×
Ad

ಮುಲ್ಕಿ ನ.ಪಂ. : ಮೂಲ ಸೌಕರ್ಯಕ್ಕೆ 3 ಕೋಟಿ ರೂ. ಹೆಚ್ಚುವರಿ ಅನುದಾನ

Update: 2017-07-14 18:03 IST

ಮುಲ್ಕಿ, ಜು.14: ಮುಲ್ಕಿ ನಗರ ಪಂಚಾಯತ್‌ನ ಸಮಗ್ರ ಅಭಿವೃದ್ದಿಯ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು ಜನರು ಅಭಿವೃದ್ದಿ ಕಾಮಾಗಾರಿಗಳ ಬಗ್ಗೆ ನಿಗಾ ವಹಿಸಬೇಕೆಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.

ಮುಲ್ಕಿ ನಗರ ಪಂಚಾಯತ್‌ಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪ್ರದೇಶದ ಕಾಮಾಗಾರಿಗಾಗಿ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಮುಲ್ಕಿಯ ಬಿಜಾಪುರ ಕಾಲನಿಯಲ್ಲಿ ನೆರವೇರಿಸಿ ಮುಲ್ಕಿ ನಗರ ಪಂಚಾಯತ್ ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ  ವಿಶೇಷ ಕಾಳಜಿ ವಹಿಸಿ ಮುಲ್ಕಿ ಬಸ್ ನಿಲ್ದಾಣಕ್ಕೆ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು ಈಗಾಗಲೇ ಪಂಚಾಯತ್‌ನ ಖಾತೆಗೆ ಜಮೆಯಾಗಿದೆ. ಶೀಘ್ರದಲ್ಲಿ ಜಾಗ ಖರೀದಿಸಿ ಬಸ್ ನಿಲ್ದಾಣದ ಯೋಜನೆಗೆ ಚಾಲನೆ ನೀಡಲಾಗುವುದು. ಮುಲ್ಕಿಯಲ್ಲಿ ಸೂಕ್ತ ಜಾಗ ದೊರಕಿದಲ್ಲಿ ಮುಲ್ಕಿಗೆ ಸುಸಜ್ಜಿತ ಮೀನು ಮಾರುಕ್ಟೆ ಹಾಗೂ ಎ ಪಿ ಎಂ ಸಿ ಯಾರ್ಡ್ ನಿರ್ಮಿಸಲಾಗುವುದು. ಮುಲ್ಕಿಗೆ ಕುಡಿಯುವ ನೀರಿನ ಯೋಜನೆಗೆ 14 ಕೋಟಿ ರೂ. ಮಂಜೂರಾಗಿದ್ದು ಟೆಂಡರ್ ಕರೆಯಲಾಗಿದೆ.

ಅಭಿವೃದ್ದಿ ಕಾಮಗಾರಿಯಲ್ಲಿ ಜನಪ್ರತಿನಿಧಿಗಳು ರಾಜಕೀಯ ಮರೆಯಬೇಕು. ಸಸಿಹಿತ್ಲುವಿನಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಜಟ್ಟಿ ಕಾಮಗಾರಿ ನಡೆಯುತ್ತಿದ್ದು ಶೀಘ್ರದಲ್ಲಿ ಸಂಪೂರ್ಣಗೊಳ್ಳಲಿದೆಯೆಂದು ಅವರು ಹೇಳಿದರು.

ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ವಾಸಿಸುವ ಪ್ರದೇಶಗಳಾದ ಮುಲ್ಕಿಯ ಕೊಯ್ಯಿರು, ಚಿತ್ರಾಪು, ಸರ್ಕಾರಿ ಆಸ್ಪತ್ರೆ ಹಿಂಬದಿ, ಅಮೃತಾಮಯಿ ನಗರ ಮತ್ತು ಕೆ ಎಸ್ ರಾವ್ ನಗರದ ಬಿಜಾಪುರ ಕಾಲನಿ ಸೇರಿದಂತೆ 5 ಕಡೆಗಳಲ್ಲಿ 2 ಕೋಟಿ ರೂ. ಅನುದಾನದಲ್ಲಿ ಈಗಾಗಲೇ ತಲಾ 25 ಲಕ್ಷದಂತೆ 1.25 ಕೋಟಿ ರೂ. ಬಿಡುಗಡೆಗೊಂಡಿದ್ದು ಅದರಲ್ಲಿ ಎಲ್ಲಾ 5 ಪ್ರದೇಶಗಳಲ್ಲಿ ಕಾಂಕ್ರಿಟ್ ರಸ್ತೆ,ಚರಂಡಿ ನಿರ್ಮಾಣ ಕಾಮಗಾರಿ ನಡೆಯಲಿದೆ.

