ಜಿಲ್ಲಾ ಮಟ್ಟದ ಶಾಂತಿಸಭೆಯಲ್ಲಿ ಉಸ್ತುವಾರಿ ಸಚಿವ ರಮಾನಾಥ ರೈ ಅಧಿಕಾರಿಗಳಿಗೆ ಖಡಕ್ಕ್ ಎಚ್ಚರಿಕೆ

Update: 2017-07-13 16:54 GMT

ಮಂಗಳೂರು, ಜು.13: ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗೆ ಸಂಬಂಧಿಸಿ ಯಾವ ಕಾರಣಕ್ಕೂ ಅಮಾಯಕರಿಗೆ, ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು. ಅಪರಾಧಿಗಳು ಯಾರು ಮತ್ತು ದುಷ್ಕೃತ್ಯಗಳಿಗೆ ಕಾರಣರು ಯಾರು ಎಂಬುದನ್ನು ಗುರುತಿಸಿಕೊಂಡು ಅಂತಹವರ ವಿರುದ್ಧ ಕಠಿಣ ಕ್ರಮ ಜರಗಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಪೊಲೀಸ್ ಅಧಿಕಾರಿಗಳಿಗೆ ಖಡಕ್ಕ್ ಎಚ್ಚರಿಕೆ ನೀಡಿದ್ದಾರೆ.

ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರ್ವಪಕ್ಷಗಳ, ಜನಪ್ರತಿನಿಧಿಗಳ, ಧರ್ಮಗುರುಗಳ ಸಮ್ಮುಖ ಗುರುವಾರ ನಡೆದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಶೇ.99 ಮಂದಿ ಶಾಂತಿಯನ್ನು ಬಯಸುತ್ತಾರೆ. ಶಾಂತಿ ಬಯಸದ ಬಿಜೆಪಿ, ಸಂಘಪರಿವಾರ ಮುಖಂಡರು ಈ ಸಭೆಯನ್ನು ಬಹಿಷ್ಕರಿಸಿದೆ.

ಹಾಗಂತ ಜಿಲ್ಲೆಯ ಜನತೆ ವಿಚಲಿತರಾಗಬೇಕಿಲ್ಲ. ಜಿಲ್ಲೆಯಲ್ಲಿ ಮತೀಯ ಗಲಭೆಯು ಇದು ಮೊದಲೇನೂ ಅಲ್ಲ. ಆದರೆ ಈಗ ನಡೆಯುತ್ತಿರುವ ಗಲಭೆ ಪೂರ್ವನಿಯೋಜಿತ. ಇದು ಮೇಲ್ನೋಟಕ್ಕೆ ತಿಳಿಯಾದಂತೆ ಕಂಡು ಬಂದರೂ ಗೆರಿಲ್ಲಾ ಮಾದರಿಯಲ್ಲಿ ಚಟುವಟಿಕೆ ನಡೆಯುತ್ತಿದೆ. ಅಮಾಯಕರು ಇದಕ್ಕೆ ಬಲಿಪಶುಗಳಾಗುತ್ತಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರು, ಸೂತ್ರಧಾರಿಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕು. ಸರಕಾರ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಹಾಗಂತ ಯಾವ ಕಾರಣಕ್ಕೂ ಅಮಾಯಕರಿಗೆ ತೊಂದರೆ ಕೊಡಬಾರದು ಎಂದು ಸಚಿವ ರೈ ಹೇಳಿದರು.

ಜಿಲ್ಲೆಗೆ ಬೆಂಕಿ ಹಾಕುವುದಾಗಿ ಕೆಲವು ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಅದು ದುರಹಂಕಾರದ ಪರಮಾವಧಿ. ಅದನ್ನು ನಿರ್ಲಕ್ಷಿಸುವುದೇ ಲೇಸು. ಇಂತಹ ಬೆಂಕಿಯನ್ನು ನಂದಿಸಲು ಶಾಂತಿಪ್ರಿಯರಿಗೆ ಗೊತ್ತು ಎಂದ ಸಚಿವ ರೈ, ಪ್ರಚೋದನಕಾರಿ ಭಾಷಣ ಮಾಡಿದರೆ ಮೌನವಾಗಿರುವುದು ಬೇಡ. ಕಠಿಣ ಕ್ರಮ ಕೈಗೊಳ್ಳಲು ಯಾವುದೇ ಹಿಂಜರಿಕೆ ಬೇಡ ಎಂದು ಸೂಚಿಸಿದರು.

