ಅಂಗನವಾಡಿ ಕಾರ್ಯಕರ್ತೆ ವೇದಾವತಿ ಪಿ.ಎಸ್. ರಿಗೆ ರಾಜ್ಯ ಪ್ರಶಸ್ತಿ

Update: 2017-06-22 17:25 GMT

ಕಡಬ, ಜೂ.22. ಎಳೆಯ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣದ ಅರಿವು ಮೂಡಿಸುವುದು ಅಂಗನವಾಡಿ ಕೇಂದ್ರ. ಮಕ್ಕಳನ್ನು ಬೆಳೆಸುವ ಸಂದರ್ಭದಲ್ಲಿ ತಾಯಂದಿರ ಪಾತ್ರದಷ್ಟೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಜವಾಬ್ದಾರಿ ಬಹಳ ಮಹತ್ತರವಾದುದು. ಇಂತಹ ಪರಿಶ್ರಮದ ಕೆಲಸವನ್ನು ಗುರುತಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊಲ ಗ್ರಾಮದ ಏಣಿತಡ್ಕ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವೇದಾವತಿ ಅವರಿಗೆ 2016-17 ಸಾಲಿನ ರಾಜ್ಯ ಅತ್ಯುತ್ತಮ ಕಾರ್ಯಕರ್ತೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದೆ.

ಅಂಗನವಾಡಿ ಕೇಂದ್ರದ ಸ್ವಚ್ಚತೆ, ವೃತ್ತಿಪರತೆ, ಇಲಾಖಾ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಮೊದಲಾದ ಪಾರದರ್ಶಕ ವೃತ್ತಿ ಕೈಕಂರ್ಯವನ್ನು ಗುರುತಿಸಿ ಇಲಾಖೆ ನೀಡುವ ಪ್ರಶಸ್ತಿ ವೇದಾವತಿ ಅವರಿಗೆ ಲಭಿಸಿದೆ.

ಅಂಗನವಾಡಿ ಮಾದರಿ: ಮಕ್ಕಳನ್ನು ಆಕರ್ಷಿಸುವ ಎಲ್ಲ ಬಗೆಯ ಸೌಕರ್ಯ ಇಲ್ಲಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡುವ ಸುಸಜ್ಜಿತ ಅಡುಗೆ ಕೋಣೆ, ಜತೆಗೆ ಇಲ್ಲಿ ನೀಡಲಾಗುವ ಆಟ-ಪಾಠಗಳು ಮಕ್ಕಳಿಗೆ ಮಾನಸಿಕ ಸ್ಥೈರ್ಯವನ್ನು ತುಂಬಿಕೊಡುತ್ತಿದೆ. ಒಪ್ಪ ಓರಣವಾಗಿ ಕೊಠಡಿಯ ತುಂಬಾ ಜೋಡಿಸಲಾದ ಕಾರ್ಯಕರ್ತೆ ತಯಾರಿಸಿದ ಬೋಧನ ಉಪಕರಣ, ಮಕ್ಕಳಿಗಾಗಿ ಊರವರ ಸಹಕಾರದಿಂದ ನಿರ್ಮಿಸಲಾದ ತೂಗುಯ್ಯಿಲೆ, ಚಿಣ್ಣರ ಕುಟೀರ, ಸುಂದರ ಹೂದೋಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆರ್ಥಿಕ ಸಹಾಯದಿಂದ ನಿರ್ಮಾಣವಾದ ಆವರಣ ಗೋಡೆ, ಸ್ಥಳೀಯರು ಹಾಗೂ ಸ್ಥಳೀಯ ಶ್ರೀರಾಮ ಗೆಳೆಯರ ಬಳಗದ ನೆರವಿನಿಂದ ನಿರ್ಮಿಸಲಾದ ಆಟದ ಮೈದಾನ, ಪುಟಾಣಿಗಳ ಸೃಜನಾತ್ಮಕ ಬೆಳವಣಿಗೆಗೆ ವಿವಿಧ ಸ್ಪರ್ದೆಗಳ ಅಯೋಜನೆ, ಗೋಡೆಯ ಮೇಲೆ ಪ್ರತಿ ವಾರದ ಬೋಧನೆ ವಿಷಯ ಚಿತ್ರ ರೂಪದಲ್ಲಿದೆ. ಮಕ್ಕಳಿಗೆ ಪೋಷಣೆಗೆ ಸಿಗುವ ಆಹಾರ ವೈವಿದ್ಯಗಳ ಪಟ್ಟಿಯೇ ಗೋಡೆಗಳ ಮೇಲೆ ಅನಾವರಣಗೊಂಡಿದೆ. ಸ್ಥಳಿಯಾಡಳಿತದಿಂದ ಕಾಂಪೋಸ್ಟ್ ಪೈಪು, ಮಳೆಕೊಯ್ಲ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸುಸಜ್ಜಿತವಾಗಿ ಕಟ್ಟಡ ನಿರ್ಮಿಸಲಾಗಿದೆ. ಹೀಗೆ ಮೊದಲಾದ ಕಾರ್ಯ ಯೋಜನೆ, ಹತ್ತು ಹಲವಾರು ಕೊಡುಗೆಗಳ ಮೂಲಕ ಮಾದರಿ ಅಂಗನವಾಡಿಯಾಗಿ ರೂಪುಗೊಂಡಿದೆ. ಅಂಗನವಾಡಿ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಸಮವಸ್ತ್ರ:

