×
Ad

ವಶಕ್ಕೆ ತೆಗೆದುಕೊಳ್ಳಲಾದ ಆರೋಪಿಗಳು ಚಂದ್ರಪ್ರಕಾಶ್ ಶೆಟ್ಟಿಯ ಜನಗಳು: ಬಜರಂಗದಳ ಆರೋಪ

Update: 2017-06-27 20:43 IST

ಪುತ್ತೂರು, ಜೂ. 27: ಬೆಂಜನಪದವಿನಲ್ಲಿ ನಡೆದಿದ್ದ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ನಡೆದ ದಿನ ವಶಕ್ಕೆ ತೆಗೆದುಕೊಳ್ಳಲಾಗಿದ್ದ ವ್ಯಕ್ತಿಗಳನ್ನು ಸಚಿವರ ಆಪ್ತ ಚಂದ್ರಪ್ರಕಾಶ್ ಶೆಟ್ಟಿ ಅವರ ಜನಗಳು ಎಂಬ ಕಾರಣಕ್ಕಾಗಿ ಬಿಟ್ಟು ಕಲ್ಲಡ್ಕ ಪ್ರಭಾಕರ ಭಟ್ ಅವರ ಸಂಪರ್ಕದಲ್ಲಿರುವ ಭರತ್ ಕುಮ್ಡೇಲು ಮತ್ತು ಅಮಾಯಕರನ್ನು ಪ್ರಕರಣದಲ್ಲಿ ಸಿಲುಕಿಸುವ ಮೂಲಕ ಮತ್ತೊಮ್ಮೆ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ದಬ್ಬಾಳಿಕೆ ನಡೆಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರೇ ಪೊಲೀಸ್ ಇಲಾಖೆಯ ದಾರಿ ತಪ್ಪಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಪ್ರಕರಣಗಳ ನ್ಯಾಯಾಂಗ ತನಿಖೆಯಾಗಬೇಕು ಎಂದು ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಹೇಳಿದರು.

ಪುತ್ತೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ನಡೆದ ಕರೋಪಾಡಿ ಜಲೀಲ್ ಕೊಲೆ ಪ್ರಕರಣದಿಂದ ಆರಂಭಿಸಿ, ಅಶ್ರಫ್ ಕೊಲೆ ಪ್ರಕರಣವೂ ಸೇರಿದಂತೆ ಇವತ್ತಿನ ತನಕ ನಡೆದ ಎಲ್ಲಾ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಇಡೀ ಜನತೆಯಲ್ಲಿ ಸಂಶಯ ಮೂಡಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಸಣ್ಣಪುಟ್ಟ ಗಲಭೆಗಳ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಸಚಿವ ಯು.ಟಿ.ಖಾದರ್ ಅವರಿಗೆ ಜಿಲ್ಲೆಯ ಜನತೆಯ ಬಗ್ಗೆ ಒಂದಿಷ್ಟು ಕಾಳಜಿ ಇದ್ದರೆ ಅಂದಿನಿಂದ ಇಂದಿನ ತನಕದ ಎಲ್ಲಾ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲಿ ಎಂದು ಹೇಳಿದರು.

ಅಶ್ರಫ್ ಕೊಲೆ ನಡೆದ ಎರಡು ದಿನಗಳ ಮೊದಲು ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಎಂಬವರು ಜಿಲ್ಲೆಯಲ್ಲಿ ಒಂದು ನರಬಲಿ ನಡೆಯುತ್ತದೆ ಎಂದು ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಈ ಕೊಲೆ ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುವುದು ಸ್ಪಷ್ಟವಾಗುತ್ತದೆ. ಹಿಂದೂ ಹಿತರಕ್ಷಣಾ ಸಮಿತಿಯವರು 24ರಂದು ಬಿಸಿ ರೋಡ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆ ನಡೆದರೆ ತಮಗೆ ಅಪಮಾನ ಹಾಗೂ ತೊಂದರೆಯಾಗುತ್ತದೆ. ಇಡೀ ಜಿಲ್ಲೆಯ ಹಿಂದೂಗಳು ಜಾಗೃತರಾಗುತ್ತಾರೆ ಎಂದು ತಿಳಿದ ಕಾಂಗ್ರೆಸಿಗರು ಈ ಕೊಲೆ ಕೃತ್ಯದ ಮೂಲಕ ಪ್ರತಿಭಟನಾ ಕಾರ್ಯಕ್ರಮವನ್ನು ತಡೆಯುವ ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಸೋಮವಾರ ಪಜೀರಿನಲ್ಲಿ ನಡೆದ ಗೋ ಮಾಂಸ ವಶಕ್ಕೆ ಸಂಬಂಧಿಸಿ ಸುಳಿವು ನೀಡಿದ ಕಾರ್ಯಕರ್ತರ ಮೇಲೆಯೇ 307 ಸೆಕ್ಷನ್‌ನಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿರುವುದು ದ.ಕ.ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಕಾಂಗ್ರೆಸ್ ಪ್ರಾಯೋಜಿತ ಗೂಂಡಾ ರಾಜ್ಯ ನಡೆಯುತ್ತಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ.

