ಬೈಲೂರು ಅನಿರುದ್ದ ಬಾಪು ಸ.ಹಿ.ಪ್ರಾ.ಶಾಲೆಯಲ್ಲಿ ಉಚಿತ ನೋಟ್ ಬುಕ್ ವಿತರಣೆ
ಭಟ್ಕಳ,ಜು.16: ಸದ್ಗುರು ಅನಿರುದ್ಧ ಬಾಪು ಉಪಾಸನಾ ಟ್ರಸ್ಟ್ ಮುಂಬೈ ಇದರ ವತಿಯಿಂದ ತಾಲೂಕಿನ ಬೈಲೂರಿನ ಶ್ರೀ ಅನಿರುದ್ಧ ಬಾಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೈಲೂರು ಗ್ರಾಮದ ಎಲ್ಲಾ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸುವ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯೆ ಸಿಂಧು ಭಾಸ್ಕರ ನಾಯ್ಕ ಅವರು ಈ ಭಾಗದಲ್ಲಿ ಉಚಿತವಾಗಿ ನೋಟ್ ಬುಕ್ ವಿತರಿಸುತ್ತಿರುವ ಟ್ರಸ್ಟ್ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಮಕ್ಕಳಿಗೂ ಕೂಡಾ ನೋಟ್ ಬುಕ್ ನೀಡುವಂತಾಗಲಿ. ವಿದ್ಯಾರ್ಥಿಗಳೂ ಕೂಡಾ ಉನ್ನತ ವ್ಯಾಸಾಂಗವನ್ನು ಮಾಡಿ ತಾವು ಕಲಿತ ಶಾಲೆಯನ್ನು ತಿರುಗಿ ನೋಡುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ನಾಯ್ಕ ವಿದ್ಯಾರ್ಥಿಗಳು ಇಂತಹ ಸೌಲಭ್ಯಗಳ ಸದುಪಯೋಗವನ್ನು ಪಡೆದು ಉತ್ತಮ ಶಿಕ್ಷಣವನ್ನು ಹೊಂದಿ, ಉತ್ತಮ ನಾಗರೀಕರಾಗುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿ ಯಲ್ಲಮ್ಮ ಮಾತನಾಡಿ ಹಿಂದೆ ಕಲಿಯುವ ಮನಸ್ಸಿದ್ದರೂ ಕೂಡಾ ಕಲಿಯಲು ಆರ್ಥಿಕ ತೊಂದರೆ ಇತ್ತು. ಆದರೆ ಇಂದು ಸರಕಾರವೇ ಶಿಕ್ಷಣಕ್ಕೆ ಸಕಲ ಸೌಲತ್ತುಗಳನ್ನು ನೀಡುತ್ತಿದೆ. ಮೇಲಾಗಿ ಇಂತಹ ದಾನಿಗಳೂ ಕೂಡಾ ಶಿಕ್ಷಣಕ್ಕೆ ಸಹಾಯ ಮಾಡುವುದರಿಂದ ಉನ್ನತ ಶಿಕ್ಷಣವನ್ನು ಪಡೆಯಲೂ ಇಂದು ಯಾವುದೇ ಅಡ್ಡಿ ಇಲ್ಲ ಎಂದರು.
ಜಿಲ್ಲಾ ಶಿಕ್ಷಕರ ಸಂಘದ ಖಜಾಂಚಿ ಎಂ.ಡಿ.ರಫೀಕ್ ಸ್ವಾಗತಿಸಿದರು. ಊರಿನ ಪ್ರಮುಖರಾದ ಕೇಶವ ಬಲ್ಸೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಹೇಶ ತೆರ್ನಮಕ್ಕಿ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ನೇತ್ರೆಕರ್ ವಂದಿಸಿದರು.