ವಾರದಲ್ಲಿ ಮೂರು ದಿನ ಸಮವಸ್ತ್ರದಲ್ಲಿರುವ ಪುಟಾಣಿಗಳು ವಿಶೇಷವಾಗಿ ಗಮನ ಸೆಳೆಯುತ್ತಾರೆ. ಇದೆಲ್ಲ ಇಲ್ಲಿನ ಕ್ರಿಯಾಶೀಲ ಕಾರ್ಯಕರ್ತೆ ಹಾಗೂ ಸಹಾಯಕಿ ಮತ್ತು ಬಾಲವಿಕಾಸ ಸಮಿತಿ, ಪೋಷಕರ ಪ್ರೋತ್ಸಾಹದಿಂದ ಮಾದರಿಯಾಗಿ ರೂಪುಗೊಂಡಿದೆ. 2010-11 ಸಾಲಿನಲ್ಲಿ ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ ಗ್ರಾಮಾಭಿವೃದ್ದಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಅಂಗನವಾಡಿಗೆ ಪುತ್ತೂರು ತಾಲೂಕು ಮಟ್ಟದಲ್ಲಿ ನೈರ್ಮಲ್ಯ ಪ್ರಶಸ್ತಿ ಲಭಿಸಿದೆ. ಬಾಲಸ್ನೇಹಿ ಯೋಜನೆಗೆ ಅಂಗನವಾಡಿ ಸೇರ್ಪಡೆಗೊಂಡಿದ್ದು ಯೋಜನೆಯ ಉದ್ದೇಶದಂತೆ ಗೋಡೆ ಬರಹಗಳನ್ನು ಮಾಡಲಾಗುತ್ತಿದೆ. ಇದೀಗ ಮತ್ತೊಂದು ಪ್ರಶಸ್ತಿ ಲಭಿಸಿದ್ದರಿಂದ ಸಂತುಷ್ಟವಾಗಿದ್ದೇನೆ ಎನ್ನುತಾರೆ ವೇದಾವತಿ.  

1989ರಲ್ಲಿ ಆರಂಭಗೊಂಡ ಅಂಗನವಾಡಿ ಕೇಂದ್ರದಲ್ಲಿ ಈ ಹಿಂದೆ ಸ್ತ್ರೀಯರಿಗಾಗಿದ್ದ ಸರಕಾರದ ಬಾಕ್ರ ಸಂಘಟನೆಯನ್ನು ನಡೆಸಲಾಗುತ್ತಿತ್ತು. ಬಳಿಕ ಅಂಗನವಾಡಿ ಕೇಂದ್ರದಲ್ಲಿ ಸ್ತ್ರೀ ಸಂಘಟನೆಯ 3 ಗುಂಪುಗಳಿವೆ. ಸ್ತ್ರೀ ಶಕ್ತಿ ಸಂಘಟನೆಯ ಸದಸ್ಯರು, ಕಾರ್ಯಕರ್ತೆಯರು ಅಭಿವೃದ್ದಿ ಯೋಜನೆಗೆ ಸದಾ ಬೆಂಬಲವಾಗಿ ನಿಂತಿದೆ - ವೇದಾವತಿ ಪಿ ಎಸ್ , ಅಂಗನವಾಡಿ ಕಾರ್ಯಕರ್ತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News