ಧರ್ಮಭೇದ ಮೀರಿ ಮಾನವೀಯತೆ ಮೆರೆದ ಬಿರುವೆರ್ ಕುಡ್ಲ

Update: 2017-06-23 12:52 GMT

ಮಂಗಳೂರು, ಜೂ. 23: ಫ್ರೆಂಡ್ಸ್ ಬಲ್ಲಾಳ್-ಬಿರುವೆರ್ ಕುಡ್ಲದ ವತಿಯಿಂದ  ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುಟ್ಟ ಬಾಲೆಗೆ ಧನ ಸಹಾಯ ಮಾಡುವ ಮೂಲಕ ಚಿಕಿತ್ಸೆಗೆ ಮಾನವೀಯತೆಯ ನೆಲೆಯಲ್ಲಿ ಸ್ಪಂದಿಸಿದೆ.

ಬಿರುವೆರ್ ಕುಡ್ಲ-ಫ್ರೆಂಡ್ಸ್ ಬಲ್ಲಾಳ್‌ಬಾಗ್ ಜಾತ್ಯಾತೀತ ನೆಲೆಯಲ್ಲಿ ಸಮಾಜದಲ್ಲಿ ನೆರವಿನ ಹಸ್ತ ಚಾಚುತ್ತಿದೆ. ಕಳೆದ ಮೂರು ವರ್ಷಗಳಿಂದ ಜಾತಿ-ಮತ-ಭೇದ ಎನ್ನದೆ ಪುಟ್ಟ ಮಗುವಿನಿಂದ ಹಿಡಿದು ಹಿರಿಯರವರೆಗೆ ಆರೋಗ್ಯ, ಶೈಕ್ಷಣಿಕ ಮತ್ತಿತರ ಕಾರ್ಯಗಳಿಗೆ ಧನ ಸಹಾಯ ನೀಡಿ ಬಡ ಕುಟುಂಬಗಳಿಗೆ ಸಹಾಯ ಮಾಡುತ್ತಿದೆ.

ಇದೀಗ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಹಳೆಯಂಗಡಿ ನಿವಾಸಿ 9 ವರ್ಷದ ಮರಿಯಮ್ ಸಹಿರಾ ಎಂಬ ಪುಟ್ಟ ಬಾಲಕಿಗೆ ಕೆಲವೇ ಗಂಟೆಗಳಲ್ಲಿ 40,000 ರೂ. ನಿಧಿ ಸಂಗ್ರಹಿಸಿ ನೀಡಿದೆ. ಮಂಗಳೂರಿನ ಅತ್ತಾವರದಲ್ಲಿರುವ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮರಿಯಮ್ ಸಹಿರಾಗೆ ಬಿರುವೆರ್ ಕುಡ್ಲ - ಫ್ರೆಂಡ್ಸ್ ಬಲ್ಲಾಳ್ ಬಾಗ್ ಸಂಘಟನೆ ಮುಖಂಡರು ಭೇಟಿ ನೀಡಿ ಆರ್ಥಿಕ ಸಹಾಯ ಒದಗಿಸಿದರಲ್ಲದೆ ಶೀಘ್ರ ಗುಣಮುಖವಾಗಲೆಂದು ಹಾರೈಸಿದರು.

ಬಿರುವೆರ್ ಕುಡ್ಲ ಇದರ ಅಧ್ಯಕ್ಷ ರಾಕೇಶ್ ಪೂಜಾರಿ ಮಾತನಾಡಿ, ಬಿರುವೆರ್ ಕುಡ್ಲ ಕಳೆದ 3 ವರ್ಷದಲ್ಲಿ ಜಾತಿ-ಮತ-ಭೇದ ಮಾಡದೆ ಸಹಾಯ ಹಸ್ತ ಒದಗಿಸುತ್ತಾ ಬಂದಿದೆ. ಪಕ್ಷಾತೀತವಾಗಿ ಬಿರುವೆರ್ ಕುಡ್ಲ ಸಮಾಜ ಮುಖೀಯಾಗಿ ಕಾರ್ಯ ನಿರ್ವಹಿಸುತ್ತಾ ಬರುತ್ತಿದೆ ಎಂದರು.

ಮೊಹ್ಮದ್ ಅಸೀಮ್ ಮಾತನಾಡಿ ಸಂಘಟನೆಯು ಕೆಲವೇ ಗಂಟೆಗಳಲ್ಲಿ ಆರ್ಥಿಕ ನಿಧಿ ಸಂಗ್ರಹಿಸಿ ಬಾಲಕಿಯ ಚಿಕಿತ್ಸೆಗೆ ಸ್ಪಂದಿಸಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಅಮೃತ್ ಕದ್ರಿ ಹಾಗೂ ಬಿಜೆಪಿ ಮುಖಂಡ ಸೂರಜ್ ಕಲ್ಯ ಅವರು ಬಿರುವೆರ್ ಕುಡ್ಲ ಸಂಘಟನೆಯ ಸಮಾಜಮುಖೀ ಕಾರ್ಯವನ್ನು ಶ್ಲಾಘಿಸಿದರು.

ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್‌ಬಾಗ್, ಉದ್ಯಮಿ ರವೀಂದ್ರ ನಿಕ್ಕಮ್, ಅಭಿಷೇಕ್ ಅಮೀನ್, ಲೋಹಿತ್ ಗಟ್ಟಿ, ಕಿಶೋರ್ ಬಾಬು, ರಿನಿತ್‌ರಾಜ್, ಯತೀಶ್ ಬಲ್ಲಾಳ್‌ಬಾಗ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News