×
Ad

ಸದಾನಂದ ಗೌಡ, ಶೋಭಾ ಕರಂದ್ಲಾಜೆ ಬೇನಾಮಿ ಆಸ್ತಿಗಳ ಬಗ್ಗೆ ತನಿಖೆಯಾಗಲಿ: ಸಚಿವ ರೈ

Update: 2017-07-10 20:55 IST

ಮಂಗಳೂರು, ಜು.10: ಕೋಮು ದ್ವೇಷದಲ್ಲಿ ಮೃತಪಟ್ಟವರ ಹೆಸರಿನಲ್ಲಿ ಸಚಿವರ ವಿರುದ್ಧ ಆರೋಪಿಸಿ ರಾಜಕೀಯ ಹೇಳಿಕೆ ನೀಡುತ್ತಿರುವ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಅವರ ಬೇನಾಮಿ ಆಸ್ತಿಗಳ ಬಗ್ಗೆ ಜಾರಿ ನಿರ್ದೇಶನಾಲಯ ದಿಂದ (ಇ.ಡಿ) ತನಿಖೆಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಡಿ.ವಿ.ಸದಾನಂದ ಗೌಡ, ಶೋಭಾ ಕರಂದ್ಲಾಜೆ ಧೈರ್ಯವಿದ್ದರೆ ಜಿಲ್ಲೆಯ ವಿಧಾನ ಸಭಾ ಕ್ಷೇತ್ರದಲ್ಲಿ ನನ್ನ ಮತ್ತು ಸಚಿವ ಯು.ಟಿ.ಖಾದರ್ ವಿರುದ್ಧ ಸ್ಫರ್ಧಿಸಿ ಜಯಗಳಿಸಲಿ ಎಂದು ರಮಾನಾಥ ರೈ ಸವಾಲೆಸೆದರು.

ಸೂತಕದ ಮನೆಯಲ್ಲಿ ವಿಜಯೋತ್ಸವ:- ಕಲ್ಲಡ್ಕದಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಶವಯಾತ್ರೆಯನ್ನು ನಡೆಸಲಾಗಿದೆ. ಈ ಸಂದರ್ಭದಲ್ಲಿ ಮೃತ ಶರೀರವನ್ನು ಇಟ್ಟುಕೊಂಡು ಪ್ರಭಾಕರ ಭಟ್ಟರನ್ನು ಹೆಗಲಲ್ಲಿ ಹೊತ್ತುಕೊಂಡು ವಿಜಯೋತ್ಸವ ರೀತಿಯ ಆಚರಣೆ ನಡೆಸಿದ್ದಾರೆ. ಸೂತಕದ ಮನೆಯಲ್ಲಿ ಓಟಿನ ಲೆಕ್ಕಾಚಾರ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡರಾಗಲಿ ಕಾರ್ಯಕರ್ತರಾಗಲಿ ಯಾರೂ ಈ ರೀತಿ ಮಾಡಿಲ್ಲ. ಯಾವ ಕಾಂಗ್ರೆಸ್ ಕಾರ್ಯಕರ್ತರು ಕೋಮು ಪ್ರಚೋಧನೆಯ ಚಟುವಟಿಕೆ, ಕೊಲೆಗಳಲ್ಲಿ ಭಾಗಿಯಾಗಿಲ್ಲ ಎಂದು ರಮಾನಾಥ ರೈ ತಿಳಿಸಿದರು.

ಜಿಲ್ಲೆಯಲ್ಲಿ ಕೋಮು ದ್ವೇಷಕ್ಕೆ ಬಲಿಯಾದ ಶರತ್, ಅಶ್ರಫ್ ಸಾವಿನ ಬಗ್ಗೆ ತುಂಬಾ ನೋವಾಗಿದೆ. ಈ ರೀತಿಯ ಕೋಮು ದ್ವೇಷದ ಕೊಲೆಗಳು ಪೂರ್ವ ನಿಯೋಜಿತವಾಗಿವೆ. ಬಹು ಸಂಖ್ಯಾತರ ಅಥವಾ ಅಲ್ಪ ಸಂಖ್ಯಾತರ ಹೆಸರಲ್ಲಿ ನಡೆಯುವ ಕೋಮುವಾದವನ್ನು ಸಹಿಸುವುದಿಲ್ಲ. ಈ ಕೊಲೆಗಳ ಹಿಂದೆ ಪಿತೂರಿ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಈ ಹಿಂದಿನ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ ಎಂದು ರಮಾನಾಥ ರೈ ತಿಳಿಸಿದರು.

ಜಲೀಲ್ ಕರೋಪಾಡಿ ಕೊಲೆಯಾದಾಗ ಪಕ್ಷದ ಪ್ರತಿನಿಧಿಯಾಗಿದ್ದರೂ ನಾವು ಶವವಯಾತ್ರೆ ನಡೆಸಿ ಕೋಮುದ್ವೇಷ ನಡೆಸಿ ಉದ್ವೇಗಕಾರಿ ವಾತವರಣ ಸೃಷ್ಟಿಸಿಲ್ಲ ಎಂದು ರಮಾನಾಥ ರೈ ತಿಳಿಸಿದ್ದಾರೆ.

ಸಿ.ಎಂ ಸೂಚನೆ:- 

ಜಿಲ್ಲೆಯಲ್ಲಿ ಕೋಮು ದ್ವೇಷದ ವಾತಾವರಣಕ್ಕೆ ಕಾರಣರಾಗುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಮುಖ್ಯ ಮಂತ್ರಿ ಈಗಾಗಲೇ ಸೂಚನೆ ನೀಡಿದ್ದಾರೆ. ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆಯನ್ನು ನಡೆಸಿದ್ದಾರೆ ಎಂದು ರಮಾನಾಥ ರೈ ತಿಳಿಸಿದ್ದಾರೆ.

ಶಾಂತಿ ಸಭೆ:- ಜಿಲ್ಲೆಯಲ್ಲಿ ಕೋಮು ದ್ವೇಷದ ವಾತಾವರಣದಿಂದ ಉಂಟಾಗಿರುವ ಅಹಿತಕರ ಘಟನೆಗಳನ್ನು ತಡೆಯಲು ಹಾಗೂ ಸಾರ್ವಜನಿಕರಲ್ಲಿ ಶಾಂತಿ ಕಾಪಾಡಲು ಮನವಿ ಮಾಡಲು ಗುರುವಾರ ಜಿಲ್ಲಾ ಮಟ್ಟದಲ್ಲಿ ಶಾಂತಿ ಸಭೆಯನ್ನು ಕರೆಯಲು ಸೂಚಿಸಿರುವುದಾಗಿ ರಮಾನಾಥ ರೈ ತಿಳಿಸಿದರು.

ಪತ್ರಿಕಾ ಗೊಷ್ಠಿಯಲ್ಲಿ ಸಚಿವ ಯು.ಟಿ.ಖಾದರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರಿಶ್ ಕುಮಾರ್, ಮಾಜಿ ಸಚಿವ ಅಭಯ ಚಂದ್ರ ಜೈನ್, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ ಸೋಜ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಮಾಜಿ ಮೂಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮಾಜಿ ಮೇಯರ್ ಶಶಿಧರ ಹೆಗ್ಡೆ , ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News