ಅನಧಿಕೃತ ಮಸಾಜ್ ಕೇಂದ್ರ, ಸ್ಕಿಲ್ ಗೇಮ್‌ಗಳಿಗೆ ಮೇಯರ್ ದಾಳಿ

Update: 2017-07-11 16:09 GMT

ಮಂಗಳೂರು, ಜು. 11: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಅವರು ನಾಲ್ಕು ಅನಧಿಕೃತ ಮಸಾಜ್ ಪಾರ್ಲರ್ ಮತ್ತು ಸ್ಕಿಲ್ ಗೇಮ್ ಕೇಂದ್ರವೊಂದಕ್ಕೆ ದಾಳಿ ನಡೆಸಿ ಬೀಗ ಜಡಿದಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ನಗರದ ಅಂಬೇಡ್ಕರ್ ವೃತ್ತ ಬಳಿಯ ಸ್ಕಿಲ್‌ಗೇಮ್ ಕೇಂದ್ರಕ್ಕೆ ದಾಳಿ ನಡೆಸಿ ಬೀಗ ಜಡಿದಿದ್ದರು. ಇದೀಗ ಮೇಯರ್ ಕವಿತಾ ಸನಿಲ್ ಅವರು ನಗರದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಮಸಾಜ್ ಪಾರ್ಲರ್ ಹಾಗೂ ಸ್ಕಿಲ್ ಗೇಮ್ ಕೇಂದ್ರಗಳ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಬಿಜೈಯಲ್ಲಿ ದಾಳಿ:

ಮೊದಲಿಗೆ ಬಿಜೈನಲ್ಲಿರುವ ‘ಒಲಿವ್ ಲೀಫ್’ ಮಸಾಜ್ ಕೇಂದ್ರಕ್ಕೆ ದಾಳಿ ನಡೆಸಿದಾಗ ಅಲ್ಲಿ ಮೂವರು ಪುರುಷರು ಮತ್ತು ಇಬ್ಬರು ಯುವತಿಯರು ಇರುವುದು ಕಂಡುಬಂತು.

ಮೇಯರ್ ಮತ್ತು ಅಧಿಕಾರಿಗಳು ಕೇಂದ್ರಕ್ಕೆ ದಾಳಿ ನಡೆಸುವ ಸಂದರ್ಭದಲ್ಲಿ ಪುರುಷರು ಅರೆಬೆತ್ತಲಾಗಿದ್ದರು. ಅವರಿಗೆ ಯುವತಿಯರು ಮಸಾಜ್ ಸೇವೆ ಒದಗಿಸುತ್ತಿದ್ದರು. ಅಲ್ಲಿದ್ದವರಲ್ಲಿ ಇಬ್ಬರು ಪುರುಷರು ಓಡಿ ಹೋಗಿದ್ದರೆ, ಒಬ್ಬ ಶೌಚಾಲಯದ ಒಳಗೆ ಅಡಗಿಕೊಂಡಿದ್ದ.

ಬಲ್ಮಠ ಬಳಿ ದಾಳಿ:

ಬಲ್ಮಠದ ಲಕ್ಷ್ಮೀ ಕೃಷ್ಣ ಟವರ್‌ನಲ್ಲಿರುವ ‘ಗ್ರೀನ್ ವ್ಯಾಲಿ’ ಪಾರ್ಲರ್‌ಗೆ ದಾಳಿ ನಡೆಸಿದಾಗಲೂ ಪುರುಷರು ಅರೆಬೆತ್ತಲಾಗಿರುವುದು ಕಂಡುಬಂತು. ಈ ಸಂದರ್ಭ ಕೇಂದ್ರದ ಮಾಲಕರು ಮೇಯರ್ ಅವರೊಂದಿಗೆ ವಾಗ್ವಾದಕ್ಕಿಳಿದರು. ಯಾವುದೇ ಅನೈತಿಕ ಚಟುವಟಿಕೆ ನಡೆಸುತ್ತಿಲ್ಲ ಎಂದು ಸಬೂಬು ನೀಡಿದರು.

