ಯೆನೆಪೋಯ ದಂತ ವಿಜ್ಞಾನ ಕಾಲೇಜಿನ ಬೆಳ್ಳಿ ಹಬ್ಬದ ಸಮಾರಂಭ ‘ಯೆನ್ ಸ್ಟೆಲ್ಲರ್’
ಮಂಗಳೂರು, ಜು.24: ಯೆನೆಪೋಯ ವಿಶ್ವವಿದ್ಯಾನಿಲಯ ಕಳೆದ 25 ವರ್ಷಗಳ ಅವಧಿಯಲ್ಲಿ ಮಹತ್ವದ ಸಾಧನೆ ಮಾಡಿದ ಸಂಸ್ಥೆಯಾಗಿದೆ ಎಂದು ಎಂಫಾರ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಪಿ.ಮುಹಮ್ಮದ್ ಅಲಿ ತಿಳಿಸಿದ್ದಾರೆ.
ದೇರಳ ಕಟ್ಟೆ ಯೆನೆಪೋಯ ವಿಶ್ವವಿದ್ಯಾನಿಲಯದ ಆವರಣದ ಯೆಂಡುರೆನ್ಸ್ ರೆನ್ ನಲ್ಲಿ ಹಮ್ಮಿಕೊಂಡ ಯೆನೆಪೋಯ ದಂತ ವಿಜ್ಞಾನ ಕಾಲೇಜಿನ ಬೆಳ್ಳಿ ಹಬ್ಬದ ಸಮಾರಂಭ ‘ಯೆನ್ ಸ್ಟೆಲ್ಲರ್ ’ನ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಯೆನೆಪೋಯ ದಂತ ವಿಜ್ಞಾನ ಕಾಲೇಜು 1992ರಲ್ಲಿ ಆರಂಭಗೊಂಡು 25ವರ್ಷಕ್ಕೆ ಕಾಲಿಟ್ಟಿದೆ. 1995ರಲ್ಲಿ ಎ ಗ್ರೇಡ್ನೊಂದಿಗೆ ನ್ಯಾಕ್, ಐಎಸ್ಒ ಮಾನ್ಯತೆ ಪಡೆದಿದೆ. 2009ರಲ್ಲಿ ಯುಜಿಸಿಯಿಂದ ಯೆನೆಪೋಯ ವಿಶ್ವ ವಿದ್ಯಾನಿಲಯ ಡೀಮ್ಡ್ ವಿ.ವಿಯ ಸ್ಥಾನಮಾನ ಪಡೆದಿದೆ. ಕಳೆದ 25 ವರ್ಷಗಳಲ್ಲಿ ಯೆನೆಪೋಯ ವಿಶ್ವ ವಿದ್ಯಾನಿಲಯ ಈ ಮಟ್ಟದ ಸಾಧನೆ ಮಾಡಿರುವುದು ಮಹತ್ವದ ಮೈಲುಗಲ್ಲಾಗಿದೆ ಯೆನೆಪೋಯ ಶಿಕ್ಷಣ ಸಂಸ್ಥೆ ಆರಂಭಿಸಿದ ಯೆನೆಪೋಯ ಮೊಯ್ದಿನ್ ಕುಂಞ ಯವರ ದೂರದೃಷ್ಟಿ, ಯೆನೆಪೋಯ ವಿಶ್ವ ವಿದ್ಯಾನಿಲಯದ ಕುಲಪತಿ ಯೆನೆಪೋಯ ಅಬ್ದುಲ್ಲಾ ಕುಂಞಯವರ ಪರಿಶ್ರಮದ ಮೂಲಕ ಸಮುದಾಯ ಆರ್ಥಿಕವಾಗಿ ಹಿಂದುಳಿದವರಿಗೂ ಉನ್ನತ ಮಟ್ಟದ ವೈದ್ಯಕೀಯ ಶಿಕ್ಷಣದ ಸೌಲಭ್ಯ ನೀಡುವುದರೊಂದಿಗೆ ಮಹತ್ವದ ಸಾಮಾಜಿಕ ಹೊಣೆಗಾರಿಕೆಯನ್ನು ಸಂಸ್ಥೆ ನಿರ್ವಹಿಸುತ್ತಿದೆ ಎಂದು ಡಾ.ಪಿ.ಮುಹಮ್ಮದ್ ಅಲಿ ಸಂಸ್ಥೆಯ ಸಾಧನೆಯ ಬಗ್ಗೆ ಶ್ಲಾಘಿಸಿದರು.
ಬದಲಾಗುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿ ಆಧುನಿಕ ಚಿಕಿತ್ಸಾ ಸಲಕರಣೆಗಳೊಂದಿಗೆ ನೂತನ ಚಿಕಿತ್ಸಾ ವಿಧಾನಗಳ ಅಳವಡಿಕೆಯ ಅಗತ್ಯಹೆಚ್ಚಿದೆ ಎಂದು ಮುಂಬೈ ಯ ಟಾಟಾ ಸ್ಮಾರಕ ಆಸ್ಪತ್ರೆಯ ತಲೆ ಮತ್ತು ಕುತ್ತಿಗೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಅನಿಲ್ ಕೆ.ಡಿ ಕ್ರೂಝ್ ತಿಳಿಸಿದ್ದಾರೆ.
ಆಧುನಿಕ ವೈದ್ಯಕೀಯ ಸೌಲಭ್ಯಗಳು ಹೆಚ್ಚಿದಂತೆ ವೈದ್ಯಕೀಯ ಚಿಕಿತ್ಸೆಯಲ್ಲೂ ಸುಧಾರಣೆ ಸಾಧ್ಯ. 20ವರ್ಷಗಳ ಹಿಂದೆ ಗಂಭೀರ ಕಾಯಿಲೆಯಾಗಿದ್ದ ಕ್ಯಾನ್ಸರ್ ಕಾಯಿಲೆಯನ್ನು ಇತ್ತೀಚಿನ ವರ್ಷಗಳಲ್ಲಿ ಗುಣಪಡಿಸಬಹುದಾದ ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಯೆನೆಪೋಯ ದಂತ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ವಿಶ್ವ ವಿದ್ಯಾನಿಲಯ ಆಧುನಿಕ ತಾಂತ್ರಿಕ ಸೌಲಭ್ಯಗಳೊಂದಿಗೆ ಉತ್ಕೃಷ್ಟ ಶಿಕ್ಷಣ ನೀಡುವ ಸಂಸ್ಥೆಯಾಗಿ ಬೆಳೆದಿದೆ ಎಂದು ಡಾ. ಅನಿಲ್ ಕ್ರೂಝ್ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯೆನೆಪೋಯ ವಿ.ವಿ.ಗೆ ರಾಜ್ಯದಲ್ಲಿ ಮೂರನೆ ಸ್ಥಾನ: ದೇಶದಲ್ಲಿ 2022ರಲ್ಲಿ 50ಸ್ಥಾನ ಪಡೆಯುವ ಗುರಿ:- ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ವಿಶ್ವ ವಿದ್ಯಾನಿಲಯದ ಕುಲಪತಿ ಯೆನಪೋಯ ಅಬ್ದುಲ್ಲಾ ಕುಂಞ ಮಾತನಾಡುತ್ತಾ, ಯೆನೆಪೋಯ ವಿಶ್ವವಿದ್ಯಾನಿಲಯ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಆರಂಭಗೊಂಡ ಮೂರು ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ಮುಂದೆ 2022ರಲ್ಲಿ ದೇಶದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಪೈಕಿ 50 ಸ್ಥಾನವನ್ನು ಪಡೆಯುವ ಗುರಿ ಇದೆ. ಯೆನೆಪೋಯ ಆಸ್ಪತ್ರೆ ಕರಾವಳಿಯಲ್ಲಿ ಪ್ರಥಮ ಬಾರಿಗೆ ರೋಬೋಟೆಕ್ ತಂತ್ರಜ್ಞಾನದ ಮೂಲಕ ಶಸ್ತ್ರ ಚಿಕಿತ್ಸೆ ಸೌಲಭ್ಯ ಹೊಂದಿರುವ ಆಸ್ಪತ್ರೆಯಾಗಿದ್ದು ಈಗಾಗಲೇ 100ಕ್ಕೂ ಅಧಿಕ ಸರ್ಜರಿ ರೊಬೋಟೆಕ್ ಸರ್ಜರಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯೆನೆಪೋಯ ವಿಶ್ವ ವಿದ್ಯಾನಿಲಯದ ಕ್ಯಾಂಪಸನ್ನು ಇನ್ನಷ್ಟು ವಿಸ್ತರಿಸುವ ಗುರಿ ಹೊಂದಲಾಗಿದೆ. ದೇರಳಕಟ್ಟೆಯಿಂದ ಸುಮಾರು 5 ಕಿ.ಮೀಟರ್ ದೂರದ ಕಿನ್ಯಾದಲ್ಲಿ ಆಯುಷ್ ಆರೋಗ್ಯ ಸಂಕೀರ್ಣ ನಿರ್ಮಿಸುವ ಗುರಿ ಹೊಂದಲಾಗಿದೆ. ವಿಶ್ವ ದರ್ಜೆಯ ಅತ್ಯುತ್ತಮ ವಿಶ್ವ ವಿದ್ಯಾನಿಲಯವಾಗಿ ಬೆಳೆಸುವ ಗುರಿಹೊಂದಿದ್ದು ಈ ನಿಟ್ಟಿ ಕಳೆದ 25ವರ್ಷಗಳಲ್ಲಿ ಸಾಕಷ್ಟು ಅನುಭವ ಪಡೆದಿದೆ. ಸಂಸ್ಥೆಯಲ್ಲಿ ದುಡಿಯುತ್ತಿರುವ ಎಲ್ಲರ ಪ್ರಯತ್ನದಿಂದ ಈ ಗುರಿಯನ್ನು ತಲುಪಲು ಸಾಧ್ಯವಾಗಿದೆ ಎಂದು ಯೆನೆಪೋಯ ಅಬ್ದುಲ್ಲಾ ಕುಂಞ ತಿಳಿಸಿದರು.