ಪಾಣೆಮಂಗಳೂರಿನಲ್ಲಿ ಸತ್ಯದೇವತೆ ಕಲ್ಲುರ್ಟಿಯ ಗುಡಿಗೆ ದನದ ಮಾಂಸ ಎಸೆಯುವ, ಸುಳ್ಯದಲ್ಲಿ ಹೋರಿಯ ಮೇಲೆ ಹಲ್ಲೆ ನಡೆಸುವ ಕೆಲಸ ನಡೆದಿದೆ. ಹಿಂದೂಗಳ ಭಾವನೆಯನ್ನು ಕೆರಳಿಸಲು ಮತ್ತು ಹಿಂದೂ ಸಂಘಟನೆಯ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಮಟ್ಟ ಹಾಕಲು ಹಿಂದೂ ಮುಸ್ಲಿಂ ಅಂತರ ಗಲಭೆಗಳನ್ನು ಸೃಷ್ಟಿಸಿ ಕಾಂಗ್ರೆಸಿಗರು ಲಾಭ ಪಡೆಯಲು ಯತ್ನಿಸಿದರೆ ಪರಿಣಾಮ ನೆಟ್ಟಗಿರದು ಎಂದು ಅವರು ಎಚ್ಚರಿಸಿದರು.

ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಸಂಘಟನೆಯ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಮಟ್ಟ ಹಾಕುವ ಯೋಜನೆಯ ವಿರುದ್ಧ ಹಾಗೂ ಅಶ್ರಫ್ ಕೊಲೆ ಪ್ರಕರಣದಲ್ಲಿ ಭರತ್ ಕುಮ್ಡೇಲು ಅವರನ್ನು ಹರಕೆಯ ಕುರಿಯನ್ನಾಗಿಸುವ ವಿರುದ್ಧ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಹೋರಾಟ ಆರಂಭಿಸಲಿದೆ ಎಂದು ಅವರು ತಿಳಿಸಿದರು.

ಮುತಾಲಿಕ್ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ: 

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಶಾಂತಿ ಸೌಹಾರ್ದತೆಯ ದೃಷ್ಠಿಯಿಂದ ಮಾಡಿರುವ ಇಫ್ತಾರ್ ಕೂಟದ ಬಗ್ಗೆ ಕೇವಲ ಸಂಕುಚಿತ ಮನೋಭಾವದ ವ್ಯಕ್ತಿಗಳಿಂದ ಆಕ್ಷೇಪ ವ್ಯಕ್ತವಾಗುತ್ತಿವೆ. ಇದನ್ನೊಂದು ವಿವಾದ ಮಾಡಬೇಕಾದ ಅಗತ್ಯವಿಲ್ಲ. 5ನೇ ಪರ್ಯಾಯ ಅವಧಿಯಲ್ಲಿ ಸ್ವಾಮೀಜಿ ಅವರ ಯೋಚನೆ ಮುಂದಿನ ಯೋಜನೆಗೆ ಪೂರಕವಾಗಿರಬಹುದು. ದುಷ್ಟ ಮತಾಂಧ ಶಕ್ತಿಗಳು ಶಾಂತಿ ಸೌಹಾರ್ದತೆಯನ್ನು ಕೆಡಿಸಲು ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿರುವ ಈ ಸಂದರ್ಭದಲ್ಲಿ ಸ್ವಾಮೀಜಿ ಅವರು ಶಾಂತಿ ಸೌಹಾರ್ದತೆಗೆ ಪೂರಕವಾಗಿ ಕೈಗೊಂಡ ಈ ಕಾರ್ಯವನ್ನು ನಾವು ಸ್ವಾಗತಿಸುತ್ತೇವೆ. ಈ ವಿಚಾರದಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಮುತಾಲಿಕ್ ನೀಡಿದ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಮುರಳೀಕೃಷ್ಣ ಹಸಂತಡ್ಕ ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ಧನ್ ಬೆಟ್ಟ, ಬಜರಂಗದಳ ಪುತ್ತೂರು ಪ್ರಖಂಡ ಸಂಚಾಲಕ ನಿತಿನ್‌ ಕುಮಾರ್ ನಿಡ್ಪಳ್ಳಿ, ಬಜರಂಗದಳ ಜಿಲ್ಲಾ ಸಂಪರ್ಕ ಪ್ರಮುಖ್ ಧನ್ಯಕುಮಾರ್, ಬಜರಂಗದಳ ಜಿಲ್ಲಾ ನ್ಯಾಯಾಂಗ ಪ್ರಮುಖ್ ಮಾಧವ ಪೂಜಾರಿ, ಬಜರಂಗದಳ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀಧರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News