ಸಾಯಿ ಮಂದಿರದ ವತಿಯಿಂದ ಅಶಕ್ತ ಕುಟುಂಬಕ್ಕೆ ಮನೆ ನಿರ್ಮಾಣ
ಉಳ್ಳಾಲ, ಜೂ.27: ಸಮಾಜದ ಮೇಲ್ವರ್ಗದ ಜನರು ತಮ್ಮಲ್ಲಿರುವ ಸಂಪತ್ತಲ್ಲಿ ಸ್ವಲ್ಪವನ್ನು ಬಡ ಜನರ ಕಣ್ಣೀರೊರೆಸುವ ಕಾರ್ಯಕ್ಕೆ ವಿನಿಯೋಗಿಸಿದಲ್ಲಿ ಸಂತುಷ್ಟಗೊಂಡ ಬಡವನ ಮುಖದಲ್ಲೇ ದೇವರನ್ನು ಕಾಣಲು ಸಾಧ್ಯ ಎಂದು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಹೇಳಿದರು.
ಕೋಟೆಕಾರು ಮಾಡೂರಿನ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ವತಿಯಿಂದ ಕುಂಪಲದ ಆಶ್ರಯಕೊಲನಿ ನಿವಾಸಿಗಳಾದ ದಿನೇಶ್-ಚಂದ್ರಕಲಾ ದಂಪತಿಗಳಿಗೆ ನಿರ್ಮಿಸಿ ಕೊಡಲಾದ ಮನೆಯನ್ನು ಸೋಮವಾರದಂದು ಫಲಾನುಭವಿಗಳಿಗೆ ಹಸ್ತಾಂತರಿಸಿ ಅವರು ಆಶೀರ್ವಚನ ನೀಡಿದರು. ಸಮಾಜದಲ್ಲಿ ಕೆಲವೊಂದು ಮಂದಿಗೆ ದೇವರು ಸಾಕಾದಷ್ಟು ಧನ,ಕನಕಗಳನ್ನು ನೀಡಿದ್ದಾರೆ. ಐಶ್ವರ್ಯವೆಂಬುದು ಯಾರಲ್ಲೂ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಜೀವಿತಾವಧಿಯಲ್ಲಿ ಯಾವುದೋ ಅರ್ಥಹೀನ ಕಾರ್ಯಕ್ರಮಗಳು,ದುರುದ್ದೇಶಗಳಿಗೆ ಹಣವನ್ನು ಪೋಲು ಮಾಡುವುದರ ಬದಲು ಇಂತಹ ಅಶಕ್ತ ಕುಟುಂಬಗಳನ್ನು ಗುರುತಿಸಿ ಸಹಾಯ ಹಸ್ತ ನೀಡುವುದರಲ್ಲಿ ಮನಸ್ಸಿಗೆ ಸಿಗುವ ಸುಖ ವಿಭಿನ್ನವಾಗಿರುವುದರ ಜೊತೆಗೆ ದೇವರನ್ನು ಒಲಿಸುವ ಕಾರ್ಯ ನಡೆಸಬಹುದೆಂದು ನುಡಿದರು.
ಮಾಡೂರು ಶಿರಡಿ ಸಾಯಿ ಬಾಬಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಕೆ.ಪಿ ಸುರೇಶ್, ಮಂದಿರದ ಟ್ರಸ್ಟಿಗಳಾದ ಬಾಬು ಶಾಸ್ತ ಕಿನ್ಯ, ಶೇಖರ್ ಕೊಂಡೆವೂರು, ರವಿ ಕೊಂಡಾಣ, ಶಿರಡಿ ಸಾಯಿಬಾಬಾ ಸೇವಾ ಸಮಿತಿ ಅಧ್ಯಕ್ಷ ನವೀನ್ ಕೊಂಡಾಣ, ಮುಖಂಡರಾದ ಪ್ರವೀಣ್ ಕೊಂಡಾಣ, ಸ್ಥಳೀಯರಾದ ಭಾಸ್ಕರ್ ಗುರುಸ್ವಾಮಿ, ಸೋಮೇಶ್ವರ ಗ್ರಾ.ಪಂ ಸದಸ್ಯೆ ವತ್ಸಲಾ ಮೊದಲಾದವರು ಉಪಸ್ಥಿತರಿದ್ದರು. ಚಿತ್ರ:ಉಳ್ಳಾಲ್,ಜೂನ್-27=1(1)ಮಾಡೂರು ಶಿರಡಿ ಸಾಯಿಬಾಬಾ ಮಂದಿರದಿಂದ ಕುಂಪಲದಲ್ಲಿ ನಿರ್ಮಿಸಲಾದ ಮನೆಯನ್ನು ಕೊಂಡೆವೂರು ಸ್ವಾಮೀಜಿ ಹಸ್ತಾಂತರಿಸಿದರು.