ಬಿ.ಸಿ.ರೋಡ್ ಗಲಭೆಗೆ ಸಚಿವ ರೈ, ಖಾದರ್ ಹೊಣೆ ಆರೋಪ: ಖಂಡನೀಯ
ಉಳ್ಳಾಲ, ಜು. 9: ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ‘ ಬಿ.ಸಿ.ರೋಡ್ ಗಲಭೆಗೆ ಸಚಿವ ರೈ ಹಾಗೂ ಖಾದರ್ ಅವರೇ ಹೊಣೆ’ ಎಂದು ಆರೋಪಿಸಿರುವುದು ಖಂಡನೀಯ, ತಾಕತ್ತಿದ್ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಂದು ಆಣೆ ಪ್ರಮಾಣ ಮಾಡಿ ಹೇಳಲಿ, ಅಲ್ಲಿಗೆ ಈರ್ವರು ಸಚಿವರನ್ನು ನಾನು ಕರೆತರುವೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಸವಾಲು ಹಾಕಿದ್ದಾರೆ.
ತೊಕ್ಕೊಟ್ಟುವಿನಲ್ಲಿ ರವಿವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗಲಭೆಗೆ ಸಂಬಂಧಿಸಿ ಎಲ್ಲರಿಗೂ ನೋವಿದೆ. ಅಮಾಯಕ ಯುವಕರ ಕೊಲೆಯತ್ನ ನಡೆಯುತ್ತಿದ್ದು, ಇದನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಬ್ಲಾಕಿನ ಸರ್ವಧರ್ಮದ ಕಾರ್ಯಕರ್ತರು ಸೇರಿಕೊಂಡು ಶನಿವಾರ ಕೊಲೆಯತ್ನಕ್ಕೀಡಾದ ಚಿರಂಜೀವಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದೇವೆ. ಕಾರ್ತಿಕ್ ಪ್ರಕರಣದಲ್ಲಿ ಕಾಂಗ್ರೆಸ್ ವಿರುದ್ಧವೇ ಆರೋಪ ಮಾಡಿದ ಬಿಜೆಪಿಗೆ ಆರೋಪಿಗಳ ಪತ್ತೆ ಬಳಿಕ ಮುಖಭಂಗವಾಗಿದೆ. ಇದೀಗ ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿಯೂ ಸಚಿವರು ಭಾಗಿಯಾಗಿದ್ದಾರೆ ಅನ್ನುವ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮುಸ್ಲಿಂ ಮತ್ತು ಹಿಂದು ಮತೀಯವಾದವನ್ನು ಖಂಡಿಸುತ್ತದೆ.
ಕೃತ್ಯಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಆಗ್ರಹಿಸುತ್ತೇವೆ ಎಂದ ಅವರು ಸುಳ್ಳು ಆರೋಪ ಮಾಡುವ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಕೇಂದ್ರ ಸಚಿವ ಸದಾನಂದ ಗೌಡರು ತಾಕತ್ತಿದ್ದರೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿ ಹೇಳಲಿ. ಅಲ್ಲಿ ಸಚಿವ ಖಾದರ್ ಹಾಗೂ ರಮಾನಾಥ ರೈಗಳನ್ನು ನಾ ಕರೆತರುವೆ ಎಂದರು.
ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ ಜಿಲ್ಲೆಯಲ್ಲಿ ಹಿಂದು ಮುಸ್ಲಿಮರ ನಡುವೆ ನಡೆಯುತ್ತಿರುವ ಗಲಾಟೆಯಲ್ಲ, ಇದೊಂದು ಕೆಲ ಮತೀಯವಾದಿಗಳು ನಡೆಸುತ್ತಿರುವ ಗಲಾಟೆಯಾಗಿದೆ.
ಸ್ವಲ್ಪ ಸಂಬಳಕ್ಕೆ ದುಡಿಯುವ ಅಮಾಯಕ ಯುವಕರಿಬ್ಬರ ಹತ್ಯೆಯಾಗಿದೆ. ಇದು ತೀರಾ ಕಳವಳಕಾರಿ. ಆರೋಪಿಗಳನ್ನು ಶಿಘ್ರವೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ರೆಹಮಾನ್ ಕೋಡಿಜಾಲ್, ದೇವಕಿ, ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು, ಎನ್.ಎಸ್.ಕರೀಂ, ಪದ್ಮನಾಭ ಗಟ್ಟಿ, ಪದ್ಮನಾಭ ಮುಟ್ಟಿಂಜ, ಪುರುಷೋತ್ತಮ ಅಂಚನ್, ಮುಸ್ತಾಫ ಹರೇಕಳ, ರಫೀಕ್ ಅಂಬ್ಲಮೊಗರು, ಶೌಕತ್ ಆಲಿ, ತಾ.ಪಂ ಸದಸ್ಯೆ ಪದ್ಮಾವತಿ, ಸುನಿಲ್ ಪೂಜಾರಿ, ಪ್ರೇಮದಾಸ್ ಪೂಜಾರಿ, ರವಿಶಂಕರ್, ಆಲ್ವಿನ್ ಡಿಸೋಜ, ಮನೋಜ್ ಪೂಜಾರಿ, ಪಿಯೂಸ್ ಮೊಂತೇರೊ ಉಪಸ್ಥಿತರಿದ್ದರು.