ಆಹಾರ ಪದ್ಧತಿ ಮೇಲಿನ ನಿಷೇಧದಿಂದ ಆಂತರಿಕ ಅಭದ್ರತೆ: ಉಳೇಪಾಡಿ
ಮಂಗಳೂರು, ಜು. 28: ಜನರ ಆಹಾರ ಪದ್ಧತಿ ಮೇಲಿನ ನಿಷೇಧವು ದೇಶದ ಆಂತರಿಕ ಅಭದ್ರತೆ ಸೃಷ್ಟಿಯಾಗಲಿದೆ ಎಂದು ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ ಕಳವಳ ವ್ಯಕ್ತಪಡಿಸಿದ್ದಾರೆ.
ಅವರು ಪಿಯುಸಿಎಲ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ನಗರದ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ‘ಘೋಷಿತ ತುರ್ತು ಪರಿಸ್ಥಿತಿ ಮತ್ತು ಅಘೋಷಿತ ತುರ್ತು ಪರಿಸ್ಥಿತಿ’ ಎಂಬ ವಿಷಯದಲ್ಲಿ ಶುಕ್ರವಾರ ಏರ್ಪಡಿಸಲಾದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ದೇಶದ ನಾಗರಿಕರು ಯಾವುದನ್ನು ತಿನ್ನಬೇಕು ಅಥವಾ ತಿನ್ನಬಾರದು ಎಂಬುದು ಅವರವರಿಗೆ ಬಿಟ್ಟ ವಿಚಾರ. ಈ ವಿಷಯದಲ್ಲಿ ಪ್ರತಿ ನಾಗರಿಕ ಸ್ವತಂತ್ರನಾಗಿದ್ದಾನೆ. ಆದರೆ, ತಿನ್ನುವ ವಿಚಾರದಲ್ಲಿ ಒಬ್ಬ ಸ್ವಾತಂತ್ರವನ್ನು ಕಸಿದುಕೊಳ್ಳುವುದು ಅಸಾಂವಿಧಾನಿಕವಾಗಿದೆ. ಆಹಾರ ಪದ್ಧತಿ ವಿಚಾರದಲ್ಲಿ ದೇಶದಲ್ಲಿ ದಲಿತರು ಮತ್ತು ಮುಸ್ಲಿಮರ ಮೇಲೆ ಹಲ್ಲೆಗಳು ನಡೆಯುತ್ತಿವೆ. ದನದ ಮಾಂಸದ ವಿಚಾರದಲ್ಲಿ ಮನೆಗೆ ನುಗ್ಗಿ ಹೊಡೆದು ಹತ್ಯೆ ಮಾಡುವುದು, ದನ ಸಾಗಾಟದಾರರನ್ನು ಹೊಡೆದು ಸಾಯಿಸುವಂತಹ ಅಮಾನವೀಯ ಘಟನೆಗಳು ದೇಶದಲ್ಲಿ ಮರುಕಳಿಸುತ್ತಿವೆ. ಇಂತಹ ಘಟನೆಗಳು ದೇಶದ ಆಂತರಿಕ ಅಭ್ರತೆಗೆ ಕಾರಣವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಗೋವು ರಕ್ಷಣೆಯ ಗುತ್ತಿಗೆ ವಹಿಸಿಕೊಂಡವರಂತೆ ದೇಶದಲ್ಲಿ ಕೆಲವು ಹೊಸ ಸಂಘಟನೆಗಳು ಹುಟ್ಟಿಕೊಂಡಿವೆ. ಇಂತಹ ಸಂಘಟನೆಗಳು ಒಂದು ವರ್ಗ ಮತ್ತು ಒಂದು ಧರ್ಮದ ಜನರನ್ನು ಇನ್ನೊಂದು ಧರ್ಮದ ಜನರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿವೆ. ಈ ಮೂಲಕ ಜನರ ಭಾವನೆಗಳ ಮೇಲೆ ಆಟವಾಡುತ್ತಿವೆ. ಇದಕ್ಕೆ ಅಮಾಯಕ ಜೀವಗಳು ಬಲಿ ಪಡೆದುಕೊಳ್ಳುತ್ತಿವೆ. ಆಹಾರ ಪದ್ಧತಿ ಮೇಲೆ ದಾಳಿ ನಡೆಸಿ ತಿನ್ನುವ ಹಕ್ಕು