ಜೀವನ ಶೈಲಿ ಬದಲಾವಣೆಯಿಂದ ತ್ಯಾಜ್ಯ ಸಮಸ್ಯೆ: ಜಿಲ್ಲಾಧಿಕಾರಿ
ಉಡುಪಿ, ಜು.20: ಬದಲಾದ ಜೀವನ ಶೈಲಿಯ ಪರಿಣಾಮ ಪ್ಲಾಸ್ಟಿಕ್ ಎಂಬ ಒಂದು ವಸ್ತುವಿನಿಂದಾಗಿ ಪರಿಸರದಲ್ಲಿ ಹಲವು ಸಮಸ್ಯೆಗಳು ಕಂಡು ಬರುತ್ತಿವೆ. ಪ್ಲಾಸ್ಟಿಕ್ ಇಲ್ಲದ ಕಾಲದಲ್ಲಿ ತ್ಯಾಜ್ಯ ನಿರ್ವಹಣೆಯ ಸಮಸ್ಯೆಯೇ ಇರಲಿಲ್ಲ. ಆದರೆ ಈಗ ಇದುವೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಉಡುಪಿ ರೋಟರಿ ಜಿಲ್ಲೆ, ವಲಯ 4 ಮತ್ತು ನಿಟ್ಟೂರು ಪ್ರೌಢಶಾಲೆ ಇಂಟರ್ಯಾರ್ಟ್ ಕ್ಲಬ್ಗಳ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಗುರುವಾರ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ‘ತ್ಯಾಜ್ಯ ನಿರ್ವಹಣೆ ಮತ್ತು ಹಸಿರು ಶಿಷ್ಟಾಚಾರ’ ವಿದ್ಯಾರ್ಥಿ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪ್ಲಾಸ್ಟಿಕ್ ಕುರಿತು ಜನಜಾಗೃತಿ ಮೂಡಿಸುವ ಕಾರ್ಯವನ್ನು ಜಿಲ್ಲಾಡಳಿತ ದಿಂದ ನಡೆಸಲಾಗುತ್ತಿದ್ದು, ಅದಕ್ಕಾಗಿ ಹಸಿರು ಶಿಷ್ಟಾಚಾರವನ್ನು ರೂಪಿಸಲಾಗು ತ್ತಿದೆ. ಕಸ ಉತ್ಪತ್ತಿಯನ್ನು ಕಡಿಮೆ ಮಾಡುವುದು ನಮ್ಮ ಮುಖ್ಯ ಗುರಿಯಾಗಿದೆ. ಇದರಿಂದ ಕಸ ಸಮಸ್ಯೆಯನ್ನ ಬಗೆಹರಿಸಲು ಸಾಧ್ಯ ಎಂದು ಅವರು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಜಿಪಂ ಯೋಜನಾಧಿಕಾರಿ ಶ್ರೀನಿವಾಸ ರಾವ್ ಮಾತನಾಡಿ, ಶುದ್ಧ ಕುಡಿಯುವ ನೀರು ಹಾಗೂ ತ್ಯಾಜ್ಯ ನಿರ್ವಹಣೆ ಜಿಲ್ಲೆಯ ಪ್ರಮುಖ ಎರಡು ಸಮಸ್ಯೆಗಳಾಗಿವೆ. ಜಿಲ್ಲಾಡಳಿತವು ವಾರದಲ್ಲಿ ಒಂದು ದಿನ ಅಂದರೆ ಗುರುವಾರ ತ್ಯಾಜ್ಯ ನಿರ್ವಹಣೆ ವಿಚಾರಕ್ಕೆ ಮೀಸಲಿಡುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಇಂಟರಾಕ್ಟ್ ಕ್ಲಬ್ನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ನಡೆಯಿತು. ಶಾಲಾ ವತಿಯಿಂದ ವಿದ್ಯಾರ್ಥಿಗಳಿಗೆ ನೀಡಲ್ಪಟ್ಟ ಬಾಚಣಿಗೆ ಮತ್ತು ಟವೆಲ್ಗಳನ್ನು ಹಸ್ತಾಂತರಿಸಲಾಯಿತು. ಮೂಳೆ ತಜ್ಞ ಡಾ. ಕೆ.ಸುರೇಶ್ ಶೆಣೈ, ರೋಟರಿ ಅಧ್ಯಕ್ಷ ರಾಮ ಚಂದ್ರ ಉಪಾಧ್ಯಾಯ, ಶಾಲಾ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್, ರೋಟರಾಕ್ಟ್ ನಿಕಟಪೂರ್ವ ಅಧ್ಯಕ್ಷೆ ಅರ್ಚನ ಉಪಸ್ಥಿತರಿದ್ದರು.
ರೋಟರಾಕ್ಟ್ ನೂತನ ಅಧ್ಯಕ್ಷ ಕಾರ್ತಿಕ್ ಶಾಸ್ತ್ರಿ ಸ್ವಾಗತಿಸಿದರು. ಕಾರ್ಯ ದರ್ಶಿ ನಿಶಿತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ಶಾಲೆಯ ಕುರಿತು ಸಾಕ್ಷಚಿತ್ರ
ಈ ಶಾಲೆಯಲ್ಲಿ ಪ್ಲಾಸ್ಟಿಕ್ ಬಾಟಲ್ನಲ್ಲಿ ನೀರು ತರುವುದನ್ನು ನಿಷೇಧಿಸ ಲಾಗಿದೆ. ಮಕ್ಕಳಿಗೆ ಶಾಲೆಯಲ್ಲಿಯೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡ ಲಾಗಿದೆ. ಅದೇ ರೀತಿ ಯಾವುದೇ ತರಗತಿ ಮಕ್ಕಳು ಕಸ ಎಸೆಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದನ್ನು ಮಕ್ಕಳು ಪಾಲಿಸಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಶಾಲೆಯ ಎದುರಿನ ಒಂದು ಕಿ.ಮೀ. ರಸ್ತೆಯನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಲಾಗಿದೆ. ಮನೆಯಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ಗಳನ್ನು ಮಕ್ಕಳು ಸಂಗ್ರಹಿಸಿ ಶಾಲೆಗೆ ತರುತ್ತಿದ್ದು, ಅದನ್ನು ಶಾಲೆಯ ಮೂಲಕ ನಗರಸಭೆಗೆ ನೀಡಲಾಗುತ್ತಿದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ಶಾಲೆಯ ಬಗ್ಗೆ ಸಾಕ್ಷಚಿತ್ರ ತಯಾರಿಸಿ ರಾಜ್ಯಕ್ಕೆ ಕಳುಹಿಸಲಾಗುವುದು. ಶಾಲೆಯನ್ನು ಮಾದರಿಯನ್ನಾಗಿ ತೆಗೆದು ಕೊಂಡು ಬೇರೆ ಶಾಲೆಯ ಮಕ್ಕಳನ್ನು ಇಲ್ಲಿಗೆ ಕರೆಸಿ ಅವರಿಗೆ ತ್ಯಾಜ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು ಎಂದರು.