ಜು.24ರಿಂದ ಮಂಗಳೂರಿನಿಂದ ಹಜ್ ವಿಮಾನ ಯಾನ ಆರಂಭ

Update: 2017-07-19 11:21 GMT

ಮಂಗಳೂರು, ಜು.19: ಕರ್ನಾಟಕದಿಂದ ಪವಿತ್ರ ಹಜ್ ಯಾತ್ರೆಗೆ ಪ್ರಸಕ್ತ ಸಾಲಿನಲ್ಲಿ ತೆರಳುವವರ ಪ್ರಥಮ ತಂಡವು ಜು. 24ರಂದು ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡಲಿದೆ ಎಂದು ರಾಜ್ಯ ಹಜ್ ಸಮಿತಿಯ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಅಂದು ಮಧ್ಯಾಹ್ನ 1.30ಕ್ಕೆ ಮಂಗಳೂರು ಹಳೆ ವಿಮಾನ ನಿಲ್ದಾಣದಲ್ಲಿ ಯಾತ್ರಾ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಸಂಜೆ 4.15ಕ್ಕೆ ಮೊದಲ ವಿಮಾನ ತೆರಳಲಿದ್ದು, ಅಂದು ಬೆಳಗ್ಗೆ 11 ಗಂಟೆಗೆ ರಾಜ್ಯ ಹಜ್ ಸಮಿತಿ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು.

ದ.ಕ. ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಪ್ರಾರ್ಥನೆ ನೆರವೇರಿಸಲಿದ್ದು, ಉಡುಪಿ, ಚಿಕ್ಕಮಗಳೂರು, ಹಾಸನ ಸಂಯುಕ್ತ ಜಿಲ್ಲಾ ಖಾಝಿ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಆಶೀರ್ವಚನ ನೀಡಲಿದ್ದಾರೆ.ರಾಜ್ಯ ಹಜ್ ಸಚಿವ ಹಾಗೂ ಹಜ್ ಸಮಿತಿ ಅಧ್ಯಕ್ಷರಾದ ಆರ್. ರೋಶನ್ ಬೇಗ್ ಉದ್ಘಾಟನೆ ನೆರೇರಿಸಲಿದ್ದಾರೆ.

ಸಚಿವರಾದ ಬಿ. ರಮಾನಾಥ ರೈ, ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ, ಶಾಸಕ ಮೊಯ್ದಿನ್ ಬಾವಾ, ಅಭಯಚಂದ್ರ ಜೈನ್, ಜೆ.ಆರ್. ಲೋಬೋ, ಯೆನೆಪೋಯ ವಿವಿ ಕುಲಾಧಿಪತಿ ವೈ. ಅಬ್ದುಲ್ಲಾ ಕುಂಞಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.

ಕರ್ನಾಟಕದ ಆರು ಸಾವಿರ ಯಾತ್ರಿಕರು ಬೆಂಗಳೂರು, ಮಂಗಳೂರು, ಗೋವಾ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಿಂದ ತೆರಳಲಿದ್ದಾರೆ.

ಈ ಪೈಕಿ ದ.ಕ., ಉಡುಪಿ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಸೇರಿದ 780 ಯಾತ್ರಿಕರು ಮಂಗಳೂರಿನಿಂದ ತೆರಳಲಿದ್ದಾರೆ. ಜು. 24ರಿಂದ 26ರವರೆಗೆ ಐದು ವಿಮಾನಗಳ ಮೂಲಕ ಯಾತ್ರಿಕರು ಸೌದಿಯ ಜಿದ್ದಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 37ರಿಂದ 40 ದಿನಗಳ ಕಾಲ ಯಾತ್ರಿಕರ ಮಕ್ಕಾ ಹಾಗೂ ಮದೀನಗಳಲ್ಲಿ ತಂಗಲಿರುವರು ಎಂದು ಅವರು ಹೇಳಿದರು.

