'ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಿ ನೋಡಿ' -ಸಂಸದರ ಸಹಿತ ಬಿಜೆಪಿ ಮುಖಂಡರ ಸವಾಲು

Update: 2017-07-13 13:03 GMT

ಮಂಗಳೂರು, ಜು.13: ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಬಂಧಿಸಿ ನೋಡಿ ಎಂದು ನಗರದ ಪುರಭವನದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಇಂದು ನಡೆದ ಪ್ರತಿಭಟನಾ ಸಭೆಯಲ್ಲಿ ಯಡಿಯೂರಪ್ಪ ಸಹಿತ ಇಬ್ಬರು ಸಂಸದರು ಸವಾಲೆಸೆದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಮಾತನಾಡುತ್ತಾ ‘‘ಕಲ್ಲಡ್ಕ ಪ್ರಭಾಕರ ಭಟ್‌ರ ಬಂಧನವಾದರೆ ರಾಜ್ಯದಲ್ಲಿ ಬೆಂಕಿ ಹತ್ತಿ ಉರಿಯುತ್ತೆ. ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಬಂಧಿಸಿದರೆ ರಾಜ್ಯದಲ್ಲಿ ಏನಾಗುತ್ತದೆ ಎಂದು ಪೊಲೀಸರಿಂದ ವರದಿ ಪಡೆದುಕೊಳ್ಳಿ ಎಂದು ರಾಜ್ಯ ಸರಕಾರದ ಮುಂದೆ ಸವಾಲೊಡ್ಡಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಪೊಲೀಸರ ಮೂಲಕ ಭಯೋತ್ಫಾದನೆಗೆ ತೊಡಗಿದೆ. ಇದರ ವಿರುದ್ಧ ಹೋರಾಟ ನಡೆಸಿ ಬಂಧನಕ್ಕೊಳಗಾಗಲು ಸಿದ್ಧ. ‘‘ಕಲ್ಲಡ್ಕ ಡಾ. ಪ್ರಭಾಕರ ಭಟ್‌ರನ್ನು ಒಂದು ಸಾರಿ ಬಂಧಿಸಿ ನೋಡಿ ’’ಎಂದು ರಾಜ್ಯ ಸರಕಾರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಸವಾಲೆಸೆದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡುತ್ತಾ,‘‘ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಮುಟ್ಟಿ ನೋಡಿ. ಅದು ಕಾಂಗ್ರೆಸ್ ನ ಶವದ ಪಟ್ಟಿಗೆಗೆ ಕೊನೆಯ ಮೊಳೆಯಾಗುತ್ತದೆ’’ ಎಂದು ಸವಲೊಡ್ಡಿದರು.

ಪ್ರತಿಭಟನಾ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಮಹಿಳಾ ಮೊರ್ಚಾದ ರಾಜ್ಯ ವಕ್ತಾರೆ ಸುಲೋಚನಾ ಭಟ್ ಮಾತನಾಡುತ್ತಾ,‘‘ ಡಾ. ಪ್ರಭಾಕರ ಭಟ್ಟರ ವಿರುದ್ಧ ಕ್ರಮ ಕೈ ಗೊಂಡರೆ ರಾಜ್ಯ ಹೊತ್ತಿ ಉರಿಯುತ್ತದೆ’’ ಎಂದರು.

ಬಿಜೆಪಿ ಮಹಿಳಾ ಮೊರ್ಚಾದ ವತಿಯಿಂದ ನಗರದಲ್ಲಿ ಹಮ್ಮಿಕೊಂಡ ಪ್ರತಿಭಟನಾ ರ್ಯಾಲಿಗೆ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ ಪುರಭವನದ ಒಳಗೆ ಪ್ರತಿಭಟನಾ ಸಭೆ ಹಮ್ಮಿಕೊಳ್ಳಬೇಕಾಯಿತು ಎಂದು ಸುಲೋಚನಾ ಭಟ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News