ಪರಿಸರ ಸ್ನೇಹಿ ಅರಿವಿನಿಂದ ಸ್ವಚ್ಛ ಭಾರತ ಅನುಷ್ಠಾನ: ದಿನಕರ ಬಾಬು
ಉಡುಪಿ, ಜು.16: ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಿ ಸ್ವಚ್ಚ ಭಾರತದ ಕನಸು ನನಸಾಗಬೇಕಾದರೆ ಎಲ್ಲಾ ಯುವಕ ಮತ್ತು ಯುವತಿ ಮಂಡಲದವರ ಸಹಕಾರ ಅತ್ಯಗತ್ಯ. ಊರಿನ ಅಭಿವೃದ್ದಿಗೆ ಯುವಕ ಮಂಡಲದವರು ಯಾವ ರೀತಿ ಪ್ರಯತ್ನಿಸುತ್ತಾರೋ ಅದೇ ರೀತಿ ಇಡೀ ಜಿಲ್ಲೆಯ ಸ್ವಚ್ವತೆಗೆ ಗಮನಕೊಟ್ಟು ಉಡುಪಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸಬೇಕೆಂದು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಮಣಿಪಾಲದಲ್ಲಿರುವ ಉಡುಪಿ ಜಿಪಂನ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾದ ಜಿಪಂ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಜಿಪಂನಲ್ಲಿ ವ್ಯವಸ್ಥೆಯನ್ನು ಈಗಾಗಲೇ ಅಳವಡಿಸಲಾಗಿದ್ದು, ತ್ಯಾಜ್ಯ ಉತ್ಪಾದನೆ ಕಡಿಮೆ ಮಾಡುವ ಉದ್ದೇಶದಿಂದ ವಾಟರ್ ಬಾಟಲ್, ಪೇಪರ್ ಕಪ್ಸ್, ಪ್ಲೇಟ್ಸ್ಗಳನ್ನೆಲ್ಲ ನಿಷೇಧಿಸಲಾಗಿದೆ. ಕಸ ಉತ್ಪಾದನೆ ಮತ್ತು ನಿರ್ವಹಣೆಗೆ ನಮ್ಮ ಆಲೋಚನಾ ಶೈಲಿಯನ್ನು ಬದಲಿಸಿ ಪರಿಸರ ಸ್ನೇಹಿ ಹೊಣೆ ಅರಿತರೆ ಸ್ವಚ್ಛ ಭಾರತ ಅನುಷ್ಠಾನ ಸಾಧ್ಯ ಎಂದರು. ಮರು ಬಳಕೆ ಮಾಡುವ ವಸ್ತುಗಳನ್ನೇ ನೀರು ಕುಡಿಯಲು, ಉಪಹಾರ ವಿತರಣೆಯಲ್ಲಿ ಅಳವಡಿಸಲಾಗಿದೆ. ಸ್ವಚ್ಛತೆ, ಕಸ ವಿಂಗಡಣೆ, ನಿರ್ವಹಣೆ ಬಗ್ಗೆ ಉಡುಪಿ ಜಿಲ್ಲೆಯಿಂದ ಉತ್ತಮ ಮಾದರಿಗಳನ್ನು ನೀಡಲಾಗಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಇಂದಿನ ಕಾರ್ಯಾಗಾರ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿಪಂ ಮುಖ್ಯ ಯೋಜನಾಧಿಕಾರಿ ಎ.ಶ್ರೀನಿವಾಸ ರಾವ್, ಯುವ ಸಬಲೀಕರಣ ಮತ್ತು ಕ್ರೀಡಾ ಸೇವಾ ಇಲಾಖಾ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.