ಲಿಂಗಾಯತರೂ ಹಿಂದುಗಳೇ, ಹೊರಹೋಗುವ ಪ್ರಯತ್ನ ಬೇಡ: ಪೇಜಾವರ ಶ್ರೀ
ಉಡುಪಿ, ಜು.24: ಬಸವಣ್ಣ ಹಿಂದುಗಳ ಆಗಮ, ವೇದ, ಪುರಾಣ ಶಾಸ್ತ್ರಗಳನ್ನು ಒಪ್ಪದಿದ್ದರೂ, ಶಿವನನ್ನು ಒಪ್ಪಿದ್ದಾರೆ. ಶಿವನನ್ನು ಒಪ್ಪಿದ ಎಲ್ಲರೂ ಹಿಂದುವೆನಿಸಿಕೊಳ್ಳುತ್ತಾರೆ. ಆ ಮೂಲಕ ಲಿಂಗಾಯತರು ಹಿಂದುಗಳೇ ಆಗಿದ್ದಾರೆ. ಆದುದರಿಂದ ಹಿಂದು ಧರ್ಮದಿಂದ ಹೊರಹೋಗುವ ಪ್ರಯತ್ನ ನಡೆಸಬಾರದು ಎಂದು ತಾವು ಅವರಲ್ಲಿ ಮನವಿ ಮಾಡುವುದಾಗಿ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಹೇಳಿದ್ದಾರೆ.
ಉಡುಪಿ ಶ್ರೀ ಕೃಷ್ಣಮಠದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹಿಂದು ಸಮಾಜದ ಬಲಿಷ್ಠ ಅಂಗವಾಗಿರುವ ವೀರಶೈವ ಮತ್ತು ಲಿಂಗಾಯಿತ ಸಮಾಜ ಹಿಂದೂ ಧರ್ಮದಿಂದ ಬೇರ್ಪಟ್ಟು ಪ್ರತ್ಯೇಕ ಸ್ವತಂತ್ರ ಧರ್ಮವಾಗಿ ರೂಪುಗೊಳ್ಳುವ ಪ್ರಸ್ತಾಪ ಬಂದಿರುವುದು ಅತ್ಯಂತ ಕಳವಳಕರ ವಿಷಯ ಎಂದವರು ಹೇಳಿದರು.
ಪರಶಿವ ಹಿಂದೂ ದೇವತೆಗಳಲ್ಲಿ ಅಗ್ರಗಣ್ಯ ಸ್ಥಾನ ಪಡೆದವನು. ಅಂತಹ ಶಿವನೇ ಪರದೈವವೆಂದು ಪ್ರತಿಪಾದಿಸುವ ಲಿಂಗಾಯಿತ ಧರ್ಮವು ಹಿಂದೂ ಧರ್ಮದಲ್ಲಿ ಸೇರುತ್ತದೆ ಎಂಬುದು ಸ್ಪಷ್ಟ. ಶಿವ ಪಾರಮ್ಯವನ್ನು ಸಾರುವ ಲಿಂಗಾಯಿತ ಧರ್ಮದ ಹಿಂದೂ ಧರ್ಮವಾಗದಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಲಿಂಗಾಯಿತ ಧರ್ಮ ವರ್ಣಾಶ್ರಮ ಹಾಗೂ ಜಾತಿ ವ್ಯವಸ್ಥೆಯನ್ನು ಒಪ್ಪದಿರಬಹುದು. ಆದರೆ ಅದು ಹಿಂದು ಧರ್ಮವಲ್ಲವೆಂದು ಹೇಳುವುದು ಸರಿಯಾಗಲಾರದು. ಜಾತಿ ವ್ಯವಸ್ಥೆಯನ್ನು ಒಪ್ಪದ ರಾಮಕೃಷ್ಣ ಆಶ್ರಮ, ಆರ್ಯ ಸಮಾಜ ಹಿಂದೂ ಧರ್ಮವೇ ಆಗಿಲ್ಲವೇ ಎಂದು ಪ್ರಶ್ನಿಸಿದ ಸ್ವಾಮೀಜಿ, ತಾನು ಪ್ರತ್ಯೇಕ ಸ್ವತಂತ್ರ ಧರ್ಮವೆಂದು ರಾಮಕೃಷ್ಣ ಆಶ್ರಮ ವಾದಿಸಲು ಪ್ರಯತ್ನಿಸಿದರೂ, ನ್ಯಾಯಾಲಯವು ಅದನ್ನು ಒಪ್ಪಲಿಲ್ಲ ಎಂಬುದನ್ನು ಎಲ್ಲರೂ ಗಮನಿಸಬೇಕು ಎಂದರು.
