‘ಕೆರೆ ಹಾಡು’ ವಾಚಿಸಿದ ಪದ್ಮಶ್ರೀ ಡಾ.ಕೆ.ಎಸ್. ನಿಸಾರ್ ಅಹಮ್ಮದ್
ಮಂಗಳೂರು, ಜು. 14: ನಗರದ ಪುರಭವನದಲ್ಲಿ ಅರಣ್ಯ ಇಲಾಖೆ ಹಾಗೂ ಇತರ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ನೀರಿಗಾಗಿ ಅರಣ್ಯ’ ಕಾರ್ಯಕ್ರಮದಲ್ಲಿ ನಾಡೋಜ, ಪದ್ಮಶ್ರೀ ಪುರಸ್ಕೃತ, ನಿತ್ಯೋತ್ಸವ ಕವಿ ಡಾ. ಕೆ.ಎಸ್. ನಿಸಾರ್ ಅಹಮ್ಮದ್ರವರು ತಮ್ಮ ‘ಕೆರೆ’ ಹಾಡಿನ ವಾಚನದ ಮೂಲಕ ಕೆರೆಗಳ ಮಹತ್ವವನ್ನು ಸಾರಿದರು.
ಕಾರ್ಯಕ್ರಮದಲ್ಲಿ ನಾಡೋಜ ಡಾ. ಸಾಲುಮರದ ತಿಮ್ಮಕ್ಕ ಹಾಗೂ ಕುಸಲ್ದರಸೆ ನವೀನ್ ಡಿ. ಪಡೀಲ್ ಜತೆಯಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ನಗರ, ಹಳ್ಳಿ ಪ್ರದೇಶಗಳಲ್ಲಿ ಜೀವಜಲವಾಗಿರುವ ಕೆರೆಗಳು ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿದ್ದವುಗಳು ಸಾವಿರಾರು ಸಂಖ್ಯೆಗಳಿಗೆ ಇಳಿಮುಖವಾಗಿವೆ. ಇರುವುದನ್ನಾದರೂ ಉಳಿಸುವ ಅಗತ್ಯತೆ ಕುರಿತು ತಮ್ಮ ಕೆರೆ ಹಾಡಿನ ಮೂಲಕ ನೆರೆದವರ ಗಮನ ಸೆಳೆದರು.
ಅರಣ್ಯ ನಾಶ ಹಾಗೂ ವಿಪತ್ತಿನಿಂದಾಗಿ ಮಾನವ ಕುಲವೇ ಇಂದು ಆಪತ್ತಿಗೆ ಸಿಲುಕಿದೆ ಎಂದು ಎಚ್ಚರಿಕೆ ನೀಡಿದ ಅವರು, ಭೂಮಿಯನ್ನು ಮನುಷ್ಯರಷ್ಟೇ ಅಲ್ಲ, ಇತರ ಜೀವ ಸಂಕುಲಗಳೂ ಉಪಯೋಗಿಸುತ್ತವೆ. ಆದರೆ ಅವುಗಳಿಗೆ ಪ್ರಜ್ಞೆ ಇಲ್ಲ. ಪ್ರಜ್ಞಾವಂತನಾಗಿರುವ ಮನುಷ್ಯ ಒಂದೆಡೆ ಪ್ರಾಕೃತಿಕ ಸಂಪತ್ತನ್ನು ವಿನಾಶ ಮಾಡುವ ಜತೆಯಲ್ಲೇ ಮತ್ತೊಂದೆಡೆ ನಿರ್ಮಾಣ ಮಾಡುವ ಕಾರ್ಯದಲ್ಲೂ ತೊಡಗಿರುವುದು ಸರಿಸಮಾನತೆಯನ್ನು ತೋರಿಸಿದಂತಾಗಿದೆ. ಅರಣ್ಯ ಸಚಿವರು ತಮ್ಮ ಅವಧಿಯಲ್ಲಿ ಅರಣ್ಯವನ್ನು ಉಳಿಸುವಲ್ಲಿ ಇಲಾಖೆಗೆ ಇನ್ನಷ್ಟು ಧನಸಹಾಯದ ಮೂಲಕ ಪ್ರೋತ್ಸಾಹ ನೀಡಬೇಕೆಂದು ಅವರು ಈ ಸಂದರ್ಭ ಕರೆ ನೀಡಿದರು.
ನಾಶ ಮಾಡಿದ ಮರ ಗಿಡಗಳನ್ನಾದರೂ ಮತ್ತೆ ಬೆಳೆಸಬಹುದು. ಆದರೆ ನಮ್ಮ ಶಿಲಾಗುಡ್ಡೆ ಹಾಗೂ ಖನಿಜ ಸಂಪನ್ಮೂಲಗಳನ್ನು ಯಾವುದೇ ಕಾರಣಕ್ಕೂ ಮತ್ತೆ ಸೃಷ್ಟಿಸಲು ಸಾಧ್ಯವೇ ಇಲ್ಲ. ಜನಸಾಮಾನ್ಯರು ಪ್ರಕೃತಿ ಬಗ್ಗೆ ಅರಿವು ಮೂಡಿಸಿಕೊಂಡು ಅವುಗಳ ಸಂರಕ್ಷಣೆಗೆ ಕಾಳಜಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು. ಕಾರ್ಯಕ್ರಮವನ್ನು ಸಚಿವ ರಮಾನಾಥ ರೈ ಉದ್ಘಾಟಿಸಿದರು.
ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎ. ಕುಮಾರ್ ಹೆಗ್ಡೆ ಸಂಪನ್ಮೂಲ ವ್ಯಕ್ತಿಯಾಗಿ ಅರಣ್ಯದ ಅಗತ್ಯತೆ ಕುರಿತು ಉಪನ್ಯಾಸ ನೀಡಿದರು.
ಶಾಸಕ ಜೆ.ಆರ್. ಲೋಬೋ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಸಕ ಮೊಯ್ದೀನ್ ಬಾವಾ, ಮೇಯರ್ ಕವಿತಾ ಸನಿಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ, ಬಿ.ಎಚ್. ಖಾದರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರಾಡ್ರಿಗಸ್, ವನ್ಯಜೀವಿ ಪರಿಪಾಲಕ ಕಿರಣ್ ಬಡ್ಲೆಗುತ್ತು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕಿಶನ್ ಸಿಂಗ್ ಸುಗಾರ, ಅನೂರ್ ರೆಡ್ಡಿ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್, ಗೇರು ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಎಸ್. ಅರೇಕಲ್, ಜಯನರಸಿಂಹ ರಾಜ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂಜಯ್ ಎಸ್. ಬಿಜ್ಜೂರು, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಸದಸ್ಯೆ ಮಮತಾ ಗಟ್ಟಿ, ಮನಪಾ ಸದಸ್ಯರು ಉಪಸ್ಥಿತರಿದ್ದರು.