ಕಸಿಯಲು ಯತ್ನಿಸುವುದು ಆಹಾರ ಮೇಲಿನ ಅಭದ್ರತೆಯಾದರೆ, ಇದೇ ವಿಚಾರವನ್ನು ಮುಂದಿಟ್ಟು ಅಮಾಯಕನ ಬಲಿ ಪಡೆಯುವುದು ಬದುಕಿನ ಅಭದ್ರತೆಯಾಗಿದೆ. ದೇಶದಲ್ಲಿ ಇತ್ತೀಚಿನ ವರದಿಯಾಗಿರುವ ಕೆಲವು ಘಟನೆಗಳಿಂದಾಗಿ ಸಮಾಜದಲ್ಲಿ ಭೀತಿಯ ವಾತಾವರಣ ಮೂಡಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ಅಂದು ಜನರು ಘೋಷಿತ ತುರ್ತು ಪರಿಸ್ಥಿತಿಯನ್ನು ಅನುಭವಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಆಡಳಿತಾವಧಿಯಲ್ಲಿ ಇಂದು ನಾವು ಅಘೋಷಿತ ತುರ್ತು ಪರಿಸ್ಥಿತಿಯನ್ನು ಅನುಭವಿಸುವಂತಾಗಿದೆ ಎಂದು ಉಳೇಪಾಡಿ ಹೇಳಿದರು.
ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ಮಾತನಾಡಿ, 1975ರಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ದೇಶದಲ್ಲಿ ಹೇರಲಾದ ತುರ್ತು ಪರಿಸ್ಥಿತಿ, 1992ರಲ್ಲಿ ಬಾಬರಿ ಮಸೀದಿ ಧ್ವಂಸ ಮತ್ತು ಈಗಿನ ಸರಕಾರದ ನೋಟು ನಿಷೇಧ ಇವು ದೇಶ ಕಂಡ ಕರಾಳ ದಿನಗಳಾಗಿವೆ. ನೋಟು ನಿಷೇಧದಿಂದಾಗಿ ಬಾಂಕು, ರೈಲು ನಿಲ್ದಾಣಗಳಲ್ಲಿ ಮಹಿಳೆಯವರು ಹೆರಿಗೆ ಆಗುವಂತಹ ದುಸ್ಥಿತಿಯನ್ನು ಕಂಡಿದ್ದೇವೆ. ನೋಟು ಅಮಾನ್ಯದಿಂದ ಕೆಲವರಂತೂ ಬ್ಯಾಂಕಿನಿಂದ ತಮ್ಮ ಹಣವನ್ನು ಪಡೆಯಲು ಸರದಿ ಸಾಲಲ್ಲಿ ನಿಂತರು ಕುಸಿದು ಬಿದ್ದರು. ಮತ್ತೆ ಕಲವರು ಸಾವನ್ನಪ್ಪಿದರು ಎಂದರು.
ಪಿಯುಸಿಎಲ್ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಕಬೀರ್ ಉಳ್ಳಾಲ ಮಾತನಾಡಿ, ಮೋದಿ ನೇತೃತ್ವದ ಕೇಂದ್ರ ಸರಕಾರದ ಆಡಳಿತದಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದಂತಾಗಿದೆ. ಜನರ ಬದುಕಿನ ಸ್ವಾತಂತ್ರವನ್ನು ಕಸಿಕೊಳ್ಳಲಾಗುತ್ತಿದೆ. ತಿನ್ನುವ, ಉಡುವ ಸ್ವಾತಂತ್ರವನ್ನು ಆಡಳಿತ ವರ್ಗ ನಿಯಂತ್ರಿಸುವಂತಿದೆ ಎಂದರು.
ಪಿಯುಸಿಎಲ್ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಬಿ.ಡೇಸಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಕೊನೆಗೆ ವಂದಿಸಿದರು.