3 ಲಕ್ಷ ನಗದು ಹಣವಿದ್ದ ಬ್ಯಾಗ್ ದೋಚಿದ ಕಳ್ಳರು

Update: 2017-06-23 15:16 GMT

ಪುತ್ತೂರು, ಜೂ.23: ವಿಳಾಸ ಕೇಳುವ ನೆಪದಲ್ಲಿ ಉದ್ಯಮಿಯೊಬ್ಬರ ಬಳಿಗೆ ಬಂದು ಅವರ ಗಮನವನ್ನು ಬೇರೆಡೆ ಸೆಳೆದು ರೂ. 3ಲಕ್ಷ ನಗದು ಹಣವಿದ್ದ ಹ್ಯಾಂಡ್ ಬ್ಯಾಗನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ಪುತ್ತೂರು ನಗರದ ಹೊರವಲಯ ಮಂಜಲ್ಪಡ್ಪು ಎಂಬಲ್ಲಿ ನಡೆದಿದೆ.

ಪುತ್ತೂರಿನ ನೆಹರು ನಗರ ಸಮೀಪದ ಮಂಜಲ್ಪಡ್ಪು ಎಂಬಲ್ಲಿರುವ ಮಂಗಳಾ ಸ್ಟೋರ್ಸ್‌ನ ಪಾಲುದಾರ ಸುದರ್ಶನ್ ಅವರ ಕೈಯಲ್ಲಿದ್ದ ರೂ. 3ಲಕ್ಷ ನಗದು ಹಣವಿದ್ದ ಹ್ಯಾಂಡ್‌ಬ್ಯಾಗ್‌ನ್ನು ಇಬ್ಬರು ಅಪರಿಚಿತರು ಕಸಿದುಕೊಂಡು ಪರಾರಿಯಾಗಿದ್ದು, ಘಟನೆಯ ಕುರಿತು ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.

 ಸುದರ್ಶನ್ ಅವರು ಗುರುವಾರ ರಾತ್ರಿ ಸಂಸ್ಥೆಯ ವ್ಯವಹಾರ ಮುಗಿಸಿ ದಿನದ ಸಂಗ್ರಹ ಮೊತ್ತವನ್ನು ಸಂಸ್ಥೆಯ ಇನ್ನೊಬ್ಬ ಪಾಲುದಾರರಾದ ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ್ ಅವರ ಮಂಜಲ್ಪಡ್ಪುವಿನ ಮನೆಗೆ ತಲುಪಿಸಲು ತನ್ನ ಆಕ್ಟೀವಾ ಹೋಂಡಾದಲ್ಲಿ  ತೆರಳಿದ್ದರು. ಮನೆಯಂಗಳ ಸಮೀಪ ಆಕ್ಟೀವಾ ನಿಲ್ಲಿಸಿ ನಗದು ಇದ್ದ ಹ್ಯಾಂಡ್ ಬ್ಯಾಗನ್ನು ಕೈಯಲ್ಲಿ ಹಿಡಿದುಕೊಂಡು ಸುದರ್ಶನ್ ಅವರು ಮನೆಗೆ ಹೋಗುತ್ತಿದ್ದಂತೆ ಮನೆಯಂಗಳದ ಗೇಟ್‌ನ ಎದುರಿಗೆ ಸ್ಕೂಟರೊಂದರಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ವಿಳಾಸ ಕೇಳುವ ನೆಪದಲ್ಲಿ ಸುದರ್ಶನ್ ಅವರ ಜೊತೆಗೆ ಮಾತಿಗಿಳಿದು ಅವರ ಗಮನ ಬೇರೆಡೆ ಸೆಳೆದು ಅವರ ಕೈಯಲ್ಲಿದ್ದ ಹ್ಯಾಂಡ್ ಬ್ಯಾಗ್‌ನ್ನು ಕಸಿದುಕೊಂಡು ಪರಾರಿಯಾಗಿದ್ದು, ಕೂಡಲೇ ಸುದರ್ಶನ್ ಅವರು ಅವರನ್ನು ಬೆನ್ನಟ್ಟಿದರೂ ಅವರು ಮಂಜಲ್ಪಡ್ಪು ತೋಟಗಾರಿಕಾ ಇಲಾಖೆಯ ಬಳಿಯ ರಸ್ತೆಯಿಂದಾಗಿ ಓಡಿ ಹೋಗಿ ಪರಾರಿಯಾಗುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿದು ಬಂದಿದೆ.

ಸುದರ್ಶನ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News