವರಿಗೆ ವಿದ್ಯಾರ್ಥಿವೇತನ ನೀಡಲಾಯಿತು.

 ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆ.ಪಿ ರೊಡ್ರಿಗಸ್, ಸಂಘದ ಸ್ಥಾಪಕಾಧ್ಯಕ್ಷ ಮೌರಿಸ್ ಗೊನ್ಸಾಲ್ವಿಸ್, ನಗರಸಭಾ ನಾಮ ನಿರ್ದೇಶಿತ ಸದಸ್ಯ ಜೋಕಿಂ ಡಿ’ಸೋಜ, ಸಂಘ-ಸಂಸ್ಥೆಗಳ ಹುದ್ದೆದಾರರು, ವಾಳೆ ಗುರಿಕಾರರು, ಧರ್ಮಭಗಿನಿಯರು, ಪುತ್ತೂರು, ಮರೀಲ್ ಹಾಗೂ ಬನ್ನೂರು ವ್ಯಾಪ್ತಿಯ ಹಿತೈಷಿಗಳು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ವಿಲಿಯಂ ನೊರೊನ್ಹಾ ಸ್ವಾಗತಿಸಿ, ಕೋಶಾಧಿಕಾರಿ ವಿನ್ಸೆಂಟ್ ಮಸ್ಕರೇನ್ಹಸ್ ವಂದಿಸಿದರು. ಕಾರ್ಯದರ್ಶಿ ಮಾರ್ಟಿನ್ ಡಿ’ಸೋಜ ವರದಿ ಮಂಡಿಸಿದರು. ಪಾವ್ಲ್ ಹೆರಾಲ್ಡ್ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News