ಕೊಲೆಯತ್ನ ಪ್ರಕರಣ: ಆರೋಪಿಯ ವಿರುದ್ಧ ಇನ್ನಷ್ಟು ದೂರು
Update: 2017-07-14 14:56 GMT
ಮಂಜೇಶ್ವರ, ಜು. 14: ಮನೆಯೊಡೆಯನ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಯ ವಿರುದ್ಧ ಇನ್ನಷ್ಟು ದೂರುಗಳು ಪೊಲೀಸರಿಗೆ ಲಭಿಸಿದೆ.
ಅಂಗಡಿಮೊಗರು ಎ.ಕೆ.ಜಿ. ನಗರದ ಅಹ್ಮದ್ ಅಲಿ ಅವರಿಗೆ ಮನೆಗೆ ನುಗ್ಗಿ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿದ್ದ ಸ್ಥಳೀಯ ನಿವಾಸಿ ಹನೀಫ ಯಾನೆ ಕಾಕ ಹನೀಪ(30) ಎಂಬಾತನನ್ನು ಬಂಧಿಸಲಾಗಿತ್ತು.ಆರೋಪಿ ವಿರುದ್ಧ ಇನ್ನಷ್ಟು ದೂರುಗಳೊಂದಿಗೆ ಹಲವರು ಪೊಲೀಸ್ ಠಾಣೆಗೆ ತಲುಪಿದ್ದಾರೆ. ಈ ಪ್ರದೇಶದಲ್ಲಿ ಈ ಹಿಂದೆ ನಡೆದ ಮನೆ, ಜಾನುವಾರು, ಕೋಳಿ ಕಳವು ಪ್ರಕರಣಗಳ ಹಿಂದೆ ಈತ ಶಾಮೀಲಾಗಿದ್ದಾನೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.