ಬೆಳ್ತಂಗಡಿ: ಹಲ್ಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Update: 2017-06-27 16:46 GMT

ಬೆಳ್ತಂಗಡಿ, ಜೂ. 27: ಗುರುವಾಯನಕೆರೆ ಸಮೀಪ ಮೇಲಂತಬೆಟ್ಟು ಎಂಬಲ್ಲಿನ ನಿರ್ಜನ ಪ್ರದೇಶಕ್ಕೆ ಇಬ್ಬರು ಯುವಕರನ್ನು ವ್ಯವಹಾರದ ನೆಪದಲ್ಲಿ ಕರೆದೊಯ್ದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾಯನಕೆರೆಯ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾಗಿರುವ ಮಹಮ್ಮದ್ ರವೂಫ್ ಹಾಗೂ ರಿಯಾಝ್ ಎಂದು ಗುರುತಿಸಲಾಗಿದೆ.

ರವಿವಾರ ರಾತ್ರಿ ಬಂಟ್ವಾಳ ತಾಲೂಕಿನ ಅಡ್ಡೂರು ನಿವಾಸಿಗಳಾದ ಇರ್ಫಾನ್ ಹಾಗೂ ನಿಸಾರ್ ಎಂಬವರನ್ನು ವ್ಯವಹಾರದ ನೆಪದಲ್ಲಿ ಗುರುವಾಯನಕೆರೆಗೆ ಕರೆಸಿ ಅಪಹರಿಸಿ, ಹಲ್ಲೆ ನಡೆಸಿದ್ದರು ಎಂದು ದೂರು ದಾಖಲಾಗಿತ್ತು. 

ಕುತೂಹಲ ಕೆರಳಿಸಿದ್ದ ಪ್ರಕರಣದ ಹಿನ್ನಲೆಯನ್ನು ಇದೀಗ ಭೇದಿಸಲಾಗಿದ್ದು ಹಲ್ಲೆಗೆ ಪ್ರೇಮ ಪ್ರಕರಣವೊಂದರ ಹಿನ್ನೆಲೆಯಿರುವುದಾಗಿ ಮಾಹಿತಿಗಳು ಲಭ್ಯವಾಗುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆತನೇ ಹಲ್ಲೆಯ ತಂತ್ರ ರೂಪಿಸಿದ್ದಾಗಿ ತಿಳಿದುಬಂದಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸರು ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News