ಸಂಸ್ಥೆ ಹೆಸರಿನಲ್ಲಿ ವಂಚನೆ: ದೂರು
Update: 2017-06-20 16:14 GMT
ಉಡುಪಿ, ಜೂ.20: ಬ್ರಹ್ಮಗಿರಿಯ ಸನಿಲ್ ಪ್ಲಾಜಾದಲ್ಲಿರುವ ಪರಿಣಿತ ಪ್ರೋಪರ್ಟಿಸ್ ಆ್ಯಂಡ್ ಇನ್ಫ್ರಸ್ಟಕ್ಚರ್ ಲಿಮಿಟೆಡ್ ಎಂಬ ಸಂಸ್ಥೆ ಏಜೆಂಟರುಗಳ ಮೂಲಕ ಸಂಗ್ರಹಿಸಿದ ಹಣವನ್ನು ಗ್ರಾಹಕರಿಗೆ ವಾಪಾಸ್ಸು ನೀಡದೆ ಮೋಸ ಮಾಡಿರುವ ಬಗ್ಗೆ ವರದಿಯಾಗಿದೆ.
ಸಂಸ್ಥೆಯ ಆಡಳಿತ ನಿರ್ದೇಶಕ ಮಂಜುನಾಥ್ ಎಂಬವರು ಏಜೆಂಟರುಗಳ ಮೂಲಕ ಹಿರಿಯಡ್ಕ ಪಾಪುಜೆಯ ಸುಧಾಕರ(42) ಎಂಬವರಿಂದ ಮಾಸಿಕ 500ರೂ.ನಂತೆ 2013ರಿಂದ 2016ರವರೆಗೆ ಒಟ್ಟು 18,000 ರೂ. ಹಣವನ್ನು ಪಡೆದುಕೊಂಡಿದ್ದು, ನಿಯಮದಂತೆ ಸಂಸ್ಥೆಯು ಸುಧಾಕರ್ ಅವರಿಗೆ 23,000 ರೂ. ಪಾವತಿಸಬೇಕಾಗಿತ್ತು. ಆದರೆ ರಾಜ್ಯದ ಕೆಲವು ಕಡೆಗಳಲ್ಲಿ ಶಾಖೆಯನ್ನು ಹೊಂದಿರುವ ಮಂಜುನಾಥ್, ಹಣ ಪಾವತಿಸುವ ಅವಧಿ ಮುಗಿದರೂ ಹಣ ಪಾವತಿಸದೆ ತನ್ನ ಕಂಪೆನಿಯ ಎಲ್ಲಾ ಶಾಖೆಗಳನ್ನು ಬಂದ್ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.