ಭಾರತದ ವಿರುದ್ಧ ಪರಮಾಣು ಅಸ್ತ್ರ ಬಳಸಲು ಯೋಚಿಸಿದ್ದೆ
Update: 2017-07-27 16:21 GMT
ಇಸ್ಲಾಮಾಬಾದ್, ಜು. 27: 2001ರಲ್ಲಿ ಭಾರತೀಯ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ಉಂಟಾದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪರಮಾಣು ಅಸ್ತ್ರಗಳನ್ನು ಬಳಸಲು ತಾನು ಯೋಚಿಸಿದ್ದೆ, ಆದರೆ ಪ್ರತೀಕಾರದ ಭೀತಿಯಿಂದ ಅದರಿಂದ ಹಿಂದೆ ಸರಿದೆ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಝ್ ಮುಶರ್ರಫ್ ಹೇಳಿದ್ದಾರೆ ಎಂದು ಜಪಾನ್ ಪತ್ರಿಕೆ ‘ಮೈನಿಚಿ ಶಿಂಬುನ್’ ಹೇಳಿದೆ.
ಪರಮಾಣು ಶಸ್ತ್ರಗಳನ್ನು ಉಪಯೋಗಿಸಬಹುದೇ ಎಂಬ ವಿಷಯದಲ್ಲಿ ತಾನು ಹಲವು ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದೆ ಎಂದು ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ 73 ವರ್ಷದ ಮುಶರ್ರಫ್ ಹೇಳಿದ್ದಾರೆ.
2002ರಲ್ಲಿ ಉದ್ವಿಗ್ನತೆ ತಾರಕಕ್ಕೇರಿದ್ದಾಗ, ‘‘ಪರಮಾಣು ಹೊಸ್ತಿಲನ್ನು ದಾಟುವ ಅಪಾಯವಿತ್ತು ಎಂದು ಮುಶರ್ರಫ್ ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.
ಪರಮಾಣು ಅಸ್ತ್ರಗಳನ್ನು ಬಳಸುವ ಸಾಧ್ಯತೆಯನ್ನು ತಾನು ಅಲ್ಲಗಳೆಯುವುದಿಲ್ಲ ಎಂಬುದಾಗಿ ಆ ಸಮಯದಲ್ಲಿ ಮುಶರ್ರಫ್ ಸಾರ್ವಜನಿಕವಾಗಿಯೇ ಹೇಳಿದ್ದರು.