ಪದವಿ ಕಾಲೇಜುಗಳಲ್ಲಿ ಯೋಗ ಶಿಕ್ಷಣ ಅಳವಡಿಸಲಿ: ವೆಂಕಟೇಶ್ ನಾಯ್ಕ
ಉಡುಪಿ, ಜೂ.21: ಇಂದು ಎಲ್ಲ ಕಡೆಗಳಲ್ಲಿ ಯೋಗ ತರಬೇತುದಾರರ ಕೊರತೆ ಎದುರಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಪದವಿ ಕಾಲೇಜುಗಳಲ್ಲಿ ಯೋಗ ಶಿಕ್ಷಣವನ್ನು ಅಳವಡಿಸಬೇಕು. ಇದರಿಂದ ಸಾಕಷ್ಟು ಯೋಗ ಪ್ರವೀಣ ರನ್ನು ಸೃಷ್ಟಿಸಬಹುದಾಗಿದೆ ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕ ಟಿ. ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಭಿಯೋಜನಾ ಇಲಾಖೆ ಹಾಗೂ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಬುಧವಾರ ಆಯೋಜಿಸಲಾದ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಏಕಾಗ್ರತೆ, ಶಿಸ್ತಿನ ಜೀವನ, ಶುದ್ಧ ಚಾರಿತ್ರ, ಒತ್ತಡ ನಿವಾರಣೆ, ಸಮಸ್ಯೆ ಪರಿಹಾರದ ಬಗ್ಗೆ ಸೂಕ್ತ ನಿರ್ಧಾರ, ಆತ್ಮಪ್ರಜ್ಞೆ ಇವುಗಳು ಯೋಗದಿಂದ ದೊರೆ ಯುತ್ತದೆ. ಅಲ್ಲದೆ ದೇಹ ಹಾಗೂ ಮನಸ್ಸಿನ ನಿಯಂತ್ರಣ ಯೋಗದಿಂದ ಸಾಧ್ಯ ಎಂದ ಅವರು, ವಕೀಲರು ಯೋಗಾಭ್ಯಾಸ ಮಾಡುವುದರಿಂದ ಒತ್ತಡ ಕಡಿಮೆ ಆಗಿ ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಚ್.ರತ್ನಾಕರ ಶೆಟ್ಟಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಯೋಗ ತಜ್ಞ ಡಾ.ತನ್ಮಯ ಗೋಸ್ವಾಮಿ ಮಾತನಾಡಿ ದರು. ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಉಪಸ್ಥಿತರಿದ್ದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಬ್ಬಾರ್ ಸ್ವಾಗತಿಸಿದರು. ಅಖಿಲ್ ಬಿ.ಹೆಗ್ಡೆ ವಂದಿಸಿದರು. ರಾಜೇಶ್ ಎ.ಆರ್. ಕಾರ್ಯಕ್ರಮ ನಿರೂ ಪಿಸಿದರು.