ಪ್ರಗತಿ ಸಂಪನ್ಮೂಲ ಕೇಂದ್ರದ 9ನೇ ವಾರ್ಪಿಕೋತ್ಸವ
ಭಟ್ಕಳ,ಜು.15: ಜೀವನಕ್ಕೆ ಶಿಕ್ಷಣ, ದೈವೀಕತೆ, ಸಾಮಾಜಿಕತೆ ಇವು ಮೂರು ಕೂಡಾ ಅತ್ಯಂತ ಅಗತ್ಯವಾದುದು, ಸಂಸ್ಕಾರವಂತರಾದಾಗ ಮಾತ್ರ ಇವು ದೊರೆಯಲು ಸಾಧ್ಯ ಎಂದು ನಾಮಧಾರಿ ಸಮಾಜದ ಅಧ್ಯಕ್ಷ ಹಾಗೂ ವಿಜಯಾ ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕ ಎಂ. ಆರ್. ನಾಯ್ಕ ಹೇಳಿದರು.
ಅವರು ಆಸರಕೇರಿ ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ಸಭಾ ಭವನದಲ್ಲಿ ಪ್ರಗತಿ ಸಂಪನ್ಮೂಲ ಕೇಂದ್ರದ 9ನೇ ವಾರ್ಪಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಕ್ಕಳಿಗೆ ಚಿಕ್ಕಂದಿನಿಂದಲೇ ತಾಯಂದಿರು ಸಂಸ್ಕಾರವನ್ನು ಕಲಿಸಬೇಕು, ಸಮಾಜದಲ್ಲಿ ಅವರ ಜವಾಬ್ದಾರಿಯ ಅರಿವು ಮೂಡಿಸುವ ಮೂಲಕ ಹಿರಿಯರು ಮಾರ್ಗದರ್ಶನ ಮಾಡಬೇಕು. ಆದರೆ ಇಂದು ಮನೆಯಲ್ಲಿ ಮಾರ್ಗದರ್ಶಕರೇ ಇಲ್ಲವಾಗಿದ್ದು ಯುವ ಜನಾಂಗ ಹಾದಿ ತಪ್ಪುವುದಕ್ಕೆ ಕಾರಣವಾಗಿದೆ. ಮಾತೆಯರು ತಮ್ಮ ಮಕ್ಕಳ ಕುರಿತು ಸದಾ ಜಾಗೃತೆ ವಹಿಸಿ ಮಕ್ಕಳು ಹೋರ ಹೋದಾಗ ಅವರ ಚಟುವಟಿಕೆಗಳ ಕುರಿತು ಅರಿತಿರಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ಸುಮಿತ್ರಾ ಪೂಜಾರಿ ವಹಿಸಿದ್ದರು.
ಅತಿಥಿಗಳಾಗಿ ಉಪಸ್ಥಿತರಿದ್ದ ಮೈರಾಡ್ ಪಶ್ಚಿಮ ಘಟ್ಟ ಯೋಜನೆಯ ಪ್ರೊಗ್ರಾಮ್ ಆಫೀಸರ್ ಸಿ.ಎಸ್. ಗೌಡಾ ಮಾತನಾಡಿ ಪ್ರತಿಯೋರ್ವರೂ ಕೂಡಾ ತಮ್ಮ ಮಕ್ಕಳ ಕುರಿತು ಕಾಳಜಿ ವಹಿಸುತ್ತಾರೆ, ಮಕ್ಕಳು ವ್ಯಸನ ಮುಕ್ತರಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಹಿರಿಯರದ್ದಾಗಿದೆ. ಚಿಕ್ಕಂದಿನಲ್ಲಿಯೇ ಮಕ್ಕಳನ್ನು ಬೆಳೆಸುವ ದಾರಿ ತಪ್ಪಾಗಿದ್ದರೆ ಮುಂದೆ ಅದು ಮಕ್ಕಳಿಗೂ ಅಪಾಯ, ತಂದೆ-ತಾಯಿಗೂ ಕೂಡಾ ಅಪಾಯ ಎಂದರು.
ಅತಿಥಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ಮಹಿಳೆಯರು ತಮ್ಮ ನಂಬಿಕೆಯ ಕುರಿತು ಅಛಲವಾದ ನಿರ್ಧಾರವನ್ನು ಹೊಂದಿರಬೇಕು. ನಂಬಿಕೆ ಮತ್ತು ಮೂಢ ನಂಬಿಕೆಯ ಕುರಿತು ತುಲನಾತ್ಮಕವಾಗಿ ವಿಚಾರ ಮಾಡಬೇಕಾಗುತ್ತದೆ. ಮೂಢನಂಬಿಕೆ ಎಂದೂ ನಂಬಿಕೆಯನ್ನು ನಾಶ ಮಾಡದಂತೆ ನೋಡಿಕೊಳ್ಳುವ ಅಛಲವಾದ ನಿರ್ಧಾರ ಜೀವನವನ್ನು ಹಸನುಗೊಳಿಸಬಲ್ಲದು ಎಂದರು. ಇತ್ತೀಚೆಗಷ್ಟೇ ಸುದ್ದಿಯೊಂದನ್ನು ನಂಬಿ ಮಹಿಳೆಯರು ತಮ್ಮ ಕುತ್ತಿಗೆಯಲ್ಲಿದ್ದ ಹವಳಗಳನ್ನು ಒಡೆದು ಹಾಕಿರುವುದನ್ನು ಉದಾಹರಿಸಿದ ಅವರು ಹಾಗಾದರೆ ನಾವು ನೂರಾರು ವರ್ಷಗಳಿಂದ ನಂಬಿಕೊಂಡು ಪರಂಪರೆ ಎಲ್ಲಿ ಹೋಯಿತು ಎಂದೂ ಪ್ರಶ್ನಿಸಿದರು.
ಅತಿಥಿ ಸಮಾಜ ಸೇವಕ ಶ್ರೀಧರ ನಾಯ್ಕ ಆಸರಕೇರಿ ಅವರು ಮಾತನಾಡಿ ಕೆಲವೊಮ್ಮೆ ನಾವು ಕಣ್ಣಿದ್ದೂ ಕುರುಡರಾಗುತ್ತೇವೆ. ಸಮಾಜದಲ್ಲಿ ನಾವು ಸರಿಯಾಗಿದ್ದಾಗ, ಕುಟುಂಬ ಸರಿ, ಸಮಾಜ ಸರಿ ಇರುತ್ತದೆ. ಸ್ವ ಸಹಾಯ ಸಂಘಗಳಲ್ಲಿ ಸಾಲ ಮಾಡುವಾಗ ಮರುಪಾವತಿಯ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಸಾಲ ಮಾಡಿದಾಗ, ಮಾಡಿದ ಸಾಲವನ್ನು ಸರಿಯಾದ ಉದ್ದೇಶಕ್ಕೆ ಬಳಸಿದಾಗ ಮಾತ್ರ ಯಶಸ್ಸು ದೊರೆಯುವುದು ಎಂದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಉತ್ತಮ ಅಂಕಗಳಿಸಿದ ಪ್ರಗತಿ ಸಂಪನ್ಮೂಲ ಕೇಂದ್ರದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಹಾಲಕ್ಷ್ಮೀ ಸ್ವ ಸಹಾಯ ಸಂಘದ ಸದಸ್ಯರು ಪ್ರಾರ್ಥಿಸಿದರು. ಪ್ರಗತಿ ಸಂಪನ್ಮೂಲ ಕೇಂದ್ರದ ಕೋಅರ್ಡಿನೇಟರ್ ಉಮಾ ನಾಯ್ಕ ಸ್ವಾಗತಿಸಿದರು. ಪದ್ಮಾ ಎಸ್. ಆಚಾರಿ ಹಾಗೂ ಜಾನಕಿ ನಾಯ್ಕ ವರದಿ ಓದಿದರು. ಪದ್ಮಾ ಆಚಾರ್ಯ ನಿರೂಪಿಸಿದರು. ವಿನೋದಾ ಆಚಾರ್ಯ ವಂದಿಸಿದರು.