ಗೊಂದಲ ಬೇಡ: ಜಿಲ್ಲೆಯಲ್ಲಿ ಕೋಮುಗಲಭೆ ನಡೆಯುತ್ತಿದೆ ಎಂಬ ಭಾವನೆ ಯಾರಲ್ಲೂ ಬೇಡ. ಹಾಗೊಂದು ಮನೋಭಾವ ಇದ್ದಿದ್ದರೆ ಹಲ್ಲೆಗೊಳಗಾದ ಶರತ್‌ನನ್ನು ರಿಕ್ಷಾ ಚಾಲಕ ಅಬ್ದುರ್ರವೂಫ್ ಮತ್ತು ಅದೇ ರೀತಿ ರಿಯಾಝ್‌ನನ್ನು ಪ್ರಕಾಶ್ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವು ನೀಡುತ್ತಿರಲಿಲ್ಲ.

ಜನರು ಶಾಂತಿಯಿಂದಿದ್ದಾರೆ. ಆಡಳಿತ ಮತ್ತು ಪ್ರತಿಪಕ್ಷದ ಮಧ್ಯೆ ಮಾತ್ರ ಆರೋಪ-ಪ್ರತ್ಯಾರೋಪ ನಡೆಯುತ್ತಿದೆಯಷ್ಟೆ. ರಾಜಕೀಯ ಬದಿಗೊತ್ತಿ ಎಲ್ಲರೂ ಶಾಂತಿ ಕಾಪಾಡಲು ಪ್ರಯತ್ನಿಸಿ ಎಂದು ಕರೆ ನೀಡಿದ ಸಚಿವ ಯು.ಟಿ. ಖಾದರ್, ಹತ್ಯೆಗೀಡಾದ ಅಶ್ರಫ್ ಕಲಾಯಿ ಮತ್ತು ಶರತ್ ಬೇರೆ ಬೇರೆ ಸಂಘಟನೆಗಳ ಕಾರ್ಯಕರ್ತರಾಗಿರಬಹುದು. ಆದರೆ ಅವರು ಕ್ರಿಮಿನಲ್‌ಗಳಲ್ಲ. ಹಾಗಾಗಿ ಮೃತರ ಕುಟುಂಬಸ್ಥರಿಗೆ ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ ನೆರವು ನೀಡಲು ಪ್ರಯತ್ನಿಸುವುದಾಗಿ ಹೇಳಿದರು.

ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್, ಕಣಚೂರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಣಚೂರು ಮೋನು, ಮುಸ್ಲಿಂ ವರ್ತಕರ ಸಂಘದ ಮುಖಂಡ ಅಲಿ ಹಸನ್, ಸಿಪಿಎಂ ಮುಖಂಡ ಕೆ.ಆರ್.ಶ್ರೀಯಾನ್, ಸಿಪಿಐ ಮುಖಂಡ ಸೀತಾರಾಮ ಬೇರಿಂಜ, ಮಂಗಳೂರು ಬಿಷಪರ ಆಪ್ತ ಸಹಾಯಕ ಫಾ. ಡೆನ್ನಿಸ್ ಮೊರಾಸ್ ಪ್ರಭು, ರೈತ ಸಂಘದ ಮುಖಂಡ ಯಾದವ ಶೆಟ್ಟಿ, ಎಸ್‌ಡಿಪಿಐ ಮುಖಂಡರಾದ ಹನೀಫ್ ಖಾನ್ ಕೊಡಾಜೆ, ಅಶ್ರಫ್, ಮುಸ್ಲಿಂ ಲೀಗ್ ಮುಖಂಡರಾದ ಸಿ.ಅಹ್ಮದ್ ಜಮಾಲ್, ಮುಹಮ್ಮದ್ ಇಸ್ಮಾಯೀಲ್, ಫಾ.ಓನಿಲ್ ಡಿಸೋಜ, ಜನಧ್ವನಿ ಸಂಘಟನೆಯ ಮೆಲ್ವಿನ್ ಪಿಂಟೋ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಐಟಿಯು ಮುಖಂಡ ಸುನೀಲ್ ಕುಮಾರ್ ಬಜಾಲ್, ದಲಿತ ಸಂಘಟನೆಯ ಮುಖಂಡ ದೇವದಾಸ್, ಕಾರ್ಪೊರೇಟರ್ ದಯಾನಂದ ಶೆಟ್ಟಿ, ನ್ಯಾಷನಲ್ ಟ್ಯುಟೋರಿಯಲ್‌ನ ಪ್ರಾಂಶುಪಾಲ ಖಾಲಿದ್ ಉಜಿರೆ, ಬಂಟ್ವಾಳ ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಉಳ್ಳಾಲ ನಗರಸಭೆಯ ಅಧ್ಯಕ್ಷ ಹುಸೈನ್ ಕುಂಞಿಮೋನು, ಕಾಂಗ್ರೆಸ್ ಮುಖಂಡರಾದ ಇದಿನಬ್ಬ ಕಲ್ಲಡ್ಕ, ಎಂ.ಅಹ್ಮದ್ ಬಾವ ಅನಿಸಿಕೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಶಾಸಕರಾದ ಅಭಯಚಂದ್ರ ಜೈನ್, ಮೊಯ್ದಿನ್ ಬಾವಾ, ಶಕುಂತಳಾ ಶೆಟ್ಟಿ, ಮೇಯರ್ ಕವಿತಾ ಸನಿಲ್, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಪಶ್ಚಿಮ ವಲಯ ಐಜಿಪಿ ಹರಿಶೇಖರನ್, ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಕುಮಾರ್, ದ.ಕ.ಜಿಪಂ ಸಿಇಒ ಡಾ.ಎಂ.ಆರ್.ರವಿ ಉಪಸ್ಥಿತರಿದ್ದರು.

ಬಿಜೆಪಿಯ ಬಹಿಷ್ಕಾರಕ್ಕೆ ಖಂಡನೆ
 ಇಂದಿನ ಶಾಂತಿ ಸಭೆಗೆ ಬಿಜೆಪಿ ಬಹಿಷ್ಕಾರ ಹಾಕಿರುವ ಬಗ್ಗೆ ಸಭೆಯಲ್ಲಿ ಪಾಲ್ಗೊಂಡ ಬಹುತೇಕ ಪಕ್ಷಗಳ, ಸಂಘಟನೆಗಳ ಮುಖಂಡರು ಖಂಡನೆ ವ್ಯಕ್ತಪಡಿಸಿದರು. ಬಿಜೆಪಿಗೆ ಜಿಲ್ಲೆಯಲ್ಲಿ ಶಾಂತಿ ಬೇಕಿಲ್ಲ. ಶಾಂತಿ ಬಯಸಿದ್ದರೆ ಬಿಜೆಪಿಗರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಸಭೆ ಬಹಿಷ್ಕರಿಸಿ ಹೊರ ನಡೆದ ಜೆಡಿಎಸ್:

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸರ್ವಪಕ್ಷಗಳ ಮುಖಂಡರ, ಜನಪ್ರತಿನಿಧಿಗಳ, ಧರ್ಮಗುರುಗಳ ‘ಶಾಂತಿಗಾಗಿ ಪಾದಯಾತ್ರೆ’ಯನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲು ಜೆಡಿಎಸ್ ಬಯಸಿತ್ತು. ಆದರೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಇದಕ್ಕೆ ಅನುಮತಿ ನೀಡಲಿಲ್ಲ. ಇದು ಖಂಡನೀಯ ಎಂದು ಸಭೆಯ ಆರಂಭದಲ್ಲೇ ಹೇಳಿದ ಜೆಡಿಎಸ್ ಮುಖಂಡರಾದ ವಸಂತ ಪೂಜಾರಿ ಮತ್ತು ಅಝೀಝ್ ಕುದ್ರೋಳಿ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಆವಾಗ ಸಚಿವ ರಮಾನಾಥ ರೈ ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದರೂ ಕೂಡ ಜೆಡಿಎಸ್ ಮುಖಂಡರು ಅದಕ್ಕೆ ಕಿವಿಗೊಡದೆ ಸಭೆಯಿಂದ ಹೊರ ನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News