ತುಳು ಭಾಷೆ ಯಾವುದೇ ಜಾತಿಗೆ ಸೀಮಿತವಲ್ಲ: ಕಾವು ಹೇಮನಾಥ ಶೆಟ್ಟಿ

Update: 2017-07-28 14:06 GMT

ಪುತ್ತೂರು, ಜು. 28: ತುಳು ಭಾಷೆಯು ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಆದರೆ ಎಲ್ಲಾ ಭಾಷೆಗಳಿಗೆ ಇರುವಂತೆ ತುಳು ಭಾಷೆಗೆ ರಕ್ಷಾಣಾ ವೇದಿಕೆಗಳಿಲ್ಲ. ಇದರಿಂದಾಗಿ ಭಾಷಾ ಬೆಳವಣಿಗೆಗೆ ತೊಡಕಾಗಿದೆ. ಈ ನಿಟ್ಟಿನಲ್ಲಿ ತುಳು ಭಾಷೆ ಉಳಿಸಲು ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದು ಶ್ರೀ ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹೇಳಿದರು.

ಅವರು ಅಖಿಲ ಭಾರತ ತುಳು ಒಕ್ಕೂಟದ ವತಿಯಿಂದ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆ ಹಾಗೂ ಪುತ್ತೂರು ತುಳುಕೂಟದ ಸಹಕಾರ ದೊಂದಿಗೆ ಶುಕ್ರವಾರ ಪುತ್ತೂರಿನ ಬಂಟರ ಭವನದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡಲಾದ ‘ತುಳುವ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತುಳುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ತುಳು ಭಾಷೆಯನ್ನು ವಿದ್ಯಾರ್ಥಿ ದೆಶೆಯಿಂದಲೇ ಉಳಿಸುವಲ್ಲಿ ಮುನ್ನುಡಿ ಬರೆದಂತಾಗಿದೆ ಎಂದರು.

ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿ ತುಳು ಭಾಷೆ ಉಳಿಸುವಲ್ಲಿ ಹೆಚ್ಚಿನ ಪ್ರೋತ್ಸಾಹಗಳು ಎಲ್ಲೆಡೆ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಾಗಿ ತುಳು ಪಠ್ಯವನ್ನು ಎಸೆಸೆಲ್ಸಿ ಯಲ್ಲಿ ಅಳವಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ತುಳು ಭಾಷೆಯ ಮೇಲೆ ಸಾಧನೆ ಮಾಡಲು ಅವಕಾಶ ದೊಕಿದಂತಾಗಿದೆ. ಜೊತೆಗೆ ತುಳು ಭಾಷೆಯ ಉಳಿಕೆಗೂ ಸಾಧ್ಯವಾಗಿದೆ ಎಂದರು.

ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಬಾರಿ ಅವಿಭಜಿತ ಜಿಲ್ಲೆಯಲ್ಲಿ 34 ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ಉತ್ತೀರ್ಣರಾಗಿದ್ದು, ಅವರನ್ನು ಅಭಿನಂದಿಸಲಾಗಿತ್ತು. ಈ ಬಾರಿ 284 ಮಂದಿ ಎಸೆಸೆಲ್ಸಿ ಯಲ್ಲಿ ತುಳು ಭಾಷೆ ಆಯ್ಕೆ ಮಾಡಿದ್ದು, ಉತ್ತೀರ್ಣರಾಗಿದ್ದಾರೆ. ಈ ಪೈಕಿ ತುಳು ಪಠ್ಯದಲ್ಲಿ 100 ರಲ್ಲಿ 100 ಅಂಕ ಪಡೆದವರನ್ನು ತುಳುವ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಆರ್ಕಿಟೆಕ್ಟ್ ಮಿನಿಸ್ಟ್ರೀ ಆಫ್ ರೋಡ್ ಟ್ರಾನ್ಸ್‌ಪೋರ್ಟ್ & ಹೈವ್ಸೆ ಇಂಡಿಯಾದ ಡಾ.ಹರ್ಷಕುಮಾರ್ ರೈ ಮಾಡಾವು, ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ, ಉಪತಹಶೀಲ್ದಾರ್ ಶ್ರೀಧರ ಕೋಡಿಜಾಲ್, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಸಚ್ಚಿದಾನಂದ ಡಿ., ಪುತ್ತೂರು ತುಳು ಒಕ್ಕೂಟದ ಅಧ್ಯಕ್ಷ ವಿಜಯ ಕುಮಾರ್ ಭಂಡಾರಿ ಹೆಬ್ಬಾರಬೈಲು, ದಕ್ಷಿಣ ಭಾರತೀಯ ಸಾಂಸ್ಕೃತಿಕ ಸಂಘ ದೆಹಲಿಯ ಸಂಚಾಲಕ ನರೇಂದ್ರ ರೈ ಎಂ.ಬಿ., ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಪ್ರೇಮಲತಾ ರಾವ್ ಶುಭ ಹಾರೈಸಿದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮನೋಹರ ರೈ ಅಭಿನಂದನಾ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಜಿ.ಎಸ್. ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ಎಸೆಸೆಲ್ಸಿಯಲ್ಲಿ ತುಳು ಪಠ್ಯದಲ್ಲಿ 100 ಕ್ಕೆ 100 ಅಂಕ ಪಡೆದ ಕಾಣಿಯೂರು, ಪುತ್ತೂರು ಸೇರಿದಂತೆ ಇನ್ನಿತರ ಕಡೆಗಳ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮ ಸಂಚಾಲಕ , ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಸ್ವಾಗತಿಸಿದರು. ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಎಂ.ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ವಿಜಯಲಕ್ಷ್ಮೀ ಬಿ. ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News