ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ
Update: 2017-06-23 14:07 GMT
ಉಡುಪಿ, ಜೂ.23: ಉಡುಪಿ ನಗರಸಭೆ ವ್ಯಾಪ್ತಿಯ ಶೇ.75ಕ್ಕಿಂತ ಅಧಿಕ ದೈಹಿಕ ಅಂಗವಿಕಲತೆ ಹೊಂದಿರುವ ಫಲಾನುಭವಿಗಳಿಗೆ ಎಸ್ಎಫ್ಸಿ ಶೇ.3ರ ನಿಧಿಯಡಿ ಸ್ವಯಂ ಚಾಲಿತ ತ್ರಿಚಕ್ರ ವಾಹನಗಳನ್ನು ಶುಕ್ರವಾರ ನಗರಸಭೆ ಕಚೇರಿ ಆವರಣದಲ್ಲಿ ವಿತರಿಸಲಾಯಿತು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಏಳು ಮಂದಿ ಫಲಾನುಭವಿಗಳಿಗೆ ತ್ರಿಚಕ್ರವನ್ನು ವಿತರಿಸಿದರು. ಒಂದು ತ್ರಿಚಕ್ರ ವಾಹನ ಬೆಲೆ 76,312ರೂ.ನಂತೆ ಒಟ್ಟು 5,34,184ರೂ. ಮೊತ್ತದ ವಾಹನವನ್ನು ವಿತರಿಸಲಾಗಿದೆ. ನಗರ ವ್ಯಾಪ್ತಿಯ ವಿಕಲಚೇತನರಿಗೆ ಇನ್ನಷ್ಟು ವಾಹನ ಕೊಡಲು ನಗರಸಭೆಯಲ್ಲಿ ಸಂಪನ್ಮೂಲಗಳಿದ್ದು, ಅರ್ಹರು ನಗರಸಭೆಯನ್ನು ಸಂಪರ್ಕಿಸು ವಂತೆ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾ ಧ್ಯಕ್ಷೆ ಸಂಧ್ಯಾ ತಿಲಕರಾಜ್, ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ, ಪೌರಾಯುಕ್ತ ಡಿ.ಮಂಜುನಾಥಯ್ಯ, ಸದಸ್ಯರಾದ ಯುವರಾಜ್, ಸೆಲಿನಾ ಕರ್ಕಡ, ಜರ್ನಾದನ ಭಂಡಾರ್ಕರ್ ಮೊದಲಾದವರು ಉಪಸ್ಥಿತರಿದ್ದರು.