ರೋಟರಿ ಸುವರ್ಣ ಮಹೋತ್ಸವ: ರಕ್ತನಿಧಿ ಕೇಂದ್ರ ಸ್ಥಾಪನೆ
ಮೂಡುಬಿದಿರೆ, ಜು. 4: ಮೂಡುಬಿದಿರೆ ರೋಟರಿ ಕ್ಲಬ್ ಈ ವರ್ಷ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು ಇದರ ಸವಿನೆನಪಿಗಾಗಿ ಮೂಡುಬಿದಿರೆಯಲ್ಲಿ ಆಳ್ವಾಸ್ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತನಿಧಿ ಕೇಂದ್ರದ ಸ್ಥಾಪಿಸುವ ಉದ್ದೇಶ ಹೊಂದಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಕಾಮತ್ ತಿಳಿಸಿದರು.
ಅವರು ಮೂಡುಬಿದಿರೆ ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗೇರು ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಜಯಲಕ್ಷ್ಮೀ ಫೌಂಡೇನ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ರಾಜ್ಯಾದಾದ್ಯಂತ 1 ಲಕ್ಷ ಗೇರು ಸಸಿ ವಿತರಿಸುವ ಯೋಜನೆಯನ್ನು ಕೈಗೊಳ್ಳಲಾಗಿದೆ. ರೋಟರಿ ಸಂಸ್ಥೆಯಿಂದ ಮೂರು ದಶಕಗಳ ಹಿಂದೆ ಸ್ಥಾಪನೆಗೊಂಡ ರೋಟರಿ ಶಾಲೆಯು ಮೂಡುಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದ್ದು ಈಗ ಪಿ.ಯು. ಕಾಲೇಜನ್ನು ಆರಂಭಿಸಿದೆ.
ರೋಟರಿ ಸಂಸ್ಥೆಯು ಆರಂಭಿಸಿದ ಕಡಲಕೆರೆ ನಿಸರ್ಗಧಾಮವು ಈಗ ಉತ್ತಮ ವಿಹಾರ ಕೇಂದ್ರವಾಗಿ ರೂಪುಗೊಂಡಿದೆ. ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ, ಪರಿಸರ ಸ್ವಚ್ಛತೆ, ಆರೋಗ್ಯ ಸಂಬಂಧಿ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆಯು ನಿರಂತರ ನಡೆಸುತ್ತಿದೆ. ಸುವರ್ಣಮಹೋತ್ಸವ ಆಚರಣೆಗಾಗಿ ನಾರಾಯಣ ಪಿ. ಎಂ. ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದು ಸುವರ್ಣ ಮಹೋತ್ಸವ ಕಾರ್ಯಕ್ರಮಗಳ ಉದ್ಘಾಟನೆಯು ಜುಲೈ 10ರಂದು ರೋಟರಿ ಶಾಲೆಯಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಪಿ. ಎಂ., ರೋಟರಿ ಕಾರ್ಯದರ್ಶಿ ಮಹಮ್ಮದ್ ಆರಿಫ್, ಸದಸ್ಯರಾದ ಎಂ. ಬಾಹುಬಲಿ ಪ್ರಸಾದ್, ರಾವುಚಂದ್ರ ಮಿಜಾರು ಉಪಸ್ಥಿತರಿದ್ದರು.