ಹೆಜಮಾಡಿ: ನೂತನ ಕಿರು ಸೇತುವೆ ಉದ್ಘಾಟನೆ
ಪಡುಬಿದ್ರೆ, ಜು. 30: ಹೆಜಮಾಡಿಯ ಹಳೆ ಎಮ್ಬಿಸಿ ಒಳ ರಸ್ತೆಯ ನೂತನ ಕಿರು ಸೇತುವೆಯನ್ನು ರವಿವಾರ ಶಾಸಕ ವಿನಯಕುಮಾರ್ ಸೊರಕೆ ಉದ್ಘಾಟಿಸಿದರು.
ಹೆಜಮಾಡಿ ಟೋಲ್ ತಪ್ಪಿಸಿ ನೂರಾರು ಘನವಾಹನಗಳು ಹೆಜಮಾಡಿಯ ನಿರಂತರ ಚಲಿಸಿದ ಪರಿಣಾಮ ಹಳೆ ಕಾಲದ ಕಿರು ಸೇತುವೆ ಕುಸಿದು ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆಯಾಗಿತ್ತು. ತ್ವರಿತವಾಗಿ ಸ್ಪಂದಿಸಿದ ಶಾಸಕ ಸೊರಕೆಯವರು ಘಟನೆ ನಡೆದ ದಿನದಂದೇ ಇಂಜಿನಿಯರ್ಗಳನ್ನು ಕರೆಸಿ ತ್ವರಿತ ಸೇತುವೆ ನಿರ್ಮಾಣಕ್ಕೆ ಸೂಚಿಸಿದ್ದರು. ಅದರಂತೆ ಸುಮಾರು 10 ಲಕ್ಷ ರೂ ವೆಚ್ಚದ ಸೇತುವೆಯನ್ನು ನಿರ್ಮಿಸಲಾಗಿದ್ದು, ರವಿವಾರದಿಂದಲೇ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಈ ಸಂದರ್ಭ ಮಾತನಾಡಿದ ಸೊರಕೆ, ಹೆಜಮಾಡಿಯ ಒಳರಸ್ತೆಯಲ್ಲಿ ಟೋಲ್ ತಪ್ಪಿಸಿ ಬರುವ ಘನ ವಾಹನಗಳನ್ನು ಇಂದಿನಿಂದಲೇ ನಿಷೇಧಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಸಂಬಂಧಿತ ಇಲಾಖೆಗೆ ಸೂಚನೆ ನೀಡಲಾಗಿದೆ. ಲಘು ವಾಹನ ಸಹಿತ ಸರ್ವಿಸ್ ಬಸ್ ಗಳಿಗೆ ಮಾತ್ರ ಒಳ ಪ್ರವೇಶಕ್ಕೆ ಅನುಮತಿ ನೀಡಲಾಗುವುದು.
ಘನ ವಾಹನಗಳ ಸಂಚಾರದಿಂದ ಹದಗೆಟ್ಟಿರುವ ಹೆಜಮಾಡಿಯ ಒಳ ರಸ್ತೆಗಳ ಅಭಿವೃದ್ಧಿಗೆ ಜಿಲ್ಲಾ ಪಂಚಾಯ್ತಿ ನಿಧಿ ಬಳಸಲಾಗುವುದು. ಅದೇ ರೀತಿ ಹೆಜಮಾಡಿ, ಕಾಪು, ಪಡುಬಿದ್ರೆ ಮತ್ತು ಕಟಪಾಡಿಯ ಹಳೆ ಎಮ್ಬಿಸಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭ ತಾಲ್ಲೂಕು ಪಂ. ಸದಸ್ಯೆ ರೇಣುಕಾ ಪುತ್ರನ್, ಮುಖಂಡರುಗಳಾದ ಸುಧೀರ್ ಕರ್ಕೇರ, ದೊಂಬ ಪೂಜಾರಿ, ಶಿವರಾಮ ಶೆಟ್ಟಿ, ಜಯಶ್ರೀ, ಅಬ್ದುಲ್ ರಹಿಮಾನ್ ಪುತ್ತು, ವಿಕ್ರಮ್ರಾಜ್, ತೇಜಪಾಲ್ ಸುವರ್ಣ, ಕೇಶವ ಸಾಲ್ಯಾನ್, ವಸಂತ ಹೆಜ್ಮಾಡಿ, ಸುಭಾಸ್ ಸಾಲ್ಯಾನ್, ಗುತ್ತಿಗೆಗಾರ ಎಚ್ಎಸ್ ಮುಹಮ್ಮದ್ ಅಲಿ ಮತ್ತಿತರರು ಉಪಸ್ಥಿತರಿದ್ದರು.