ಕಳವು ಪ್ರಕರಣ: ಸೊತ್ತು ಸಹಿತ ಆರೋಪಿಗಳ ಸೆರೆ

Update: 2017-07-28 16:56 GMT

ಬೆಳ್ತಂಗಡಿ, ಜು. 28: ರಾಜ್ಯದ ನಾನಾ ಭಾಗಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಕಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತುಮುಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನ ಬಾನಸಂದ್ರ ಗ್ರಾಮದ ಬಾನಸಂದ್ರಪಾಳ್ಯ ನಿವಾಸಿ ಉಮೇಶ್ ಬಿ.ಎನ್.(30) ಹಾಗೂ ಬೆಂಗಳೂರಿನ ಕುಂಬಳಗೋಡುವಿನ ಗೇರುಪಾಳ್ಯ ನಿವಾಸಿ ವೆಂಕಟೇಶ್(38) ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಬೆಂಗಳೂರಿನ ಕೆಂಗೇರಿಯ ನವೀನ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದೇವಸ್ಥಾನ, ಚರ್ಚ್, ಬಸದಿ, ಶಾಲೆ, ಮನೆ ಕಳವು, ಬ್ಯಾಂಕ್ ದರೋಡೆ ಯತ್ನ, ಬೈಕ್‌ಗಳು ಸೇರಿದಂತೆ ತನಿಖೆಯ ವೇಳೆ 30ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಗುರುವಾರ ಸಂಜೆ ಚಾರ್ಮಾಡಿ ಪೊಲೀಸ್ ಚೆಕ್ ಪೋಷ್ಟು ಬಳಿ ಕಡೂರು-ಬಂಟ್ವಾಳ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಚಿಕ್ಕಮಗಳೂರು ಕಡೆ ಯಿಂದ ಎರಡು ದ್ವಿಚಕ್ರ ವಾಹನಗಳಲ್ಲಿ ಬರುತ್ತಿದ್ದ ಆರೋಪಿಗಳನ್ನು ತಪಾಸಣೆಗಾಗಿ ವಾಹನ ನಿಲ್ಲಿಸಲು ಸೂಚಿಸಿದಾಗ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದು, ಅವರನ್ನು ಬೆನ್ನೆಟಿದ್ದಾಗ ಉಮೇಶ ಹಾಗೂ ವೆಂಕಟೇಶ್ ನನ್ನು ಪೊಲೀಸರು ಬಂಧಿಸಿದ್ದು, ಧರ್ಮಸ್ಥಳ ಠಾಣೆಯಲ್ಲಿ 5 ಪ್ರಕರಣಗಳು, ವೇಣೂರು ಠಾಣೆಯಲ್ಲಿ 6 ಪ್ರಕರಣಗಳು, ಪುಂಜಾಲಕಟ್ಟೆಯಲ್ಲಿ 5 ಪ್ರಕರಣಗಳು, ಕಡಬ ಠಾಣೆಯಲ್ಲಿ 2 ಪ್ರಕರಣಗಳು, ಉಪ್ಪಿನಂಗಡಿ ಠಾಣೆಯಲ್ಲಿ 4 ಪ್ರಕರಣಗಳು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ 3 ಪ್ರಕರಣಗಳು, ಹಾಸನ ಗ್ರಾಮಾಂತರದಲ್ಲಿ 1 ಪ್ರಕರಣ, ಬೆಂಗಳೂರು ಜ್ಞಾನ ಭಾರತಿ ಠಾಣೆಯಲ್ಲಿ 1 ಪ್ರಕರಣ, ಹರೆಹಳ್ಳಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಬೆಳ್ತಂಗಡಿ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿರುವುದಾಗಿ ತನಿಖೆಯ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