ಅನೈತಿಕ ಚಟುವಟಿಕೆ ಇಲ್ಲವಾದರೆ ಪುರುಷರಿಗೆ ಪುರುಷರು ಏಕೆ ಮಸಾಜ್ ಮಾಡುತ್ತಿಲ್ಲ? ಕೋಣೆಯೊಳಗೆ ಸಿಸಿ ಕ್ಯಾಮರಾ ಯಾಕೆ ಅಳವಡಿಸಿಲ್ಲ ಎಂದು ಪ್ರಶ್ನಿಸಿದರು.

ಬಾಗಿಲು ಜಡಿದು ಪರಾರಿ:

ಮೇಯರ್ ದಾಳಿಯ ವಿಷಯ ತಿಳಿದ ಕೆಲವು ಮಸಾಜ್ ಪಾರ್ಲರ್‌ಗಳ ಮಾಲಕರು ಮೇಯರ್ ಆಗಮಿಸುವಷ್ಟರಲ್ಲಿ ಬಾಗಿಲು ಮುಚ್ಚಿ ಪರಾರಿಯಾಗಿದ್ದರು.

ಬಲ್ಮಠದ ಇಂದ್ರಭವನ ಹೊಟೇಲ್ ಹತ್ತಿರದ ‘ದಿ ಪ್ಯಾರಡೈಸ್ ಯೂನಿಸೆಕ್ಸ್ ಪಾರ್ಲರ್’, ಜ್ಯೋತಿ ಸರ್ಕಲ್ ಬಳಿಯ ಸ್ಮಾರ್ಟ್ ಟವರ್‌ನಲ್ಲಿರುವ ‘ಅರೋಮ’ ಮತ್ತು ‘ರಾಯಲ್ ಸ್ಪಾ’ ಮಸಾಜ್ ಸೆಂಟರ್‌ಗಳು ಅದಾಗಲೇ ಬಾಗಿಲು ಮುಚ್ಚಿದ್ದವು. ಈ ಎಲ್ಲ ಕೇಂದ್ರಗಳಿಗೂ ಮೇಯರ್ ಬೀಗ ಜಡಿಯಲು ಆದೇಶಿಸಿದರು.

ಸ್ಕಿಲ್‌ಗೇಮ್ ಲೇಡಿ ಮ್ಯಾನೇಜರ್ ವಾಗ್ವಾದ:

ಫಳ್ನೀರ್‌ನಲ್ಲಿರುವ ಫಳ್ನೀರ್ ಟವರ್ಸ್ ಪಕ್ಕದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್ ಸ್ಕಿಲ್ ಗೇಮ್ ಕೇಂದ್ರಕ್ಕೆ ಮೇಯರ್ ದಾಳಿ ನಡೆಸಿದರು. ಈ ಸಂದರ್ಭ ಅಲ್ಲಿದ್ದ ಮಹಿಳಾ ವ್ಯವಸ್ಥಾಪಕಿ ಮೇಯರ್ ಮೇಲೆಯೇ ಹರಿಹಾಯ್ದರು. ಸ್ಕಿಲ್ ಗೇಮ್ ಕೇಂದ್ರ ನಡೆಸಲು ನಮಗೆ ಹೈಕೋರ್ಟ್ ಆದೇಶ ಇದೆ ಎಂದರು. ಹೈಕೋರ್ಟ್ ಆದೇಶ ಇದ್ದರೂ ಪಾಲಿಕೆಯಿಂದ ಟ್ರೇಡ್ ಲೈಸನ್ಸ್ ಪಡೆಯಲೇಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಮೇಯರ್ ಅವರು ಕೇಂದ್ರಕ್ಕೆ ಬೀಗ ಜಡಿಯಲು ಮುಂದಾದಾಗ ವ್ಯವಸ್ಥಾಪಕರು ಬಿಡಲಿಲ್ಲ. ಈ ವೇಳೆ ಪೊಲೀಸ್ ಆಯುಕ್ತರಿಗೆ ಮೇಯರ್ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದರು.

