ಪ್ರೊ.ಆಚಾರ್ಯ, ಸೇಸು ದೇವಾಡಿಗರಿಗೆ ಸನ್ಮಾನ
ಉಡುಪಿ, ಜು.12: ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರ ಜನ್ಮನಕ್ಷತ್ರದ ಪ್ರಯುಕ್ತ ಉಡುಪಿ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಸ್ವಾಮೀಜಿಯವರ ಅಭಿಮಾನಿ ಶಿಷ್ಯರಿಂದ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಕೆಲಸ ಮಾಡುತ್ತಿರುವ ಪ್ರೊ. ಪಾಡಿಗಾರು ರಾಧಾಕೃಷ್ಣ ಆಚಾರ್ಯ ಹಾಗೂ ಆದಮಾರಿನ ಮೂಲ ಮಠದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಕಷ್ಟ ಜೀವಿ ಸೇಸು ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ಇಬ್ಬರನ್ನೂ ಸನ್ಮಾನಿಸಿದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಸೇಸು ದೇವಾಡಿಗ ಅವರು ನಾಲ್ಕು ಸ್ವಾಮೀಜಿಯವರ ತಲೆಮಾರನ್ನು ಕಂಡಂತಹ ವರು. ಯಾವುದೇ ಸಂಸ್ಥೆ ಬೆಳೆಯಲು ಇಂಥವರ ನಿಸ್ವಾರ್ಥ ಮನಸ್ಸಿನ ಸೇವೆ ಕಾರಣವಾಗಿರುತ್ತದೆ ಎಂದರು.
ಗೋವಿಂದರಾಜ್ ಸ್ವಾಗತಿಸಿ ಸನ್ಮಾನಪತ್ರ ವಾಚಿಸಿದರೆ, ವಾಸುದೇವ ರಂಗ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಅತಿಥಿ ಕಲಾವಿದರಿಂದ ಮಾಗಧ ವಧೆ ಹಾಗೂ ಸುಧನ್ವರ್ಜುನ ಯಕ್ಷಗಾನ ಪ್ರದರ್ಶನಗೊಂಡಿತು.