ಆರೋಪಿಗಳು ಕಾರಿಂಜೇಶ್ವರ ದೇವಸ್ಥಾನ, ಶಿಶಿಲ ದೇವಸ್ಥಾನ, ಸೌತ್ತಡ್ಕ ಮಹಾಗಣಪತಿ ದೇವಸ್ಥಾನ, ಬಂದಾರು ಕೊರಗಜ್ಜ ದೈವಸ್ಥಾನ, ವೇಣೂರು ಮಹಾಲಿಂಗೇಶ್ವರ ದೇವಸ್ಥಾನ, ವೇಣೂರು ಜೈನ ಬಸದಿ, ಸೂಡಾ ಮಹಾಗಣಪತಿ ದೇವಸ್ಥಾನ, ಪಡುಬಿದ್ರೆ ದುರ್ಗಾಪರಮೇಶ್ವರಿ ದೇವಸ್ಥಾನ, ಕಾರ್ಕಳ ರಕ್ತೇಶ್ವರಿ ದೇವಸ್ಥಾನ, ಅಡೆಂಜ ಶ್ರೀ ಮಹಾಗಣಪತಿ ದೇವಸ್ಥಾನ, ದುರ್ಗಾಪರಮೇಶ್ವರಿ ದೇವಸ್ಥಾನ, ಇಚಿಲಂಪಾಡಿ ಚರ್ಚ್, ನೆಲ್ಯಾಡಿ ಚರ್ಚ್, ಕೋಣಾಲು ಚರ್ಚ್, ಮಡಂತ್ಯಾರು ಸೆರ್ಕಟ್ ಹಾರ್ಟ್ ಸ್ಕೂಲ್, ಬಳಂಜ ಸ್ಕೂಲ್, ಕಾರ್ಕಳ ಬೋರ್ಡ್ ಸ್ಕೂಲ್, ಬಳಂಜ ಸೊಸೈಟಿ, ಕಲ್ಮಂಜ ಸೊಸೈಟಿ, ಮೂಡಿಗೆರೆ ಚೀಕನಹಳ್ಳಿ ಸೋಸೈಟಿ ಯಲ್ಲಿ ಕಳ್ಳತನ ಮಾಡಿದ ಹಾಗೂ ಉಜಿರೆ ಪೆರ್ಲ ರಸ್ತೆಯಲ್ಲಿ ಒಂದು ಕೆ.ಟಿ.ಎಂ. ಡ್ಯೂಕ್ ಬೈಕ್, ಧರ್ಮಸ್ಥಳ ಗ್ರಾಮದ ನೀರಚಿಲುಮೆ ಬಳಿ ಒಂದು ಕೆ.ಟಿ.ಎಂ. ಡ್ಯೂಕ್ ಬೈಕ್, ಹಾಸನ ಬೇಲೂರು ರಸ್ತೆಯಲ್ಲಿ ಒಂದು ಬುಲೆಟ್, ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಒಂದು ಪಲ್ಸರ್ ಬೈಕ್ ಮತ್ತು ಬೆಂಗಳೂರಿನಲ್ಲಿ ಒಂದು ಪಲ್ಸರ್ ಬೈಕ್ ಕಳವು ಹಾಗೂ ತೆಂಕಕಾರಂದೂರು ಬಳಿ ಒಂದು ಪ್ರಾಯಸ್ಥ ಹೆಂಗಸಿನ ಕುತ್ತಿಗೆಯಿಂದ ಚಿನ್ನದ ಸರ , ನೆಲ್ಯಾಡಿ ಬಳಿ ಒಂದು ಹೆಂಗಸಿನ ಮಾಂಗಲ್ಯ ಸರ ಮತ್ತು ಹವಳದ ಸರವನ್ನು ದೋಚಿಕೊಂಡು ಹೋದ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದು ತನಿಖೆಯ ವೇಳೆ ತಪ್ಪೋಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬುಲೆಟ್, ಕೆಟಿಎಂ ಡ್ಯೂಕ್, ಪಲ್ಸ್‌ರ್ ಬೈಕ್ ಸೇರಿಂತೆ 5 ಬೈಕ್‌ಗಳು, ಚಿನ್ನದ ಸರ, ಚಿನ್ನದ ಕೈಬಳೆಗಳು, ಚಿನ್ನದ ಕರಿಮಣಿ ಸರ, ಮಕ್ಕಳ ಬೆಳ್ಳಿಯ ಸೊಂಟದ ನೂಲು, ಬೆಳ್ಳಿಯ ಗಂಧ ಹಾಕುವ ಚಿಕ್ಕ ತಟ್ಟೆ, ಬೆಳ್ಳಿಯ ತೀರ್ಥ ಕವುಳಿಗೆ, ಇನ್ ವರ್ಟರ್ ಬ್ಯಾಟರಿ, ಪೆನ್ ಡ್ರೈವ್ ಹಣ ಎಣಿಸುವ ಎಣಿಕೆ ಯಂತ್ರ, ಮೊಬೈಲ್‌ಗಳು, ಎಲ್.ಸಿ.ಡಿ.ಗಳು, ಟ್ಯಾಬ್, ಶಾಲಾ ಬ್ಯಾಗ್‌ಗಳು, ಜರ್ಕಿನ್ಗಳು, ಜಾಕೆಟ್, ಶರ್ಟ್-ಪ್ಯಾಂಟ್‌ಗಳು, ಲಗೇಜ್ ಬ್ಯಾಗ್, ಏಸು ದೇವರ ಮರದ ಮೂರ್ತಿ, ಕಬ್ಬಿಣದ ಲಿವರ್, ಕಟ್ಟಿಂಗ್ ಪ್ಲೇಯರ್, ಹ್ಯಾಂಡಲ್ ಇರುವ ಸುತ್ತಿಗೆ ಹಾಗೂ ಲಿವರ್ , ಸ್ಕ್ರೂ ಡ್ರವರ್, ನಗದು, ಪ್ರಿಸ್ಟೇಜ್ ಇಂಡೆಕ್ಸ್ ಸ್ಟವ್ ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ದ.ಕ. ಜಿಲ್ಲಾ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಬಂಟ್ವಾಳ ಎಎಸ್‌ಪಿ ಡಾ.ಅರುಣ್ ಕುಮಾರ್ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಎಸ್‌ಐ ರವಿ ಬಿ.ಎಸ್ ನೇತೃತ್ವದಲ್ಲಿ ಎಎಸ್‌ಐ ದೇವಪ್ಪ, ಸಿಬ್ಬಂದಿಗಳಾದ ಪ್ರವೀಣ್ ಎಂ., ರಾಜೇಶ್, ವೆಂಕಟೇಶ್, ಪ್ರಮೋದ್, ಪ್ರಸನ್ನ, ಲತೀಫ್, ಪೌಲೋಸ್, ಚಾಲಕ ನವಾಝ್ ಬುಡ್ಕಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News