ಸಂಸದೆ ವಿರುದ್ಧ ಕ್ರಮಕ್ಕೆ ಆಗ್ರಹ
ಮಂಗಳೂರು, ಜು.21: ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವರಿಗೆ ಸಲ್ಲಿಸಿದ ಪತ್ರದಲ್ಲಿ ದ.ಕ.ಜಿಲ್ಲೆಯಲ್ಲಿ ಸಾವಿಗೀಡಾದವರ 23 ಮಂದಿಯ ಪಟ್ಟಿಯು ತಪ್ಪು ಮಾಹಿತಿಯಿಂದ ಕೂಡಿದೆ. ಜವಬ್ದಾರಿಯುತ ಸ್ಥಾನದಲ್ಲಿರುವ ಸಂಸದೆ ಈ ರೀತಿಯ ತಪ್ಪುಮಾಹಿತಿಯ ಪಟ್ಟಿಯನ್ನು ಕೇಂದ್ರಕ್ಕೆ ಸಲ್ಲಿಸಿ ಲೋಪ ಎಸಗಿರುವ ಕಾರಣ ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಸಿ.ವಿನಯರಾಜ್ ಆಗ್ರಹಿಸಿದ್ದಾರೆ.
ಹಿಂದೂ ಸಮಾಜದ ಯುವಕರ ಮೇಲೆ ಅಷ್ಟೊಂದು ಕಾಳಜಿಯನ್ನು ತೋರ್ಪಡಿಸುವ ಶೋಭಾ ಕರಂದ್ಲಾಜೆ ಮಾಹಿತಿ ಹಕ್ಕು ಕಾರ್ಯಕರ್ತ ನಾಯಕ್ ಬಾಳಿಗ, ಬಂಟ್ವಾಳದ ಹರೀಶ್ ಪೂಜಾರಿ ಮತ್ತು ಉಡುಪಿಯ ಪ್ರವೀಣ್ ಪೂಜಾರಿಯ ಹೆಸರನ್ನು ಈ ಪಟ್ಟಿಯಲ್ಲಿ ಉಲ್ಲೇಖ ಮಾಡದಿರುವುದು ಅವರ ಬಣ್ಣ ಬಯಲಾಗಿದೆ. ಶೋಭಾ ಕರಂದ್ಲಾಜೆ ಈ ವಿಷಯದಲ್ಲಿ ಅಪ್ರಭುದ್ಧರಾಗಿ ವರ್ತಿಸಿದ್ದಾರೆ, ಇನ್ನಾದರೂ ಸಂಸದೆ ಸ್ಥಾನದ ಜವಾಬ್ದಾರಿಯನ್ನು ಅರಿತುಕೊಂಡು ವರ್ತಿಸುವುದು ಸೂಕ್ತ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.