ಡಿಸಿಪಿ ಶಾಂತರಾಜು, ಎಸಿಪಿ ಉದಯ ನಾಯ್ಕೆ, ಇನ್ಸ್‌ಪೆಕ್ಟರ್ ಬೆಳ್ಳಿಯಪ್ಪ ಮತ್ತು ಮಹಿಳಾ ಪೊಲೀಸರು ಸ್ಥಳಕ್ಕಾಗಮಿಸಿದರು. ಮ್ಯಾನೇಜರ್ ಅವರನ್ನು ಕೇಂದ್ರದಿಂದ ಹೊರಹಾಕಿ ಕೇಂದ್ರಕ್ಕೆ ಬೀಗ ಜಡಿದರು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗವೇಣಿ, ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಎಲ್ಲ ಅನಧಿಕೃತ ಕೇಂದ್ರಗಳ ವಿರುದ್ಧ ಕ್ರಮ: ಮೇಯರ್‌ ಪಾಲಿಕೆಯಿಂದ ವ್ಯಾಪಾರ ಪರವಾನಗಿ ಪಡೆಯದಿರುವುದರಿಂದ ಈ ದಾಳಿ ನಡೆಸಲಾಗಿದೆ. ಇಂತಹ ಅನಧಿಕೃತ ಕೇಂದ್ರಗಳ ವಿರುದ್ಧ ಪಾಲಿಕೆಯಿಂದ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮೇಯರ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸ್ಕಿಲ್ ಗೇಮ್ ಮತ್ತು ಪಾರ್ಲರ್‌ಗಳು ಅನಧಿಕೃತವಾಗಿ ನಡೆಯುತ್ತಿದೆ. ಪೊಲೀಸ್ ಉನ್ನತಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಎಲ್ಲ ಅನಧಿಕೃತ ಮಸಾಜ್ ಪಾರ್ಲರ್ ಮತ್ತು ಸ್ಕಿಲ್‌ಗೇಮ್ ಕೇಂದ್ರಗಳನ್ನು ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.

ಸ್ಕಿಲ್ ಗೇಮ್‌ಗಳಲ್ಲಿ ಉಳಿದ ಜೂಜಾಟಗಳನ್ನು ಆಡುತ್ತಿದ್ದಾರೆ. ಇವು ನಿಲ್ಲಬೇಕು ಎಂದರು. ಅನೇಕ ಮಸಾಜ್ ಪಾರ್ಲರ್‌ಗಳು ಆಯುರ್ವೇದಿಕ್ ಎಂದು ಪರವಾನಗಿ ಪಡೆದು ಅನೈತಿಕ ಚಟುವಟಿಕೆ ನಡೆಸುತ್ತಿವೆ. ಇಂಥ ಪಾರ್ಲರ್ ಒಳಗೆ ಸಿಸಿ ಕ್ಯಾಮರಾ ಅಳವಡಿಸಬೇಕು. ಪುರುಷರಿಗೆ ಪುರುಷರೇ ಮಸಾಜ್ ಮಾಡಬೇಕು ಎಂದು ಕವಿತಾ ಸನಿಲ್ ಹೇಳಿದರು.

ಪೊಲೀಸರಿಗೆ 2.50 ಲಕ್ಷ ರೂ. ಹಫ್ತಾ ಆರೋಪ: ಫಳ್ನೀರ್ ರಸ್ತೆಯ ಸ್ಕಿಲ್ ಗೇಮ್ ಸೆಂಟರ್ ಮೇಲೆ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ ಮೇಯರ್, ನಗರದ ಸ್ಕಿಲ್‌ಗೇಮ್ ಸೆಂಟರ್‌ವೊಂದರ ಮಾಲಕರು ತಿಂಗಳಿಗೆ 2.50 ಲಕ್ಷ ರೂ.ಗಳನ್ನು ಪೊಲೀಸರಿಗೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ ಎಂದರು. ಇದಕ್ಕೆ ಡಿಸಿಪಿ ಶಾಂತರಾಜು ಅದು ಕೇವಲ ಆರೋಪ ಮಾತ್ರ. ಅಂತಹ ವ್ಯವಸ್ಥೆ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News