2017ರಲ್ಲಿ ರಾಜ್ಯ ಹಜ್ ಸಮಿತಿ ವತಿಯಿಂದ 6 ಸಾವಿರ ಯಾತ್ರಿಕರು ಪ್ರಯಾಣಿಸಲಿದ್ದಾರೆ. ಈ ಬಾರಿ ಒಟ್ಟು 23,514 ಯಾತ್ರಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ರಾಜ್ಯಕ್ಕೆ ದೊರೆತ ಕೋಟಾ ಪ್ರಕಾರ 6000 ಮಂದಿಗಷ್ಟೇ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ನಿರಂತರ ಮೂರು ವರ್ಷ ಅಪೇಕ್ಷಿಸಿದವರು ಮತ್ತು 70 ವರ್ಷ ದಾಟಿದ ಅರ್ಜಿದಾರರನ್ನು ಹೊರತುಪಡಿಸಿ ಉಳಿದವರನ್ನು ಡ್ರಾ ಮೂಲಕ ಆರಿಸಲಾಗುವುದು. ಅರ್ಜಿ ಸಲ್ಲಿಕೆ, ಆಯ್ಕೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಆನ್‌ಲೈನ್ ಮೂಲಕವೇ ನಿರ್ವಹಿಸಲಾಗಿದೆ ಎಂದು ಅವರು ವಿವರ ನೀಡಿದರು.

ಭಾರತೀಯ ಹಜ್ ಸಮಿತಿಯ ಮೂಲಕ ದೇಶದಲ್ಲಿ ಈ ಬಾರಿ 4.48 ಲಕ್ಷ ಜನ ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಿದ್ದಾರೆ. ಸೌದಿ ಸರಕಾರದಿಂದ ಭಾರತಕ್ಕೆ ಪ್ರಸಕ್ತ ಸಾಲಿನಲ್ಲಿ 1.70 ಲಕ್ಷ ಮಂದಿಗೆ ಯ್ರಾಗೆ ಅವಕಾಶ ಲಭಿಸಿದೆ. ಈ ಪೈಕಿ 1.25 ಲಕ್ಷ ಜನ ಹಜ್ ಸಮಿತಿ ಮೂಲಕ ಹಾಗೂ 45,000 ಮಂದಿ ಖಾಸಗಿ ಪ್ರವಾಸಿ ಸಂಸ್ಥೆಗಳ ಮೂಲಕ ಪ್ರಯಾಣಿಸಲಿದ್ದಾರೆ ಎಂದು ಅಬೂಬಕರ್ ಸಿದ್ದೀಕ್ ವಿವರ ನೀಡಿದರು.

ಜು. 24ರಂದ ಸಂಜೆ 4.15, ಮಂಗಳವಾರ ಮತ್ತು ಬುಧವಾರ ಮಧ್ಯಾಹ್ನ 12.55 ಹಾಗೂ ಸಂಜೆ 4.15ಕ್ಕೆ ವಿಮಾನ ಹೊರಡಲಿದೆ. ಯಾತ್ರಿಕರು ತಮ್ಮ ಪ್ರಯಾಣ ದಿನದ 2 ದಿನ ಮುಂಚಿತವಾಗಿ ಮಂಗಳೂರು ಹಳೆ ವಿಮಾನ ನಿಲ್ದಾಣದಲ್ಲಿ ಲಗೇಜುಗಳು, ಕನ್ಫರ್ಮೇಶನ್ ಕಾರ್ಡ್ ಹಾಗೂ ಹಜ್ ಸಮಿತಿ ರಶೀದಿಗಳ ಸಮೇತ ಬಂದು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಹಾಜಿ ಯೆನೆಪೋಯ ಮುಹಮ್ಮದ್ ಕುಂಞಿ, ಕಾರ್ಯದರ್ಶಿ ಹಾಜಿ ಎಸ್.ಎಂ. ರಶೀದ್ ಹಾಜಿ, ಸದಸ್ಯ ಸಿ. ಮುಹಮ್ಮದ್ ಹಾಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News