ಸ್ವಾಮಿ ನಾರಾಯಣ, ಚೈತನ್ಯ ಪಂಥ ಮಂತಾದ ವೈಷ್ಣವ ಪಂಥಗಳೂ, ತಮಿಳುನಾಡಿನ ಶೈವ ಪಂಥವೂ ಜಾತಿ ವ್ಯವಸ್ಥೆಯನ್ನು ಒಪ್ಪದಿದ್ದರೂ ಹಿಂದೂ ಧರ್ಮದ ಭಾಗವೇ ಆಗಿವೆ. ಆದುದರಿಂದ ಈ ಕಾರಣವನ್ನಿಟ್ಟುಕೊಂಡು ಲಿಂಗಾಯಿತ ಧರ್ಮವು ಹಿಂದೂ ಧರ್ಮವಲ್ಲ ಎಂಬುದು ಸರಿಯಲ್ಲ. ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಅತ್ಯಧಿಕ ಸಂಖ್ಯೆಯಲ್ಲಿ ಶಿವನೇ ಪರದೈವವೆಂದು ನಂಬುವ ಹಿಂದೂಗಳಿರುವಾಗ ಶಿವಭಕ್ತರಾದ ಲಿಂಗಾಯಿತರು ಮಾತ್ರ ಹಿಂದೂಗಳಲ್ಲವೆಂದು ಹೇಳುವುದು ಸರಿಯಲ್ಲ ಎಂದರು. ಆದುದರಿಂದ ಜಾತಿ ವ್ಯವಸ್ಥೆಯನ್ನು ಒಪ್ಪಲಿ, ಒಪ್ಪದಿರಲಿ ಶಿವಭಕ್ತರೆಲ್ಲ ಹಿಂದು ಗಳೆಂಬುದು ನಿಸ್ಸಂಶಯ. ಇಂದು ದೇಶದಲ್ಲಿ ಕ್ರೈಸ್ತರು, ಮುಸ್ಲಿಮರು ಸಂಘಟಿತರಾಗಿದ್ದಾರೆ. ಹಿಂದೂಗಳಾದ ನಾವು ಸಂಘಟಿತರಾಗಬೇಕೇ ಹೊರತು ವಿಘಟನೆಗೆ ಮುಂದಾಗಬಾರದು. ಅದನ್ನು ದುರ್ಬಲಗೊಳಿಸುವ ಪ್ರಯತ್ನ ಸರ್ವಥಾ ನಡೆಯಬಾರದು ಎಂದು ಪೇಜಾವರಶ್ರೀ ಹೇಳಿದರು.
ಲಿಂಗಾಯಿತ ಸಮಾಜ ಉಳಿದ ಹಿಂದೂ ಸಮಾಜವನ್ನು ಬಿಟ್ಟು ಪ್ರತ್ಯೇಕಗೊಳ್ಳಬಾರದು. ನಮ್ಮ ಜೊತೆಯಲ್ಲೇ ಇರಬೇಕು ಎಂದು ಸಮಗ್ರ ಲಿಂಗಾಯಿತ ಸಮಾಜವನ್ನೂ, ಮಠಾಧಿಪತಿಗಳನ್ನು ಕಳಕಳಿಯಿಂದ ಕೇಳಿಕೊಳ್ಳುತಿದ್ದೇನೆ ಎಂದರು. ಅಲ್ಲದೇ ವೀರಶೈವ ಸಮಾಜ ವಿಘಟನೆಗೊಳ್ಳಬಾರದು. ವೀರಶೈವರಲ್ಲಿ ಅನೇಕ ಸಂಪ್ರದಾಯ ಭೇದಗಳಿರಬಹುದು. ವೈಷ್ಣವರಲ್ಲಿ ತಂಗಲೆ, ಎಡಗೆಲೆ ಎಂಬ ಭೇದವಿದೆ. ಸ್ಮಾರ್ತರಲ್ಲಿ ಶೈವ, ಭಾಗವತ ಮುಂತಾದ ಸಂಪ್ರದಾಯ ಭೇದಗಳಿವೆ, ಮುಸಲ್ಮಾನರಲ್ಲೂ ಶಿಯಾ, ಸುನ್ನಿ ಎಂಬ ಭೇದಗಳಿವೆ. ಆದ್ದರಿಂದ ವೀರಶೈವ ಧರ್ಮದಲ್ಲಿ ಭೇದಗಳಿದ್ದರೂ, ಎಲ್ಲರೂ ವೀರಶೈವ ಅಥವಾ ಲಿಂಗಾಯಿತರ ಹೆಸರಿನಲ್ಲಿ ಒಂದಾಗಬೇಕು. ವಿಘಟನೆಗೊಳ್ಳಬಾರದು ಎಂಬುದು ನನ್ನ ಅಪೇಕ್ಷೆಯಾಗಿದೆ. ಹಿಂದೂ ಸಮಾಜದ ವಿಭಜನೆ ಯಾಗಬಾರದು, ವೀರಶೈವ ಸಮಾಜದ ವಿಘಟನೆಯಾಗಬಾರದು ಎಂಬುದು ನನ್ನ ಉದ್ದೇಶವಷ್ಟೇ ಹೊರತು ರಾಜಕೀಯ ಉದ್ದೇಶದಿಂದ ಈ ಹೇಳಿಕೆ ನೀಡುತ್ತಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
‘ಅಲ್ಪಸಂಖ್ಯಾತ’ರ ಲಾಭಕ್ಕಾಗಿ ಪ್ರತ್ಯೇಕತೆ ಬೇಡಿಕೆ
ಅಲ್ಪಸಂಖ್ಯಾತರಾಗಿ ಮಾನ್ಯತೆ ಪಡೆದರೆ ಸಿಗುವ ಸೌಲಭ್ಯದ ಲಾಭ ಪಡೆಯುವ ಉದ್ದೇಶದಿಂದ ಲಿಂಗಾಯಿತರು ತಾವು ಹಿಂದೂಗಳಲ್ಲ ಎಂದು ಹೇಳುತಿದ್ದಾರೆ ಎಂದು ಬಹಳಷ್ಟು ಮಂದಿ ತಮಗೆ ತಿಳಿಸಿದ್ದಾರೆ ಎಂದು ಪೇಜಾವರ ಶ್ರೀಗಳು ಹೇಳಿದರು.
ಹಿಂದೂ ದೇವತೆಗಳನ್ನು ಪೂಜಿಸುವವರೆಲ್ಲರೂ ಹಿಂದುಗಳೇ. ಶಿವನು ಹಿಂದುಗಳ ಅಗ್ರಗಣ್ಯ ದೇವರೇ. ಆದುದರಿಂದ ಲಿಂಗಾಯಿತರು, ವೀರಶೈವರು ಹಿಂದೂಗಳೇ ಆಗಿದ್ದಾರೆ. ಈ ಕುರಿತಂತೆ ಈಗ ನಡೆದಿರುವ ಹೋರಾಟ ಸರಿಯಲ್ಲ. ಹಿಂದು ಸಮಾಜದ ಒಳಗೆ ವಿಘಟನೆಯಾಗಬಾರದು. ಇದರಿಂದ ಸಮಗ್ರ ಹಿಂದು ಸಮಾಜಕ್ಕೆ ಅಪಾಯವಿದೆ. ಎಲ್ಲಾ ಸಮಾಜಗಳು ಒಂದಾಗಿ ಸಂಘಟಿತರಾಗಿ ಇರಬೇಕೆ ಹೊರತು ಬೇರೆಯಾಗುವ ಮಾತಲ್ಲ ಎಂದರು.
ಇತ್ತೀಚೆಗೆ ಉಡುಪಿಗೆ ಬಂದ ಸುತ್ತೂರು ಸ್ವಾಮೀಜಿಗಳೂ ಲಿಂಗಾಯಿತರು ಹಿಂದುಗಳು ಎಂಬುದನ್ನು ಒಪ್ಪುತ್ತಾರೆ ಎಂದರು. ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ನೀವೇ ಏಕೆ ಹಿಂದೂ ಧರ್ಮದಲ್ಲಿ ಜಾತಿ ಸಾಮರಸ್ಯಕ್ಕೆ ನಾಂದಿ ಹಾಡಬಾರದು ಎಂದು ಪ್ರಶ್ನಿಸಿದರೆ, ಧಾರ್ಮಿಕ ಕಟ್ಟುಪಾಡು, ನಿಯಮಗಳನ್ನು ಪಾಲಿಸಿಕೊಂಡು, ಜಾತಿ ಸಾಮರಸ್ಯಕ್ಕಾಗಿ ನಾನು ನನ್ನದೇ ಆದ ಮಾರ್ಗದಲ್ಲಿ ಸಾಗುತಿದ್ದೇನೆ. ಅದನ್ನು ಮುಂದುವರಿಸುತ್ತೇನೆ ಎಂದರು.