ಎನ್‌ಐಎ ತನಿಖೆಯಿಂದ ಕಾಂಗ್ರೆಸ್ ಬಣ್ಣ ಬಯಲು: ಸಂಸದ ನಳಿನ್

Update: 2017-07-12 14:17 GMT

ಮಂಗಳೂರುಮ, ಜು.12: ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ರಾಷ್ಟ್ರೀಯ ತನಿಖಾದಳ (ಎನ್‌ಐಎ) ತನಿಖೆ ನಡೆಸಿದರೆ ಕಾಂಗ್ರೆಸ್‌ನ ಬಣ್ಣ ಬಯಲಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆಯುವ ಅಹಿತಕರ ಘಟನೆಗೆ ರಾಜ್ಯ ಸರಕಾರವೇ ನೇರ ಹೊಣೆ. ಪೊಲೀಸ್ ಇಲಾಖೆಯನ್ನು ಸರಕಾರ ಕೈಗೊಂಬೆಯಾಗಿಸಿಕೊಂಡಿದೆ. ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಜಿಲ್ಲೆಯ ಜನತೆಯನ್ನು ಬಲಿ ಕೊಡುತ್ತಿದೆ ಎಂದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಸತ್ಯಾಸತ್ಯತೆ ಹೊರಬರಲು ಸಿಬಿಐಗೆ ಒಪ್ಪಿಸಬಹುದಿತ್ತು. ಆದರೆ ಸರಕಾರ ಸಿಬಿಐಗೆ ಒಪ್ಪಿಸುತ್ತಿಲ್ಲ. ರಾಷ್ಟ್ರೀಯ ತನಿಖಾ ದಳವನ್ನೂ ಕರೆಸುತ್ತಿಲ್ಲ. ಕಾಂಗ್ರೆಸ್ ಪ್ರೇರಿತ ಶಕ್ತಿಗಳಿಂದಲೇ ಇಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ ಎಂದ ನಳಿನ್, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಸಚಿವ ಖಾದರ್‌ರ ಕ್ಷೇತ್ರದಲ್ಲಿಯೇ ನಿರಂತರವಾಗಿ ಹತ್ಯೆ, ಗಲಭೆಯಂತಹ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಈ ಸಚಿವರುಗಳೇ ನೇರ ಹೊಣೆ. ತಕ್ಷಣ ಈ ಇಬ್ಬರೂ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.

ಆರೆಸ್ಸೆಸ್ ಕಾರ್ಯಕರ್ತ ಶರತ್ ಹತ್ಯೆಗೆ ಸಂಬಂಧಿಸಿ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ ಸರಕಾರ ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ಮುಖ್ಯಮಂತ್ರಿ ಮಂಗಳೂರಿಗೆ ಆಗಮಿಸಿದರೂ ಗಂಭೀರ ಸ್ಥಿತಿಯಲ್ಲಿದ್ದ ಶರತ್‌ನನ್ನು ನೋಡುವ ಸೌಜನ್ಯ ತೋರಲಿಲ್ಲ. ಕನಿಷ್ಟ ಪಕ್ಷ ವೈದ್ಯರಿಂದ ಮಾಹಿತಿ ಪಡೆಯಲಿಲ್ಲ. ಶಾಂತಿ ಸಭೆ ನಡೆಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ನಳಿನ್ ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಡಿಪಿಐ ಚುನಾವಣೆಗೆ ನಿಲ್ಲುವುದರಿಂದ ಕಾಂಗ್ರೆಸ್‌ಗೆ ತನ್ನ ಮತಬ್ಯಾಂಕ್ ಕೈತಪ್ಪಿ ಹೋಗುವ ಭಯ ಆವರಿಸಿದೆ. ಅದಕ್ಕಾಗಿ ಮುಸಲ್ಮಾನರನ್ನು ಎತ್ತಿಕಟ್ಟುವ ಕೆಲಸಕ್ಕೆ ಸಚಿವರು ಮುಂದಾಗಿದ್ದಾರೆ. ಅಲ್ಲದೆ ಸಂಘ ಪರಿವಾರದ ಸಂಘಟನೆಗಳ ನಾಯಕರನ್ನು ಜೈಲಿಗೆ ತಳ್ಳುವ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎಂದು ದೂರಿದರು.

