ಅನರ್ಹರಿಗೆ ಮನೆ ಮಂಜೂರಾತಿ: ಕ್ರಿಮಿನಲ್ ಮೊಕದ್ದಮೆ
ಮಂಗಳೂರು, ಜು.26: ರಾಜ್ಯ ಸರಕಾರದ ವಿವಿಧ ವಸತಿ ಯೋಜನೆಯ ಅರ್ಹ ವಸತಿ ರಹಿತರಿಗೆ ವಸತಿ ಸೌಲಭ್ಯ ನೀಡುವ ಕಾರ್ಯಕ್ರಮವನ್ನು ಗ್ರಾಪಂನಿಂದ ಅನುಷ್ಟಾನಗೊಳಿಸಲಾಗುತ್ತಿದೆ. ಸರಕಾರದ ವಸತಿ ಯೋಜನೆಯಡಿ ಪ್ರತಿಯೊಬ್ಬ ಫಲಾನುಭವಿ ಒಮ್ಮೆ ಮಾತ್ರ ಸೌಲಭ್ಯ ಪಡೆಯ ಬಹುದಾಗಿದೆ. ಒಂದು ವೇಳೆ ಒಂದಕ್ಕಿಂತ ಹೆಚ್ಚು ಬಾರಿ ವಸತಿ ಸೌಲಭ್ಯ ಪಡೆದಿದ್ದರೆ ಅಂತಹವರನ್ನು ಅನರ್ಹರೆಂದು ಪರಿಗಣಿಸಲಾಗುವುದು ಅಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ದ.ಕ.ಜಿಪಂ ಸಿಇಒ ಡಾ. ಎಂ.ಆರ್.ರವಿ ಎಚ್ಚರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೆಲವು ಅನರ್ಹರು ವಸತಿ ಯೋಜನೆಯಡಿ ವಸತಿ ಮಂಜೂರು ಮಾಡಿಸಿಕೊಂಡಿರುವುದು ಜಿಪಂನ ಗಮನಕ್ಕೆ ಬಂದಿದೆ. ಅಂತಹ ಅನರ್ಹರನ್ನು ಗುರುತಿಸುವ ಅಭಿಯಾನ ಜಿಪಂ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಹಾಗಾಗಿ ಅನರ್ಹ ಫಲಾನುಭವಿಗಳು ತುರ್ತಾಗಿ ಸಂಬಂಧಪಟ್ಟ ಗ್ರಾಪಂಗೆ ಮಾಹಿತಿ ನೀಡಬೇಕು. ಅಕ್ರಮ/ನಿಯಮಬಾಹಿರವಾಗಿ ಪಡೆದ ಅನುದಾನವನ್ನು ಹಿಂದಿರುಗಿಸಬೇಕು ಎಂದು ತಿಳಿಸಿದ್ದಾರೆ.
ಅನರ್ಹರನ್ನು ಆಯ್ಕೆ ಮಾಡಿದ ಆರೋಪದಡಿ ಸಂಬಂಧಪಟ್ಟ ಗ್ರಾಪಂ ಪಿಡಿಒ/ಕಾರ್ಯದರ್ಶಿಯ ವಿರುದ್ಧವೂ ಶಿಸ್ತು ಕ್ರಮ ಜರಗಿಸಲಾಗುವುದು. ಆದರೆ ಅರ್ಹ ಫಲಾನುಭವಿಗಳು ಯಾವುದೇ ಆತಂಕ ಪಡುವ ಆವಶ್ಯಕತೆ ಇಲ್ಲ. 2005-06 ರಿಂದ ವಸತಿ ಯೋಜನೆಗಳಡಿ ಆಯ್ಕೆಗೊಂಡಿರುವ ಎಲ್ಲಾ ಫಲಾನುವಿಭಗಳು 7 ದಿನಗಳೊಳಗೆ ಸಂಬಂಧಟ್ಟ ಗ್ರಾಪಂಗೆ ತಮ್ಮ ಆಧಾರ್ ಕಾರ್ಡ್ನ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಜಿಪಂ ಸಿಇಒ ತಿಳಿಸಿದ್ದಾರೆ.
10 ದಿನಗಳೊಳಗೆ ಮನೆ ನಿರ್ಮಾಣ ಆರಂಭಿಸಲು ಸೂಚನೆ: ಜಿಲ್ಲೆಯಲ್ಲಿ ವಸತಿ ಯೋಜನೆಗಳಡಿ 2015-16ರಿಂದ ಈವರೆಗೆ ಆಯ್ಕೆಗೊಂಡಿರುವ ಫಲಾನುಭವಿಗಳ ಪೈಕಿ ಬಂಟ್ವಾಳ ತಾಲೂಕಿನಲ್ಲಿ 1,025, ಬೆಳ್ತಂಗಡಿ ತಾಲೂಕಿನಲ್ಲಿ 1,431, ಮಂಗಳೂರು ತಾಲೂಕಿನಲ್ಲಿ 1,041, ಪುತ್ತೂರು ತಾಲೂಕಿನಲ್ಲಿ 612 ಹಾಗೂ ಸುಳ್ಯ ತಾಲೂಕಿನಲ್ಲಿ 351 ಹೀಗೆ ಒಟ್ಟು 4,460 ಫಲಾನುಭವಿಗಳು ಮನೆಯ ಕಾಮಗಾರಿಯನ್ನು ಈವರೆಗೆ ಪ್ರಾರಂಭಿಸಿಲ್ಲ. ಅಂತಹ ಫಲಾನುಭವಿಗಳು 10 ದಿನದೊಳಗೆ ಮನೆಯ ಕಾಮಗಾರಿಯನ್ನು ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಅಂತವರಿಗೆ ಮನೆಯ ಅವಶ್ಯಕತೆ ಇಲ್ಲವೆಂದು ಪರಿಗಣಿಸಿ ರದ್ದುಪಡಿಸಲಾಗುವುದು.
ರದ್ದುಪಡಿಸಲಾದ ಫಲಾನುಭವಿಗಳಿಗೆ ಮುಂದಿನ ಯಾವುದೇ ವಸತಿ ಯೋಜನೆಯಡಿ ಇನ್ನೊಮ್ಮೆ ಆಯ್ಕೆಗೆ ಅವಕಾಶ ನೀಡಲಾಗುವುದಿಲ್ಲ ಹಾಗೂ ರದ್ದುಪಡಿಸಲಾದ ಮನೆಗಳಿಗೆ ಬದಲಾಗಿ ಇತರ ಅರ್ಹ ವಸತಿ ರಹಿತರನ್ನು ಆಯ್ಕೆಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ತಿಳಿಸಿದ್ದಾರೆ.