ಕಾಲೇಜಿನಲ್ಲಿ ಅಧ್ಯಯನ ನಡೆಸಿದ ಪದವೀಧರರು, ಸ್ನಾತಕೋತ್ತರ ಪದವಿ ಪಡೆದವರು ಭಾರತ ಮತ್ತು ಜಗತ್ತಿನ ವಿವಿಧ ಭಾಗಗಳಲ್ಲಿ ದಂತ ವೈದ್ಯರಾಗಿ, ಪ್ರಜ್ಞಾವಂತರಾಗಿ ಕಾರ್ಯನಿರ್ವ ಹಿಸುತ್ತಿರುವುದು ಸಂಸ್ಥೆಗೆ ಹೆಮ್ಮೆಯನ್ನುಂಟು ಮಾಡಿದೆ.
ಸಮಾರಂಭದಲ್ಲಿ ಭಾರತೀಯ ದಂತ ವೈದ್ಯರ ಪರಿಷತ್ನ ಮಾಜಿ ಅಧ್ಯಕ್ಷ ,ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಡೀನ್ ಶ್ರೀಧರ ಶೆಟ್ಟಿ, ಡಾ.ಇಸ್ಲಾಮಿಕ್ ಆಕಾಡೆಮಿ ಆಫ್ ಎಜುಕೇಶನ್ ನ ಕಾರ್ಯದರ್ಶಿ ಡಾ.ಅಖ್ತರ್ ಹುಸೈನ್, ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಡಾ. ತೋಮಸ್ ಚಾಕೋ, ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಚ್.ಶ್ರೀಪತಿರಾವ್, ಯೆನೆಪೋಯ ದಂತ ವಿಜ್ಞಾನ ಕಾಲೇಜಿನ ಪ್ರೊಫೆಸರ್ ಡಾ.ಬಿ.ಆರ್.ಆರ್.ವರ್ಮಾ ಮೊದಲಾದವರನ್ನು ಯೆನೆಪೋಯ ಅಬ್ದುಲ್ಲಾ ಕುಂಞ ಹಾಗೂ ಡಾ.ಪಿ.ಮುಹಮ್ಮದ್ ಅಲಿ ಸನ್ಮಾನಿಸಿದರು.
ಸಮಾರಂಭದಲ್ಲಿ ಉಪ ಕುಲಪತಿ ಡಾ.ಎಂ.ವಿಜಯಕುಮಾರ್,ಡೀನ್ ಡಾ.ಬಿ.ಎಚ್.ಶ್ರೀಪತಿರಾವ್, ಕುಲಸಚಿವ ಶ್ರೀಕುಮಾರ್ ಮೆನನ್, ಇಸ್ಲಾಮಿ ಅಕಾಡಮಿ ಆಫ್ ಎಜುಕೇಶನ್ನ ಟ್ರಸ್ಟಿ ಡಾ.ಸಿ.ಪಿ.ಹಬೀಬ್ ರೆಹಮಾನ್, ಕೆ.ಖಾಲಿದ್ ಬಾವ, ಡಾ. ವೇದಪ್ರಕಾಶ್ ಮಿಶ್ರಾ, ಡಾ.ಶ್ಯಾಂ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಡಾ.ಹಸನ್ ಸರ್ಫರಾಝ್ ಬೆಳ್ಳಿ ಹಬ್ಬದ ಆಚರಣೆಯ ಬಗ್ಗೆ ವಿವರ ನೀಡಿದರು. ಡಾ.ಅಖ್ತರ್ ಹುಸೈನ್ ಸಂಸ್ಥೆ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಫ್ರಾನ್ಸಿಸ್ ಮಾರ್ಟಿನ್ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಕಡೆಗಳಿಂದ ಆಗಮಿಸಿದ ಕಾಲೇಜಿನ ಈ ಹಳೆ ವಿದ್ಯಾರ್ಥಿಗಳು ‘ಯೆನ್ಸ್ಟೆಲ್ಲರ್’ ಕಾರ್ಯಕ್ರಮದಲ್ಲಿ ಸಂವಾದ, ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.