ಶರತ್ ಹತ್ಯಾ ಆರೋಪಿಗಳನ್ನು ಬಂಧಿಸಿದ ಬಳಿಕವೇ ಶಾಂತಿ ಸಭೆ ನಡೆಸಬೇಕು. ಒಂದು ವೇಳೆ ಬಂಧನವಾಗದೆ ಸಭೆ ನಡೆಸಿದರೆ ನಾವು ಈ ಸಭೆಯನ್ನು ಬಹಿಷ್ಕರಿಸುತ್ತೇವೆ. ಅಲ್ಲದೆ ನೆಹರೂ ಮೈದಾನದಲ್ಲಿ ಗುರುವಾರ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು. ಪೊಲೀಸರು ಅನುಮತಿ ನೀಡದಿದ್ದರೆ ರಾತ್ರಿಯವರೆಗೂ ಅನುಮತಿಗಾಗಿ ಕಾಯುತ್ತೇವೆ. ಈ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದರು. ಅಶ್ರಫ್ ಹತ್ಯೆಗೆ ಸಂಬಂಧಿಸಿ ಕೆಲವರ ಬಂಧನವಾಯಿತು. ಅದೇ ರೀತಿ ಶರತ್ ಹತ್ಯಾ ಆರೋಪಿಗಳನ್ನೂ ಶೀಘ್ರ ಪೊಲೀಸರು ಬಂಧಿಸಲಿ. ಸಚಿವ ರೈ ರಾಜಕಾರಣ ಮಾಡುವುದನ್ನು ಬಿಟ್ಟು ಜಿಲ್ಲೆಯಲ್ಲಿ ಶಾಂತಿ ನೆಲೆಗೊಳಿಸುವ ಪ್ರಯತ್ನ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯ ಸಚಿವರು ತಾನು "ಹುಲಿ" ಎಂದು ಹೇಳಿಕೊಂಡಿದ್ದಾರೆ. ಈಗ ಆ ಹುಲಿ ರಕ್ತ ಕುಡಿಯುತ್ತಿದೆ. ಹುಲಿ ಕಾಡಲ್ಲಿರುವುದೇ ಕ್ಷೇಮ ಎಂದು ಲೇವಡಿ ಮಾಡಿದ ನಳಿನ್, ಡಿ.ವಿ. ಸದಾನಂದ ಗೌಡ ಮತ್ತು ಶೋಭಾ ಕರಂದ್ಲಾಜೆಗೆ ರಾಜ್ಯದೆಲ್ಲೆಡೆ ಸ್ಪರ್ಧಿಸಿದರೂ ಗೆಲ್ಲುವ ತಾಕತ್ತಿದೆ. ಆದರೆ ರಮಾನಾಥ ರೈ ಬಂಟ್ವಾಳ ಬಿಟ್ಟು ಹೊರಗೆ ಬಂದಿಲ್ಲ ಎಂದರು.

"ರಷ್ಯಾ ದೇಶಕ್ಕೆ ನಾನು ಸಂಸದರ ನಿಯೋಗದೊಂದಿಗೆ ತೆರಳಿದ್ದೆ. ನಾಲ್ಕು ದಿನಗಳ ಕಾಲ ಅಲ್ಲಿ ಭಯೋತ್ಪಾದನೆ ವಿರುದ್ಧ ಹೊಂದಾಣಿಕೆಯಲ್ಲಿ ಕಾರ್ಯ ನಿರ್ವಹಿಸುವುದು, ಶಸ್ತ್ರಾಸ್ತ್ರ, ಎರಡೂ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯದ ಕುರಿತು ಚರ್ಚೆಯಾಯಿತು. ಇನ್ನೂ ಎರಡು ದಿನಗಳ ಕಾಲ ನಾನು ಅಲ್ಲಿರಬೇಕಿತ್ತು. ಆದರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಶಾಂತಿಯ ಕಾರಣದಿಂದ ಅರ್ಧಕ್ಕೇ ವಾಪಸ್ ಬರಬೇಕಾಯಿತು" ಎಂದು ನಳಿನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ಸಚಿವ ಕೃಷ್ಣ ಪಾಲೆಮಾರ್, ಮಾಜಿ ಶಾಸಕರಾದ ಯೋಗೀಶ್ ಭಟ್, ಮೋನಪ್ಪ ಭಂಡಾರಿ, ಪಕ್ಷದ ಮುಖಂಡರಾದ ವೇದವ್ಯಾಸ ಕಾಮತ್, ಜಿತೇಂದ್ರ ಕೊಟ್ಟಾರಿ, ಸುದರ್ಶನ್, ಕಿಶೋರ್ ರೈ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News