ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸೂಚನೆ

Update: 2017-07-21 14:01 GMT

ಮಂಗಳೂರು, ಜು.21: ಸರಕಾರದ ವಿವಿಧ ವಸತಿ ಯೋಜನೆಯಡಿ ಪ್ರತಿ ತಿಂಗಳು ಆಯಾ ಗ್ರಾಪಂ ವ್ಯಾಪ್ತಿಯಲ್ಲಿ 5 ಮನೆ ಹಾಗೂ ನಗರ/ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ 10 ಮನೆ ನಿರ್ಮಾಣ ಕಾರ್ಯವನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮೌದ್ಗಿಲ್ ಸೂಚಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ನಡೆದ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.

  ಫಲಾನುಭವಿಗೆ ತ್ವರಿತವಾಗಿ ಮನೆ ನಿರ್ಮಿಸಿ ಕೊಡುವುದು ರಾಜ್ಯ ಸರಕಾರದ ಆದ್ಯತೆಯಾಗಿದೆ. ಇದರಲ್ಲಿ ವಿಳಂಬವನ್ನು ಸಹಿಸಲಾಗದು. ಗ್ರಾಪಂ ವ್ಯಾಪ್ತಿಯಲ್ಲಿ ಮಂಜೂರುಗೊಂಡಿರುವ ಮನೆಗಳ ನಿರ್ಮಾಣದಲ್ಲಿ ಗುರಿ ಸಾಧಿಸದಿದ್ದರೆ, ಆಯಾ ಜಿಪಂ ಸಿಇಒ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮನೀಶ್ ಮೌದ್ಗಿಲ್ ಎಚ್ಚರಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣದಲ್ಲಿ ಆಯಾ ತಾಪಂ ಇಒ ಗಮನಹರಿಸಿ ಆಗಾಗ ಪ್ರಗತಿ ಪರಿಶೀಲಿಸಬೇಕು. ತಾಪಂ ಇಒ ಪ್ರತೀ ತಿಂಗಳು 100 ಮನೆಗಳ ಫೋಟೋಗಳನ್ನು ಅಪ್‌ಲೋಡ್ ಮಾಡಿ ಕಳುಹಿಸಬೇಕು. ಇದರಲ್ಲಿ ವಿಫಲವಾದರೆ ಅಂತಹ ಇಒಗಳ ಮೇಲೆ ಜಿಪಂ ಸಿಇಒ ಶಿಸ್ತುಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಪಂ ಸಿಇಒ ವಿರುದ್ಧವೇ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮನೀಶ್ ಮೌದ್ಗಿಲ್ ತಿಳಿಸಿದರು.

ಜಿಲ್ಲೆಯ ಕೆಲವು ಗ್ರಾಪಂಗಳಲ್ಲಿ ವಸತಿ ಯೋಜನೆಯ ಪ್ರಗತಿ ತೀವ್ರ ಕಳಪೆಯಾಗಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು, ಜಿಪಂ ಸಿಇಒ ಪ್ರತಿಯೊಂದು ಮನೆಯ ಪ್ರಗತಿ ಮೇಲೆ ನಿಗಾ ಇಡಬೇಕು. ಮನೆ ನಿರ್ಮಾಣದಲ್ಲಿ ನಿರ್ಲಕ್ಷ್ಯ ವಹಿಸುವ ಗ್ರಾಪಂ ಪಿಡಿಒ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಲು ಮನೀಶ್ ಮೌದ್ಗಿಲ್ ತಾಕೀತು ಮಾಡಿದರು.

ವಸತಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ದೊರಕಿದ 90 ದಿನದೊಳಗೆ ಪಂಚಾಂಗ ಹಾಕಿ ಮನೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಅಂತಹ ಮನೆಗಳ ಮಂಜೂರಾತಿ ರದ್ದುಗೊಳಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಆರಂಭಿಸದ ಕನಿಷ್ಠ 3 ಮನೆಗಳ ಮಂಜೂರಾತಿ ಪ್ರತೀ ತಿಂಗಳು ರದ್ದುಗೊಳಿಸಬೇಕು ಎಂದು ಸೂಚಿಸಿದರು.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತೀ ತಿಂಗಳು 10 ಮನೆಗಳನ್ನು ಪೂರ್ಣಗೊಳಿಸಬೇಕು. ಆಯಾ ಮುಖ್ಯಾಧಿಕಾರಿಗಳು 50 ಮನೆಗಳ ಫೋಟೋಗಳನ್ನು ನಿಗಮದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು ಎಂದು ತಿಳಿಸಿದರಲ್ಲದೆ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಫಲಾನುಭವಿಗಳಿಗೆ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಬೇಡಿಕೆಗೆ ತಕ್ಕಂತೆ ಮಂಜೂರಾತಿ ನೀಡಲು ಸೂಚಿಸಿದರು.

ಜಿಪಂ ಸಿಇಒ ಡಾ.ಎಂ.ಆರ್. ರವಿ, ಅಪರ ಜಿಲ್ಲಾಧಿಕಾರಿ ಕುಮಾರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಜಿಪಂ ಯೋಜನಾ ನಿರ್ದೇಶಕ ಲೋಕೇಶ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News