ಬಿಜಾಪುರ ಕಾಲನಿಯಲ್ಲಿ ರಸ್ತೆ ಕಾಂಕ್ರೀಟಿಕರಣ, ಗಾರ್ಡನ್ ರಚನೆ, ಟೆನ್ನಿಸ್ ಕೋರ್ಟ್ ನಿರ್ಮಾಣ ಮುಂತಾದ ಅಭಿವೃದ್ದಿ ಕಾಮಾಗಾರಿಗಳು ನಡೆಯಲಿವೆ. ಮುಂದಿನ ಹಂತದಲ್ಲಿ ಅಮೃತಾಮಯಿ ನಗರದಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳು ನಡೆಯಲಿದೆಯೆಂದು ಮುಲ್ಕಿ ನಗರ ಪಂಚಾಯತ್ ಅಭಿಯಂತರರಾದ ಅಶ್ವಿನಿ ತಿಳಿಸಿದರು.

ಅದ್ಯಕ್ಷತೆಯನ್ನು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ ವಹಿಸಿದ್ದು ಉಪಾಧ್ಯಕ್ಷೆ ರಾಧಿಕಾ ಕೋಟ್ಯಾನ್, ಮಾಜಿ ಅಧ್ಯಕ್ಷ ಬಿ ಎಂ ಆಸೀಫ್ ಮುಖ್ಯಾಧಿಕಾರಿ ಶ್ರೀಮತಿ ಇಂದು, ಪಂಚಾಯತ್ ಸದಸ್ಯರುಗಳಾದ ಬಿ.ಎಮ್.ಆಸಿಫ್, ಮೀನಾಕ್ಷಿ ಬಂಗೇರ, ಯೋಗೀಶ್ ಕೋಟ್ಯಾನ್, ಪುರುಷೋತ್ತಮ ರಾವ್, ವಿಮಲಾ ಪೂಜಾರಿ, ಬಶೀರ್ ಕುಳಾಯಿ, ಸಂದೀಪ್ ಚಿತ್ರಾಪು, ವಸಂತಿ ಭಂಡಾರಿ, ಅಶೋಕ್ ಪೂಜಾರ್, ಕಲಾವತಿ, ಎಪಿಎಂಸಿ ಸದಸ್ಯ ಜೋಯೆಲ್ ಡಿ ಸೋಜಾ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾರ್ಡ್, ಗುತ್ತಿಗೆದಾರರಾದ ಘನಶ್ಯಾಮ್ ಶೆಟ್ಟಿ ಮತ್ತು ಎಮ್.ಕೆ.ಜಸ್ಬೀರುದ್ದೀನ್, ಸ್ಥಳೀಯರಾದ ಮಂಜುನಾಥ್ ಕಂಬಾರ್, ಮುಹಮ್ಮದ್ ಹಕೀಂ, ವಸಂತ ಸುವರ್ಣ, ಮಾಧವ ಸನಿಲ್, ಚಂದ್ರಶೇಖರ್ ಸ್ನೇಹ, ಇಸು ಕುಮಾರ್, ಗೊಳ್ಳಾಲಪ್ಪ, ಶಿವಾನಂದ, ಮಂಜುನಾಥ್ ಆರ್.ಕೆ., ಈರಯ್ಯ ಹಿರೇಮಠ್, ಜಯ ಕುಮಾರ್ ಅಮೃತಾ ನಂದಮಯಿ ನಗರ ಮತ್ತಿತರಿದ್ದರು.

 2ಕೋಟಿ ರೂ. ಕಾಮಗಾರಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪ್ರದೇಶಗಳಾದ ಕುದ್ಕಪಳ್ಳದ ಮಾತಾ ಅಮೃತಾಮಯಿ ನಗರ, ಕೊಯ್ಯಿರು, ಚಿತ್ರಾಪು, ಮುಲ್ಕಿಯ ಕೆಎಸ್ ರಾವ್ ನಗರದ ಬಿಜಾಪುರ ಕಾಲನಿ ಮತ್ತು ಮುಲ್ಕಿಯ ಸರ್ಕಾರಿ ಆಸ್ಪತ್ರೆಯ ಹಿಂಬದಿಯ ಪ್ರದೇಶಗಳಿಗೆ 2016-17 ರ ಸಾಲಿನ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ ಬಿಡುಗಡೆಯಾದ 2 ಕೋಟಿ ಅನುದಾನದಲ್ಲಿ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ಜೈನ್ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News